“ಬೆಂಗಳೂರಿಗೆ ಬಂದಾಗ ತಿನ್ನೋಕೆ ಕಾಸು ಇರಲಿಲ್ಲ. ಬಡತನ ಕಿತ್ತು ತಿಂತಾ ಇತ್ತು. ಈಗ ಸದೃಢನಾಗಿದ್ದೇನೆ. ಸ್ಥಿತಿವಂತನಿದ್ದೇನೆ. ಹಾಗಾಗಿ ಜನಸೇವೆ ಮಾಡುತ್ತಿದ್ದೇನೆ..” ಇದು ನಟ ಜಿಮ್ ರವಿ ಅವರ ಮನದಾಳದ ಮಾತು.
📝 ನಟ ಜಿಮ್ ರವಿ ಜೊತೆ ಬೆಂಗಳೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿ ಸುನೀಲ್ ಸಿ. ನಡೆಸಿದ ಸಂದರ್ಶನದ ತುಣಕು ಇಂತಿದೆ.
ಕನ್ನಡಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆಯಾಗಿರುವ ನಟ ಹಾಗೂ ಬಾಡಿ ಬಿಲ್ಡರ್ ಜಿಮ್ ರವಿ ಅವರ ಬದುಕಿನ ಪುಟಗಳು ತೆರೆದಾಗ ಅದಕ್ಕೆ ಖುದ್ದಾಗಿ ಅವರೇ ಉತ್ತರವಾಗಿದ್ದು, ತುಂಬಾ ಮುಖ್ಯವಾದ ಸಂಗತಿ. ಮೂಲತಃ ಕೋಲಾರ ಜಿಲ್ಲೆಯವರಾಗಿರುವ ಇವರು ಚಿಕ್ಕಂದಿನಿಂದಲೇ ಕ್ರಿಯಾಶೀಲ ಮತ್ತು ಸೃಜನಶೀಲರಾಗಿದ್ದು, ತಮ್ಮ ಕನಸುಗಳ ಬೆನ್ನೇರಿ ಹೊರಟವರು. ಏರಿದ್ದು ಕೂಡಾ ಸಾಧನೆಯ ಶಿಖರ.
ತಮ್ಮ ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸದ ಬಗ್ಗೆ..?
‘ನಾನು ಒಬ್ಬ ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಕ್ಷೇತ್ರಗಳಿಂದ ಉನ್ನತ ಬಾಡಿ ಬಿಲ್ಡಿಂಗ್ ಸಂಸ್ಥೆಗಳು ಹಾಗೂ ಬೇರೆ ಬೇರೆ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದೆ. ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ರಾಜ್ಯ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ದಸರಾ ಪ್ರಶಸ್ತಿ, ಶ್ರೀ ಕೆಂಪೇಗೌಡ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳೂ ಸಿಕ್ಕಿವೆ. ಪ್ರಸ್ತುತ ಆದಾಯ ತೆರಿಗೆ ಇನ್ಸ್ ಪೆಕ್ಟರ್ (INCOME TAX INSPECTOR) ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ನಡುವೆ 150 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ ನಾಯಕ-ನಟನಾಗಿ ಮತ್ತು ಖಳ ನಾಯಕನಾಗಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ ನನ್ನ ಎಲ್ಲಾ ಸಾಧನೆಗಳಿಗೆ ಒಂದೇ ಗುರಿ ಸಾಧನೆ ಮಾಡಿರುವ ಉದ್ದೇಶದ ಹಿಂದೆ ನನ್ನ ಬಡತನ ಇತ್ತು ಕೆಸರಲ್ಲಿ ಕಮಲ ಹುಟ್ಟೋ ಹಾಗೆ ನನ್ನ ಸಾಧನೆಗೆ ನನ್ನ ಬಡತನ ಯಾವತ್ತೂ ಅಡ್ಡಿಯಾಗಿಲ್ಲ.
‘ಜಿಮ್ ರವಿ’ ಎಂಬ ಹೆಸರು ಬರಲು ಕಾರಣವೇನು?
