ಬೆಂಗಳೂರು: ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ಬರಬೇಕಾಗಿರುವ ರಾಜ್ಯ ಸರ್ಕಾರದ ಗೌರವಧನ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಆಗ್ರಹಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಘದ ಅಧ್ಯಕ್ಷ ಸೋಮಶೇಖರ್ ಯಾದಗಿರಿ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಏನಿದೆ?
ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ಬರಬೇಕಾಗಿರುವ ರಾಜ್ಯ ಸರ್ಕಾರದ ಗೌರವಧನ ಮತ್ತು ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಇನ್ನೂ ನೀಡದಿರುವುದಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ತೀವ್ರ ವಿಷಾದ ವ್ಯಕ್ತ ಪಡಿಸುತ್ತಿದೆ. ಕಳೆದ ಮೂರು ನಾಲ್ಕು ತಿಂಗಳಿಂದದ ಆಶಾ ಕಾರ್ಯಕರ್ತೆಯರು ನಿಷ್ಠೆಯಿಂದ ಬಿರು ಬಿಸಿಲಿಸಲ್ಲಿ ಇಲಾಖೆಯ ಕೆಲಸ ನಿರ್ವಹಿಸುತ್ತಿದ್ದು ಅವರ ಸೇವೆಗೆ ವೇತನ ನೀಡದೆ ಇಲಾಖೆ ಅವರನ್ನು ಕಷ್ಟಕ್ಕೆ ದೂಡಿರುತ್ತದೆ. ಒಂಟಿ ಮಹಿಳೆಯರು ಸೇರಿದಂತೆ ಬಹುತೇಕ ಆಶಾ ಕಾರ್ಯಕರ್ತೆಯರು ಈ ಕೆಲಸದಿಂದ ಜೀವನ ನಿರ್ವಹಿಸುತ್ತಿದ್ದು, ವೇತನ ಇಲ್ಲದೆ ಜೀವನ ನಡೆಸಲು ಕಷ್ಟ ಪಡುತ್ತಿರುವರು. ಅತ್ಯಂತ ತೊಂದರೆಯಲ್ಲಿ ಇದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಇಲಾಖೆಯ ಮುಖ್ಯಸ್ಥರಿಗೆ ಸಂಘದಂದ ಕೂಡಲೇ ವೇತನ ಬಿಡುಗಡೆ ಮಾಡಲು ಹಲವಾರು ಬಾರಿ ಮೌಖಿಕವಾಗಿ ಮತ್ತು ವಿವಿಧ ಸಭೆಗಳಲ್ಲಿ ಮನವಿ ನೀಡಲಾಗಿತ್ತು. ಪ್ರತೀ ಬಾರಿ ಒಂದು ವಾರದಲ್ಲೇ ಗೌರವಧನ-ಪ್ರೋತ್ಸಾಹಧನ ಬಿಡುಗಡೆ ಆಗುವುದೆಂದು ಭರವಸೆಗಳನ್ನು ನೀಡುತ್ತಲೇ ಇರುವರು. ಆದರೆ 3-4 ತಿಂಗಳಿಂದ ಗೌರವಧನ ಬಿಡುಗಡೆ ಆಗಿಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಸಕಾಲದಲ್ಲಿ ಗೌರವಧನ ಸಿಗದೆ ಪರದಾಡುವಂತಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸರಣಿ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಡುವಲ್ಲಿ ಸಫಲವಾಗಿತ್ತು. ಇದೀಗ ಮತ್ತೆ ಆಶಾ ಕಾರ್ಯಕರ್ತೆಯರ ವೇತನ ಬಿಡುಗಡೆ ವಿಳಂಬವಾಗಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮತ್ತೆ ಅಖಾಡಕ್ಕೆ ಧುಮುಕಿದ್ದು, ಇದೀಗ ನೂತನ ಸರ್ಕಾರದ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ತೀವ್ರ ಕುತೂಹಲ ಕೆರಳಿಸಿದೆ.