ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ, ನಂತರ ಟೋಲ್ ಸಂಗ್ರಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರ್ಜ್ ಫರ್ನಾಡೀಸ್ ಅವರು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ದಶಪಥ ರಸ್ತೆ ಮಾಡಲು ಮುಂದಾಗಿದ್ದು, ನಂತರ ಈಗ ಅದನ್ನು ಬಿಜೆಪಿ ಸರ್ಕಾರದ ಯೋಜನೆ ಎನ್ನುತ್ತಿದ್ದೀರಿ. ಈಗ ಈ ರಸ್ತೆಯಲ್ಲಿ ಸಂಚಾರ ಮಾಡಲು 250 ರೂ. ಟೋಲ್ ನೀಡಬೇಕು ಎಂದು ಹೇಳುತ್ತಿದ್ದೀರಿ. ನಮಗೆ ಹೆದ್ದಾರಿ ಬೇಡ, ನಾವು 3 ತಾಸಿನಲ್ಲೇ ಮೈಸೂರು ಸೇರುತ್ತೇವೆ ಎನ್ನುವವರಿಗೆ ಸರ್ವೀಸ್ ರಸ್ತೆ ನೀಡಬೇಕು ಎಂದರು.
ಹೆದ್ದಾರಿ ಅಂದ ಮೇಲೆ ಸರ್ವೀಸ್ ರಸ್ತೆ ಇರಬೇಕು. ಆದರೆ ಸರ್ವೀಸ್ ರಸ್ತೆಯೇ ಇಲ್ಲವಲ್ಲ ಯಾಕೆ? ಎಂದು ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ಡಿಕೆಶಿ, ಈ ಬಗ್ಗೆ ಶ್ರೀನಿವಾಸ್ ಪ್ರಸಾದ್, ಬೇರೆ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನೀವು ಮೊದಲು ಪರ್ಯಾಯ ದಾರಿ ಕೊಟ್ಟು ನಂತರ ಟೋಲ್ ಸಂಗ್ರಹಿಸಬೇಕು. ಸರ್ವೀಸ್ ರಸ್ತೆ ನೀಡದೇ, ಟೋಲ್ ಸಂಗ್ರಹಿಸಿದರೆ ಹೇಗೆ. ಈ ಸರ್ಕಾರ ಪರ್ಯಾಯ ರಸ್ತೆ ಕೊಟ್ಟ ನಂತರ ಟೋಲ್ ಸಂಗ್ರಹಿಸಬೇಕು. ಅಲ್ಲಿಯವರೆಗೂ ಟೋಲ್ ಸಂಗ್ರಹಿಸುವಂತಿಲ್ಲ. ಒಂದು ವೇಳೆ ಸಂಗ್ರಹಿಸಿದರೆ ಕಾಂಗ್ರೆಸ್ ಪಕ್ಷ ಜನರ ಪರವಾಗಿ ಹೋರಾಟ ಮಾಡಲಿದೆ ಎಂದು ಡಿಕೆಶಿ ತಿಳಿಸಿದರು.
ರಸ್ತೆ ಗುಣಮಟ್ಟ ಹೇಗಿದೆ, ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುವುದರ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆ ಬರುತ್ತಿದೆ ಎಂದು ಫೋಟೋ ಹಾಕಿಕೊಂಡು, ಸೆಲ್ಫೆ ತೆಗೆದುಕೊಂಡು ಪ್ರಚಾರ ಪಡೆದರು. ಪಡೆಯಲಿ ನಮ್ಮ ಅಭ್ಯಂತರವಿಲ್ಲ. ಅವರು ಯಾರನ್ನಾದರೂ ಕರೆಸಿ ರಸ್ತೆ ಉದ್ಘಾಟನೆ ಮಾಡಲಿ. ಆದರೆ ಜನರಿಗೆ ಪರ್ಯಾಯ ರಸ್ತೆ ಕೊಟ್ಟ ನಂತರ ಟೋಲ್ ಸಂಗ್ರಹಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಈ ರಸ್ತೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿದ ಪರಿಣಾಮ ಸುಮಾರು 10 ಸಾವಿರ ಉದ್ಯೋಗ ನಷ್ಟವಾಗಿದೆ. ಈ ರಸ್ತೆ ಬೇಕು ನಿಜ. ಆದರೆ ಉದ್ಯೋಗಕ್ಕೆ ಧಕ್ಕೆ ಬಾರದಂತೆ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಲ್ಲವೇ? ಇನ್ನು ಪ್ರಧಾನಿಗಳು ಮೈಸೂರನ್ನು ಪ್ಯಾರೀಸ್ ಮಾಡುತ್ತೇನೆ ಎಂದಿದ್ದರು. ನಾನು ಅವರಿಗೆ ಕೈಮುಗಿದು ಕೇಳಿಕೊಳ್ಳುವುದು ಒಂದೆ ನಮಗೆ ಪ್ಯಾರೀಸ್ ನಗರ ಬೇಡ, ಪ್ಯಾರೀಸ್ ಮಾದರಿಯ ರಸ್ತೆ ಮಾಡಿಸಿ ಸಾಕು ಎಂದವರು ಹೇಳಿದರು.
ಈ ಸರ್ಕಾರ ವಚನಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ, ಯುವಕರಿಗೆ ಉದ್ಯೋಗ ನೀಡುವುದರಿಂದ ಪ್ರತಿ ಹಂತದಲ್ಲೂ ವಿಫಲವಾಗಿದೆ. ಮೈಸೂರು ಸಂಸದರು ವಿವಿ ಉಪಕುಲಪತಿಗಳ ನೇಮಕಾತಿಗೆ ಕನಿಷ್ಠ 5 ಕೋಟಿ ಲಂಚ ನೀಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಯ ಯಾರೂ ಉತ್ತರ ನೀಡುತ್ತಿಲ್ಲ ಎಂದ ಡಿಕೆಶಿ, ಇನ್ನು 45 ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ 141 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದರು.