“ಬಿಲ್ಲವಾಸ್ ಕತಾರ್” ಒಂದು ಕ್ರಿಯಾಶೀಲ ಸಂಸ್ಥೆಯಾಗಿದ್ದು, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಭಾರತೀಯ ಸಾಂಸ್ಕೃತಿಕ ಕೇಂದ್ರ – ಕತಾರ್” (ಐಸಿಸಿ -ಕತಾರ್)ನ ಸಹವರ್ತಿ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಉಲ್ಲೇಖನೀಯ.
“ಬಿಲ್ಲವಾಸ್ ಕತಾರ್”, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಉತ್ತೇಜನವನ್ನು ಕೊಡುವುದಕ್ಕೆ ಸಮರ್ಪಕವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟು ನಮ್ಮ ತಾಯ್ನಾಡಿನ ಕಂಪನ್ನು ವಿಶೇಷವಾಗಿ ಯುವಜನರಿಗೆ ತಲುಪಿಸುವಲ್ಲಿ ಸದಾ ಶ್ರಮಿಸುತ್ತಿದೆ.
ಜನವರಿ, 25ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಲ್ಲವಾಸ್ ಕತಾರ್ 2024-25 ಸಾಲಿನ ಹೊಸ ನಿರ್ವಹಣಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಂದೀಪ್ ಮಲ್ಲಾರ್ ಅವರು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅಪರ್ಣಾ ಶರತ್ ಉಪಾಧ್ಯಕ್ಷರಾಗಿ, ಮಹೇಶ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಸಂದೀಪ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಅಜಯ್ ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪೂಜಾ ಜಿತಿನ್, ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ವೇತಾ ಸುವರ್ಣ, ಸದಸ್ಯತ್ವ ಸಂಯೋಜಕರಾಗಿ ಚಂಚಲಾಕ್ಷಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಸೀಮಾ ಉಮೇಶ್ ಪೂಜಾರಿ, ಮಾಧ್ಯಮ ಸಂಯೋಜಕರಾಗಿ ನಿತಿನ್ ಸನಿಲ್, ಸರಬರಾಜು(ಲಾಜಿಸ್ಟಿಕ್ಸ್) ಸಂಯೋಜಕರಾಗಿ ನಿತಿನ್ ಕುಂಪಲ ಅವರು ಆಯ್ಕೆಯಾದರು.
ನಿಕಟ ಪೂರ್ವ ಅಧ್ಯಕ್ಷ ರಘುನಾಥ್ ಅಂಚನ್ ಅವರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.