ಬೆಂಗಳೂರು: ಗೋಹತ್ಯೆ ನಿಷೇಧದ ಕಾನೂನನ್ನು ವಾಪಸ್ ಪಡೆಯಬೇಕು; ಕರ್ನಾಟಕದಲ್ಲಿ ಗೋಹತ್ಯೆಗೆ ಅವಕಾಶ ಕೊಡಬೇಕು, ಹಲಾಲ್ ವ್ಯಾಪಾರಕ್ಕೆ ಅವಕಾಶ ಕೊಡಲು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಟ್ವೀಟ್ ಮೂಲಕ ಒತ್ತಾಯಿಸಿದೆ. ಭಾರತದ ಆಂತರಿಕ ವಿಚಾರಕ್ಕೆ ಕೈಹಾಕಿದ, ಭಾರತ ವಿರೋಧಿ ಅಮ್ನೆಸ್ಟಿಯ ಧೋರಣೆಯನ್ನು ಖಂಡಿಸುವುದಾಗಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ನೆಸ್ಟಿ, ಕಾಂಗ್ರೆಸ್ ಜನಾದೇಶದ ಹಿನ್ನೆಲೆಯಲ್ಲಿ ದ್ವೇಷಪೂರ್ವಕ ನಡವಳಿಕೆಯನ್ನು ಮುಂದುವರಿಸುವ ಕೆಲಸ ಮಾಡಿದೆ. ಕರ್ನಾಟಕ, ಭಾರತ ಮತ್ತು ಬಹುಸಂಖ್ಯಾತರ ವಿಚಾರದಲ್ಲಿ ಅಮ್ನೆಸ್ಟಿ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ. ಇದಕ್ಕೆ ಅತ್ಯುಗ್ರವಾದ ಹೋರಾಟ ಮಾಡಲಿದ್ದೇವೆ. ಸರಕಾರಕ್ಕೂ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಸಂವಿಧಾನ ಮೀರಿ, ಸ್ವಾಯತ್ತ ರಾಜ್ಯ ಎಂದು ಭಾವಿಸಿದರೆ ಅದು ಮೂರ್ಖತನ. ಬಿಜೆಪಿ ಎಚ್ಚರಿಕೆಯನ್ನು ಕೊಡುತ್ತದೆ; ಇಂಥ ದುಸ್ಸಾಹಸವನ್ನು ಜನರು ಸಹಿಸುವುದಿಲ್ಲ ಎಂದು ಹೇಳಿದರು.