ಬೆಂಗಳೂರು: ಬೆಂಗಳೂರಿನಾದ್ಯಂತ 1,400ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಮತ್ತು ವಿಲ್ಲಾ ನಿವಾಸಿ ಕಲ್ಯಾಣ ಸಂಘಗಳನ್ನು (RWAs) ಪ್ರತಿನಿಧಿಸುವ ಬೆಂಗಳೂರು ಅಪಾರ್ಟ್ಮೆಂಟ್ ಫೆಡೆರೇಷನ್ (BAF), ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಿದ್ದಪಡಿಸಲಾಗಿರುವಂತಹ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಕಾನೂನನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
3,50,000ಕ್ಕೂ ಹೆಚ್ಚು ಕುಟುಂಬಗಳು ಮತ್ತು ಸುಮಾರು ಒಂದೂವರೆ ದಶಲಕ್ಷ (15 ಲಕ್ಷ) ನಾಗರಿಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ BAF, ದೀರ್ಘಕಾಲದಿಂದ ಬಾಕಿ ಇರುವ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ 1972 ಅನ್ನು ನವೀಕರಿಸಿ, ಸಮಗ್ರ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ (KAOMA) ಅನ್ನು ಜಾರಿಗೆ ತರಲು ಒತ್ತಾಯಿಸಿದೆ.
BAF ಅಧ್ಯಕ್ಷ ಸತೀಶ್ ಮಲ್ಯ ಅವರು ಮಾತನಾಡಿ, “ಅಪಾರ್ಟ್ಮೆಂಟ್ ಮಾಲೀಕರಿಗೆ ಸಮಗ್ರ ಕಾನೂನು ಚೌಕಟ್ಟನ್ನು ಜಾರಿಗೊಳಿಸುವುದು BAF ನ ಹಲವು ವರ್ಷಗಳ ಮುಖ್ಯ ಬೇಡಿಕೆಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಮುಖ ಬದ್ಧತೆಯಾಗಿ ಸೇರಿಸಿದ್ದವು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ. ಈ ವರ್ಷ ಮುಖ್ಯಮಂತ್ರಿಗಳು ತಮ್ಮ ಅವಧಿಯ ಎರಡನೇ ಬಜೆಟ್ ಮಂಡಿಸುತ್ತಿದ್ದಾರೆ. ಈ ಹಂತದಲ್ಲಿ ಇದು ಕೇವಲ ವಿನಂತಿಯಾಗಿ ಉಳಿದಿಲ್ಲ, ಇದು ಈಗ ನಮ್ಮ ಬೇಡಿಕೆಯಾಗಿದೆ. ಈ ವಿಳಂಬ, ಕಾನೂನಿನ ಸ್ಪಷ್ಟತೆಯ ಕೊರತೆ ಮತ್ತು ವ್ಯಾಜ್ಯಗಳಿಂದಾಗಿ ಲಕ್ಷಾಂತರ ಮನೆ ಮಾಲೀಕರು ಈಗಾಗಲೇ ತೊಂದರೆಗೀಡಾಗಿದ್ದಾರೆ, ಎಂದರು.
ಹೊಸ ಕಾಯ್ದೆಯಲ್ಲಿ ಸೇರಿಸಬೇಕಾದ ಪ್ರಮುಖ ಅಂಶಗಳು:
BAF ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ವಿವರವಾದ ಪ್ರಸ್ತಾವನೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಸ ಕಾನೂನಿನಲ್ಲಿ ಅಳವಡಿಸಲು ಸಲಹೆ ನೀಡಿದೆ:
- ಆಸ್ತಿ ಹಕ್ಕುಗಳ ವರ್ಗಾವಣೆ ಮತ್ತು ಮಾಲೀಕತ್ವ: ಬಿಲ್ಡರ್/ಪ್ರವರ್ತಕರಿಂದ ಅಪಾರ್ಟ್ಮೆಂಟ್ ಮಾಲೀಕರಿಗೆ ಆಸ್ತಿ ಹಕ್ಕುಗಳ ವರ್ಗಾವಣೆ (Conveyance), ಅವಿಭಜಿತ ಪಾಲು (UDS) ಮತ್ತು ಆಸ್ತಿಯ ಉತ್ತರಾಧಿಕಾರ ಕುರಿತು ಸ್ಪಷ್ಟತೆ.
