ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಸಾಹಿತಿ ಅನಿಲ್ ಗುನ್ನಾಪುರ ಇವರ ‘ಸರ್ವೆ ನಂಬರ್ -97’ ಕಥಾ ಸಂಕಲನಕ್ಕೆ 2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಇವರು ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2016ರಲ್ಲಿ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಡನೆ “ಗುಬ್ಬಚ್ಚಿ ಗೂಡಿನಲ್ಲಿ” ಕವನಸಂಕಲನ ಪ್ರಕಟವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಥಾವಿಸ್ತೀರ್ಣದ ಬಗ್ಗೆ ಅಪರಿಮಿತ ಕುತೂಹಲಿ, ಬಿಸಿಲು ಬೆಳುದಿಂಗಳು ಸೀಮೆಯ ತವಕತಲ್ಲಣಗಳಲ್ಲಿ ಕಥೆಗಳನ್ನು ಹುಡುಕುತ್ತಿರುವವರು, ‘ಕಲ್ಲುಹೂವಿನ ನೆರಳು’ ಸಹೃದಯರ ಗಮನಸೆಳೆದಿರುವ, ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಅನಿಲ್ರ ಕಥಾಸಂಕಲನಕ್ಕೆ ರಾಜ್ಯಮಟ್ಟದ “ಪ್ರಾರ್ಥನಾ ಸಾಹಿತ್ಯ ಪುರಸ್ಕಾರ”, ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’, “ಸಂಗಂ ಸಾಹಿತ್ಯ ಪುರಸ್ಕಾರ” ಮತ್ತು “ಸಮೀರವಾಡಿ ದತ್ತಿ ನಿಧಿ” ಗೌರವ ಲಭಿಸಿದೆ.

2018ನೇ ಸಾಲಿನ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಕಾವ್ಯ ಸ್ಪರ್ಧೆಯಲ್ಲಿ ಇವರ ಕವಿತೆಗೆ ಕೂಡ ಬಹುಮಾನ ಲಭಿಸಿದೆ. ಪ್ರತಿಷ್ಠಿತ ಬುಕ್ ಬ್ರಹ್ಮ ಕಥಾ ಸ್ಪರ್ಧೆ, ಸಮಾಜಮುಖಿ ಕಥಾ ಸ್ಪರ್ಧೆ, ಸಂಗಾತ ಕಥಾ ಸ್ಪರ್ಧೆ ಹೀಗೆ ಹತ್ತು ಹಲವು ಕಥಾ ಸ್ಪರ್ಧೆಯಲ್ಲಿ ಇವರ ಕತೆಗಳು ಬಹುಮಾನ ಪಡೆದಿವೆ.
“ಕಲ್ಲು ಹೂವಿನ ನೆರಳು” ಕಥಾಸಂಕಲನದ “ಹುಚ್ಚಯ್ಯನ ಲೀಲೆ” ಕತೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿ.ಕಾಂ/ಬಿ.ಬಿ.ಎಂ, ದ್ವೀತಿಯ ಸೆಮಿಸ್ಟರ್ ವಿದ್ಯಾರ್ಥಿ/ನಿಯರಿಗೆ ಪಠ್ಯವಾಗಿದ್ದು ವಿಶೇಷ.
ಹಾಗೆಯೇ ಮಾರ್ಚ್-2024, ಮಯೂರ ಪತ್ರಿಕೆಯಲ್ಲಿ ಪ್ರಕಟವಾದ “ಲಿಂಗಾಯತ ಖಾನಾವಳಿ “ ಕತೆ ಕುವೆಂಪು ವಿಶ್ವವಿದ್ಯಾಲಯದ ಬಿ.ಬಿ.ಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ/ನಿಯರಿಗೆ ಪಠ್ಯವಾಗಿ ಆಯ್ಕೆಯಾಗಿದೆ.
ಸರ್ವೆ ನಂಬರ್-97 ಎರಡನೇ ಕಥಾಸಂಕಲನ. ಈ ಕೃತಿಗೆ ಬೀಳಗಿ ತಾಲೂಕಾ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಕೇರಿ ದತ್ತಿ ಪ್ರಶಸ್ತಿ ಮತ್ತು ಪ್ರತಿಷ್ಠಿತ 2024 ನೇ ಸಾಲಿನ ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಲಭಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2024ನೇ ಸಾಲಿನ ಬೋರಮ್ಮ ಗೋವಿಂದಪ್ಪ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಈಗ 2024ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ “ಸರ್ವೆ ನಂಬರ್ -97” ಕೃತಿಗೆ ಸಣ್ಣಕಥೆ ಪ್ರಕಾರದಲ್ಲಿ ವರ್ಷದ ಅತ್ಯುತ್ತಮ ಕೃತಿ ಎಂದು ಪ್ರಶಸ್ತಿ ಲಭಿಸಿದೆ.






















































