ಬೆಂಗಳೂರು: ರಾಜ್ಯದಲ್ಲೀಗ ಸರಣಿ ಹಗರಣ ಬಯಲಾಗುತ್ತಲಿವೆ. ವಾಲ್ಮಿಕಿ ನಿಗಮದ ಬಹುಕೋಟಿ ಕರ್ಮಕಾಂಡದ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಬೆಳಕಿಗೆ ಬಂದಿರುವ ಮೂಡ ಹಗರಣ ಸಿದ್ದರಾಮಯ್ಯ ಸರ್ಕಾರವನ್ನು ಮುಜುಗರದ ಸನ್ನಿವೇಶಕ್ಕೆ ಕೊಂಡೊಯ್ದಿದೆ. ಅದರಲ್ಲೂ ಮೂಡಾ ಹಗರಣದಲ್ಲಿ ಸಿಎಂ ಕುಟುಂಬ ನಂಟಿನ ಆರೋಪ ಪ್ರತಿಧ್ವನಿಸಿರುವುದು ಕುತೂಹಲಕಾರಿ ಬೆಳವಣಿಗೆ.
ವಾಲ್ಮಿಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಸಿಎಂ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂದು ಒಕ್ಕಲಿಗ ಸಮುದಾಯದ ಸ್ವಾಮೀಜಿ ಮಾತನ್ಬು ಮುಂದಿಟ್ಟು ಕಾಂಗ್ರೆಸ್ ಶಾಸಕರ ಒಂದು ಗುಂಪು ತೆರೆಮರೆಯಲ್ಲಿ ಕಾರ್ಯಾಚರಿಸುವಂತಿದೆ. ಕಾಂಗ್ರೆಸ್ ಪಕ್ಷದಲ್ಲೇ ಸಿಎಂ ಬದಲಾವಣೆ ಕೂಗೆದ್ದಿರುವಾಗಲೇ ಮೂಡಾ ಹಗರಣದಲ್ಲೂ ಸಿದ್ದರಾಮಯ್ಯ ಕುಟುಂಬದ ನಂಟಿನ ಬಗ್ಗೆ ಹಿರಿಯ ಶಾಸಕ ಹೆಚ್.ವಿಶ್ವನಾಥ್ ಸಿಡಿಸಿರಿವ ಬಾಂಬ್ ರಾಜ್ಯ ರಾಜಕೀಯದಲ್ಲಿ ಭರ್ಜರಿ ಬೆಳವಣಿಗೆಗೆ ಮುನ್ನುಡಿ ಬರೆದಿದೆ..
ಮೂಡಾದಲ್ಲಿ ನಡೆಸಿರುವುದು ದೊಡ್ಡ ಹಗರಣ.; ಸಿ.ಟಿ.ರವಿ
ಮೂಡಾದಲ್ಲಿ ನಡೆಸಿರುವುದು ದೊಡ್ಡ ಹಗರಣ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ ಬಣ್ಣಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿರುವ ಸಿ.ಟಿ.ರವಿ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿಯಾಗಿದೆ. ನೂರಕ್ಕೆ ನೂರು ಲೂಟಿಯಾದ ಪ್ರಕರಣವಿದು. ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದೀಗ ಮೂಡಾದಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗಳ ಹಗರಣ ಆಗಿರುವ ಸಂಗತಿಯೂ ಬೆಳಕಿಗೆ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ನಡೆದ ಹಗರಣವಿದು ಎಂದ ಶಾಸಕ ರವಿ, ಒಂದು ವೇಳೆ ಚಾಲ್ರ್ಸ್ ಶೋಭರಾಜ್ ಬದುಕಿದ್ದರೆ ತನ್ನನ್ನು ಮೀರಿಸುವವರು ಕಾಂಗ್ರೆಸ್ಸಿಗರು ಎಂದು ಸರ್ಟಿಫಿಕೇಟ್ ಕೊಡುತ್ತಿದ್ದ ಎಂದು ವ್ಯಂಗ್ಯವಾಡಿದರು.
ಗಂಗಾ ಕಲ್ಯಾಣ ಬೋರ್ವೆಲ್ ಕೊರೆಯಲು 3,500 ರೂಪಾಯಿ ಲಂಚ, 50 ಲಕ್ಷ ರೂಪಾಯಿ ಲೈಸನ್ಸ್ ರಿನೀವಲ್ಗೆ ಇಲಾಖೆ ಸಚಿವರಿಗೆ ದುಡ್ಡು ಕೊಡಬೇಕಂತೆ. ಇದು ಕಾಂಗ್ರೆಸ್ಸಿನ ಸ್ಯಾಂಪಲ್ ಎಂದ ಸಿ.ಟಿ.ರವಿ, ಎಲ್ಲರೂ ಲೂಟಿಗೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಒಂದು ಪ್ಲಾನ್ಗೆ ಅನುಮತಿ ಕೊಡಲು ಫೀಸ್ ಅಲ್ಲದೆ ಹೆಚ್ಚುವರಿಯಾಗಿ ಒಂದು ಅಡಿಗೆ 100 ರೂಪಾಯಿ ಲಂಚ ಕೊಡಬೇಕಿದೆ. ಸೈಟ್ ನಿಮ್ಮದು, ನೀವು ಮನೆ ಕಟ್ಟುವವರು, ಸಾಲ ಪಡೆದವರೂ ನೀವೇ- ಇವರಿಗೆ ಅಡಿಗೆ 100 ರೂಪಾಯಿ ಲಂಚ ಕೊಡಬೇಕು. ಇದು ಈ ಸರ್ಕಾರದ ಪರಿಸ್ಥಿತಿ ಎಂದು ಟೀಕಿಸಿದರು.