- ಮಾಲೀಕರ ಸಂಘಗಳ ನಿರ್ವಹಣೆ: ಅಪಾರ್ಟ್ಮೆಂಟ್ ಮಾಲೀಕರ ಸಂಘದ ರಚನೆ, ನೋಂದಣಿ, ಉಪ-ಕಾನೂನುಗಳ ಜಾರಿಗೊಳಿಸುವ ಸಾಮರ್ಥ್ಯ, ಸಾಮಾನ್ಯ ಪ್ರದೇಶಗಳ ನಿರ್ವಹಣೆ ಮತ್ತು ನಿಧಿಗಳ ಬಳಕೆ.
- ವಿವಾದ ಇತ್ಯರ್ಥ ಮತ್ತು ಸಮರ್ಥ ಪ್ರಾಧಿಕಾರ: ವಿವಾದ ಇತ್ಯರ್ಥಕ್ಕೆ ಸ್ಪಷ್ಟ ಯಾಂತ್ರಿಕ ವ್ಯವಸ್ಥೆ ಮತ್ತು ಸೂಕ್ತ ಪ್ರಾಧಿಕಾರದ ವ್ಯಾಖ್ಯಾನ.
- ಪುನರಾಭಿವೃದ್ಧಿ (Redevelopment): ಹಳೆಯ ಕಟ್ಟಡಗಳ ಪುನರಾಭಿವೃದ್ಧಿ ಮತ್ತು ವಿಲೀನದಂತಹ ಆಧುನಿಕ ವಸತಿ ಅಗತ್ಯಗಳಿಗೆ ಅವಕಾಶ.
- ಏಕೀಕೃತ ಆಡಳಿತ: ಬಹು ಕಾಯ್ದೆಗಳ ಬದಲಾಗಿ, ಏಕೈಕ, ಸಮಗ್ರ ಕಾಯ್ದೆಯ (KAOMA) ಮೂಲಕ ಆಡಳಿತದ ಮಾನದಂಡಗಳನ್ನು ಬಲಪಡಿಸುವುದು.
BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಮಾತನಾಡಿ, “ಹೊಸ ಕಾನೂನನ್ನು ರಚಿಸಲಾಗುತ್ತಿದ್ದು, ಸದ್ಯದಲ್ಲೇ ಅದನ್ನು ಸದನದಲ್ಲಿ ಮಂಡಿಸಲಾಗುವುದು ಎಂದು ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕಮಾರ್ ಅವರು ಸದನದಲ್ಲಿ ಉತ್ತರಿಸಿ ಸುಮಾರು ಎರಡು ವರ್ಷ ಕಳೆದಿದೆ. ಆಧುನಿಕ ಅಪಾರ್ಟ್ಮೆಂಟ್ಗಳ ಅಗತ್ಯಗಳನ್ನು ಪರಿಹರಿಸುವ ಈ ಹೊಸ ಕಾನೂನನ್ನು ಕೂಡಲೇ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಆಗ್ರಹಿಸಿದರು.
BAF ಖಜಾಂಚಿ ಶ್ರೀ ಕಿರಣ್ ಹೆಬ್ಬಾರ್ ಮಾತನಾಡಿ, “ಕಳೆದ ಕೆಲವು ವರ್ಷಗಳಿಂದ ನಮ್ಮ ಬೇಡಿಕೆಯನ್ನು ಬೆಂಬಲಿಸಿದ ಮತ್ತು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಭರವಸೆ ನೀಡಿದ ಎಲ್ಲಾ ಶಾಸಕರು ಮತ್ತು ಸಚಿವರಿಗೆ ನಾವು ಧನ್ಯವಾದ ಹೇಳುತ್ತೇವೆ. ಕರ್ನಾಟಕ ರಾಜ್ಯದ ಲಕ್ಷಾಂತರ ಮನೆ ಮಾಲೀಕರಿಗೆ ಸಹಾಯ ಮಾಡುವ ಹೊಸ ಕಾಯ್ದೆಯನ್ನ ಶೀಘ್ರದಲ್ಲಿ ಜಾರಿಗೊಳಿಸುವ ಮೂಲಕ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲಿ ಎನ್ನುವುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು.






















































