ಉಡುಪಿ: ಸಾಮಾಜಿಕ ಕೈಂಕರ್ಯದಲ್ಲಿ ಮಾದರಿ ಎಂಬಂತಿರುವ ಡಾ.ಗೋವಿಂದ ಬಾಬು ಪೂಜಾರಿ ಅವರು ಇದೀಗ ಮತ್ತೊಂದು ಸೇವೆ ಮೂಲಕ ಗಮನಸೆಳೆದಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ವಿಚಾರದತ್ತಲೂ ಚಿತ್ತ ಹರಿಸಿರುವ ಉದ್ಯಮಿಯೂ ಆದ ಡಾ.ಗೋವಿಂದ ಪೂಜಾರಿಯವರು, ಪ್ರಸ್ತುತ ಆರೋಗ್ಯ ಇಲಾಖೆಯ ಸಿಬ್ಬಂದಿ ವೇತನ ಹಾಗೂ ಇನ್ನಿತರ ಖರ್ಚುಗಳನ್ನು ಭರಿಸಲು ನಿರ್ಧರಿಸಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ವಾಹನಕ್ಕೆ ಸರಕಾರದಿಂದ ಸಿಬ್ಬಂದಿ ನೇಮಕವಾಗುವ ತನಕ ತಾತ್ಕಾಲಿಕವಾಗಿ ನೇಮಿಸುವ ಓರ್ವ ಚಾಲಕನ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಕನಿಷ್ಠ ಡಿಸೇಲ್ ವೆಚ್ಚವನ್ನು ಭರಿಸಲು ಗೋವಿಂದ ಬಾಬು ಪೂಜಾರಿ ನಿರ್ಧರಿಸಿದ್ದಾರೆ.
ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ನೀಡುವ ಸಂಬಂಧ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಬೈಂದೂರು ಅವರು ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ರೀತಿ ಸರಣಿ ಲೇಖನ ಬರೆದಿದ್ದರು. ಈ ಕುರಿತು ಗಮನಹರಿಸಿದ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಅವರು ಡಾ.ಗೋವಿಂದ ಬಾಬು ಪೂಜಾರಿ ನೇತೃತ್ವದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ಗೆ ಮನವಿ ಮಾಡಿ ಆಂಬ್ಯುಲೆನ್ಸ್ನ ಚಾಲಕನ ವೇತನ ಹಾಗೂ ಡೀಸೆಲ್ ವೆಚ್ಚ ಭರಿಸುವಂತೆ ಕೋರಿದ್ದರು. ಡಿಹೆಚ್ಓ ಅವರ ಮನವಿಗೆ ಸ್ಪಂಧಿಸಿದ ಪೂಜಾರಿಯವರು, ಚಾಲಕನ ಸಂಬಳ ಹಾಗೂ ಅಂಬ್ಯುಲೆನ್ಸ್ ಸಂಚಾರಕ್ಕೆ ಅಗತ್ಯವಿರುವ ಡಿಸೇಲ್ ವೆಚ್ಚವನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಭರಿಸುವ ಭರವಸೆ ನೀಡಿದ್ದಾರೆ. ಈ ಸಂಬಂಧದ ಒಪ್ಪಿಗೆ ಪತ್ರವನ್ನು ಡಿಹೆಚ್ಓ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ನಡುವೆ, ಅಗತ್ಯವಿದ್ದರೆ ಇನ್ನೋರ್ವ ಚಾಲಕನ ವೇತನ ನೀಡಲು ಟ್ರಸ್ಟ್ ಸಿದ್ಧವಿರುವುದಾಗಿಯೂ ಡಾ.ಗೋವಿಂದ ಬಾಬು ಪೂಜಾರಿ ಭರವಸೆ ನೀಡಿದ್ದಾರೆ.
ನಿರಂತರ ಸಾಮಾಜಿಕ ಸೇವೆ..
ರಾಜಕಾರಣಿಗಳನ್ನು ನಾಚಿಸುವಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಗೋವಿಂದ ಬಾಬು ಪೂಜಾರಿಯವರು, ಕೆಲವು ವರ್ಷಗಳಿಂದೀಚೆಗೆ ರಾಜ್ಯದ ವಿವಿಧೆಡೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಬಿರುಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಅನೇಕ ಹಳ್ಳಿಗಳಿಗೆ ಜೀವಜಲ ಹರಿಸಿದ ‘ಆಧುನಿಕ ಭಗೀರಥ’ನೆನಿಸಿದ್ದಾರೆ.
ಕೊರೋನಾ ಸಂಕಟ ಕಾಲದಲ್ಲಿ ಸಾವಿರಾರು ಮಂದಿಗೆ ಔಷಧಿ, ಅಗತ್ಯ ವಸ್ತುಗಳನ್ನೂ ನೀಡಿದ ಇವರು ಆಪತ್ಬಾಂಧವ ಎಂದು ಗುರುತಾಗಿದ್ದಾರೆ. ಕರಾವಳಿ ತೀರದಲ್ಲಿ ಚಂಡ ಮಾರುತದ ಹೊಡೆತಕ್ಕೊಳಗಾಗಿ ಮನೆ ಕಳೆದುಕೊಂಡ ನಿರ್ಗತಿಕರನೇಕರಿಗೆ ಸೂರು ಕಲ್ಪಿಸಿದ ಇವರ ನಡೆ ಕೂಡಾ ದೇಶದ ಗಮನಸೆಳೆದಿತ್ತು. ತಮ್ಮ, ತಮ್ಮ ಮಕ್ಕಳ ಹುಟ್ಟುಹಬ್ಬ ಸಂದರ್ಭದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟ ಕೀರ್ತಿ ಕೂಡಾ ಇವರದ್ದು.

ಬೆಂಗಳೂರಿನಲ್ಲಿ ಸ್ವಚ್ಚತೆಗಾಗಿ ದುಡಿಯುತ್ತಿರುವ ಸಾವಿರಾರು ಮಂದಿಗೆ ಅನ್ನ, ಆಹಾರ, ಆರೋಗ್ಯ ಭಾಗ್ಯದ ನೆರವು ನೀಡುತ್ತಿರುವ ಇವರು, ಸಾವಿರಾರು ಮಂದಿಗೆ ಶಿಕ್ಷಣ ನೆರವು, ವೈದ್ಯಕೀಯ ನೆರವು ನೀಡುವ ಮೂಲಕ ಸಾಮಾಜಿಕ ಕಳಕಳಿಯ ವಿಶೇಷ ವ್ಯಕ್ತಿಯಾಗಿ ಗಮನಸೆಳೆದಿದ್ದಾರೆ. ಗೋವಿಂದ ಬಾಬು ಪೂಜಾರಿಯವರ ಈ ನಿರಂತರ ಸಾಮಾಜ ಸೇವೆಯನ್ನು ಗಮನಿಸಿದ ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದು ಕೂಡಾ ಗಮನಾರ್ಹ.