ಎ.ವಿ.ರವಿ ಎಂಬುದು ಮೂಲ ಹೆಸರು. ಬಾಲ್ಯದಿಂದಲೂ ಬಾಸ್ಕೆಟ್ ಬಾಲ್, ಕ್ರಿಕೆಟ್, ಅಥ್ಲೆಟಿಕ್ಸ್, ಕಬ್ಬಡಿ, ಕುಸ್ತಿ, ವೇಟ್ ಲಿಫ್ಟಿಂಗ್ ಎಲ್ಲಾ ಕ್ರೀಡೆಗಳಲ್ಲಿ ಸಹ ಭಾಗವಹಿಸಿದ್ದೇನೆ. ಈ ಕ್ರೀಡಾ ಜೀವನದಲ್ಲಿ 300ಕ್ಕೂ ಹೆಚ್ಚು ಚಿನ್ನದ ಪದಕಗಳು ಬಂದಿದೆ. ಹಾಗೆಯೇ ದೇಹದಾರ್ಢ್ಯದಲ್ಲಿ 100ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಪಡೆದಿರುತ್ತೇನೆ. ಒಂದು ಜಿಮ್ ಆರಂಭಿಸಲು ಈ ಚಿನ್ನದ ಪದಕಗಳು ಹಾಗೂ ಮನೆಯ ಪತ್ರವನ್ನು ಅಡವಿಟ್ಟು ಕೆಎಫ್ಸಿಸಿ (KFCC) ಲೋನ್ ತಗೊಂಡಿದ್ದೇನೆ. ಬೆಂಗಳೂರಿನಲ್ಲಿ ಒಂದು ಜಿಮ್ ಪ್ರಾರಂಭ ಮಾಡಬೇಕು ಅನ್ಕೊಂಡು ಜಿಮ್ ಸ್ಥಾಪನೆ ಮಾಡಿದೆ. ನಂತರ ನಾನೇ ಕೋಚ್ ಮಾಡ್ತಿನಿ ನಾನೇ ಬಡ್ಡಿ ಹಣ ಕಟ್ಟುತ್ತಿದ್ದೇನೆ. ಹಾಗಾಗಿ ಇದು ನನ್ನ ಜಿಮ್ ಎಂದೇ ಗುರುತಾಗಿದೆ. ಅದರಿಂದಾಗಿ ನನ್ನನ್ನೂ ಜನ ಜಿಮ್ ರವಿ ಎಂದೇ ಕರೆಯಲಾರಂಭಿಸಿದರು.
ಚಲನಚಿತ್ರಗಳಲ್ಲಿ ಕಲಾವಿದರಾಗಿ ನಟಿಸಿದ್ದೀರಿ, ನಿಮ್ಮ ಜೀವನದಲ್ಲಿ ಪ್ರೇರಣೆ ಯಾವ ರೀತಿ ಇತ್ತು?
ನಾವು ಜೀವನದಲ್ಲಿ ಏನನ್ನಾದರೂ ಪಡೆಯಬೇಕೆಂದರೆ ಕಾಯಬೇಕು. ಸಿನಿಮಾದಲ್ಲಿ ಆಕ್ಟಿಂಗ್ ಮಾಡಬೇಕೆಂಬ ಆಸೆಯಿತ್ತು. ಅದಕ್ಕಾಗಿ ಬರೋಬ್ಬರಿ 10 ವರ್ಷಗಳ ಕಾಲ ಕಾದೆ. ನಂತರ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ತು.
ವಿಷ್ಣುವರ್ಧನ್ ಸರ್ ಜತೆ ನೀವು ಕಲಾವಿದರಾಗಿ ನಟಿಸಿದ್ದೀರಿ. ಅವರ ಜತೆ ನಿಮ್ಮ ಒಡನಾಟ ಹೇಗಿತ್ತು?
ವಿಷ್ಣು ಸರ್, ಅಂಬರೀಶ್ ಸರ್, ರಾಜಕುಮಾರ್ ಪಾರ್ವತಮ್ಮ ರವರನ್ನು ಹತ್ತಿರದಿಂದ ನೋಡಿದ್ದೀನಿ. ಇನ್ನೂ ಸಾಕಷ್ಟು ನಟರೊಂದಿಗೆ ನಟನೆ ಮಾಡಿದ್ದೀನಿ. ಅದೆಲ್ಲವೂ ಅದ್ಬುತ ಕ್ಷಣಗಳು. ಅವರೊಂದಿಗೆ ನಟಿಸಿರುವ ನಾನೇ ಪುಣ್ಯವಂತ. ವಿಷ್ಣು ಸರ್ ಜೊತೆ ಸೂರ್ಯವಂಶ ಸಿನಿಮಾದಲ್ಲಿ ನಟಿಸಿದ್ದೀನಿ. ವಿಷ್ಣು ಸರ್ ಈಗ ನಮ್ಮ ಜತೆ ಇರದೇ ಇರಬಹುದು. ಆದರೆ ಅವರು ಹಾಕಿ ಕೊಟ್ಟ ದಾರಿ- ನಡೆ-ನುಡಿಗಳು ಸದಾ ನಮ್ಮ ಜತೆಯಲ್ಲಿ ಇರುತ್ತವೆ.
ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದೀರಿ ಅದರ ಅನುಭವ ಹೇಗಿತ್ತು?
ಬಿಗ್ ಬಾಸ್ ಎನ್ನುವುದು ನಿಜ ಜೀವನದ ಒಂದು ನೈಜ ಘಟನೆಗಳು, ನಮ್ಮಲ್ಲಿರುವ ಮತ್ತೊಬ್ಬ ವ್ಯಕ್ತಿಯನ್ನು ಆಚೆಗೆ ತಂದು ನಮ್ಮಲ್ಲಿರುವ ಮತ್ತೊಂದು ಮುಖವನ್ನು ಕಳಚೋದೆ ಬಿಗ್ ಬಾಸ್ನ ಕೆಲಸವಾಗಿರುತ್ತದೆ. ಅದ್ಭುತ ಕಲ್ಪನೆಯ ಮನೆಯೇ ಬಿಗ್ ಬಾಸ್ ಆಗಿರುತ್ತದೆ. ಯಾರೇ ಆಸೆ ಆಮಿಷಗಳನ್ನು ಒಡ್ದಿದರೂ ಕೂಡ ನಮ್ಮ ತನವನ್ನು ಯಾವತ್ತು ಬಿಡಬಾರದು ನಮ್ಮತನವೇ ಶಾಶ್ವತ.
ಜಿಮ್ ರವಿಯವರ ಆಹಾರ ಮತ್ತು ಬಾಡಿ ಬಿಲ್ಡಿಂಗ್ ಬಗ್ಗೆ ಏನು ಹೇಳುತ್ತೀರಾ?
ಚಿಕನ್ ಬೇಕು ಮಟನ್ ಬೇಕು ಅಮೆರಿಕಾ ಫುಡ್ ಬೇಕು, ಜರ್ಮನಿ ಫುಡ್ ಬೇಕು ಆಸ್ಟ್ರೇಲಿಯಾ ಫುಡ್ ಬೇಕು ದಿನ ನಿತ್ಯ 100 ಮೊಟ್ಟೆ ಬೇಕು ಎಂಬ ಆಸೆ ಇತ್ತು. ತಿನ್ನುವಾಗ ಕಾಸು ಇರಲಿಲ್ಲ. ಆದರೆ, ಬಡತನ ಕಿತ್ತು ತಿಂತ ಇತ್ತು. ನೈಸರ್ಗಿಕ ಆಹಾರವನ್ನು ಸೇವಿಸುತ್ತೇನೆ, ದೇಹದಲ್ಲಿ ಶಕ್ತಿ ಇದ್ದಾಗ ದೇಹಕ್ಕೆ ದಂಡನೆ ಕೊಡಬೇಕು ಇಲ್ಲ ಅಂದರೆ ದೇಹಕ್ಕೆ ಶಕ್ತಿ ಹೋದಾಗ ದೇಹ ನಮ್ಮನ್ನು ದಂಡಿಸುತ್ತದೆ.
ಈಗಿನ ಹೆಚ್ಚು ಯುವಕರು ಜಿಮ್ ವರ್ಕ್ಔಟ್ (work out) ಮಾಡ್ತಾ ಇದ್ದಾರೆ ಅವರಿಗೆ ನಿಮ್ಮ ಕಿವಿ ಮಾತು?
ಡಾಕ್ಟರ್, ಎಂಜಿನಿಯರ್, ಪೊಲೀಸ್, ಉತ್ತಮ ರಾಜಕೀಯ ವ್ಯಕ್ತಿಯಾಗಿ ಏನೇ ಆದರೂ ಒಳ್ಳೆಯ ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಬೇಕು. ಕ್ರೀಡಾಪಟು ಆಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಆರೋಗ್ಯವಾಗಿ ಇದ್ದರೆ ನಾಡನ್ನು ಕಟ್ಟಬಹುದು. ಡ್ರಗ್ಸ್ ಅಥವಾ ಇನ್ನಿತರ ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ಎಂಬುದು ಯುವಕರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. ಡ್ರಗ್ಸ್ ಎಂಬುದು ಕ್ಷಣಿಕ ಸುಖ ಅಷ್ಟೇ.
ಅನ್ನಪೂರ್ಣೇಶ್ವರಿ ಮೆಸ್ ಮೂಲಕ ಬಡವರಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡುತ್ತಿದ್ದೀರಂತೆ..!
ಹೌದು, ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಒಂದು ಹೊತ್ತು ಊಟಕ್ಕೂ ಕಷ್ಟ ಇತ್ತು. ಆ ರೀತಿಯ ಪರಿಸ್ಥಿತಿ ಬಡಪಾಯಿಗಳಿಗೆ ಎದುರಾಗಬಾರದೆಂಬ ಕಾರಣಕ್ಕಾಗಿ ಶಕ್ತಿಯನುಸಾರ ಈಗ ಒಂದಷ್ಟು ಜನರಿಗೆ ಊಟ ಹಾಕ್ತಾ ಇದ್ದೇನೆ. ಸಮಾಜದಲ್ಲಿ ಪಡ್ಕೊಂಡಿದ್ದನ್ನು ಸಮಾಜಕ್ಕೆ ವಾಪಸ್ಸು ಕೊಡಬೇಕು ಎಂಬ ಹಿರಿಯರ ಮಾತಿನಂತೆ ಸ್ನೇಹಿತರ ಜೊತೆ ಸೇರಿಕೊಂಡು ‘ಅನ್ನಪೂರ್ಣೇಶ್ವರಿ ಮೆಸ್’ಮೂಲಕ ಈ ಕಾರ್ಯವನ್ನು ಮಾಡುತ್ತಿದ್ದೇವೆ.



























































ಈಗಿನ ಹೆಚ್ಚು ಯುವಕರು ಜಿಮ್ ವರ್ಕ್ಔಟ್ (work out) ಮಾಡ್ತಾ ಇದ್ದಾರೆ ಅವರಿಗೆ ನಿಮ್ಮ ಕಿವಿ ಮಾತು?