ಬೆಂಗಳೂರು: ಮನರೇಗ ಯೋಜನೆಯಲ್ಲಿ ಬದಲಾವಣೆ ತರುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಗ್ರಾಮೀಣ ಭಾಗದ ಆರ್ಥಿಕ ಭದ್ರತೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತ ಸರ್ಕಾರವು ಐತಿಹಾಸಿಕ ಪ್ರಮಾದವನ್ನು ಮಾಡಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೆಸರಿನಲ್ಲಿದ್ದ ಯೋಜನೆಯ ಹೆಸರನ್ನು ಬದಲಿಸಲಾಗಿದೆ. ಇಷ್ಟು ದಿನ ಬೇರೆ ಹೆಸರಿನಲ್ಲಿದ್ದ ಯೋಜನೆಗಳ ಹೆಸರನ್ನು ಮಹಾತ್ಮಾ ಗಾಂಧೀಜಿ ಹೆಸರಿಗೆ ಬದಲಿಸಲಾಗುತ್ತಿತ್ತು. ಭಾರತ ಸರ್ಕಾರವು ದೇಶದ ಗ್ರಾಮೀಣ ಭಾಗದ ಆರ್ಥಿಕ ಭದ್ರತೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಮನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಯೋಜನೆಯಾಗಿದ್ದು, ಇದು ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ಸಂವಿಧಾನಿಕವಾಗಿ ಉದ್ಯೋಗ ಖಾತರಿ ಹಕ್ಕನ್ನು ನೀಡಲಾಗಿತ್ತು. ಗ್ರಾಮೀಣ ಭಾಗದ ಬಡ ಕುಟುಂಬದ ವ್ಯಕ್ತಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವ ಖಾತರಿ ಯೋಜನೆ ಇದಾಗಿತ್ತು” ಎಂದರು.
“ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಏಕೈಕ ಆರ್ಥಿಕ ಜಾಲ ಎಂದರೆ ಮನರೇಗ ಯೋಜನೆಯ ಉದ್ಯೋಗ ಖಾತರಿ. ಮನರೇಗ ಯೋಜನೆಯನ್ನು ಸಂಸತ್ತಿನಲ್ಲಿ ಚರ್ಚೆ ಮಾಡದೇ, ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೇ, ಸ್ಥಾಯಿಸಮಿತಿಯ ಪರಾಮರ್ಶೆಗೂ ಅವಕಾಶ ನೀಡದೇ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಬದಲಾವಣೆ ಮಾಡಲಾಗಿದೆ. ಈ ಯೋಜನೆಯಲ್ಲಿ ಬದಲಾವಣೆ ತರಲು ಯಾರೋಬ್ಬರೂ ಪ್ರಸ್ತಾವನೆ, ಮನವಿ ನೀಡಿರಲಿಲ್ಲ. ಆದರೂ ಇದನ್ನು ಮಾಡಿರುವ ಹಿಂದೆ ರಾಷ್ಟ್ರಪಿತರಿಗೆ ಅಪಮಾನ ಮಾಡುವ ಉದ್ದೇಶ ಇದೆ. ಇದು ಬಡ ಜನರ ಜೀವನದ ಮೇಲಿನ ದಾಳಿಯಾಗಿದೆ” ಎಂದು ಹರಿಹಾಯ್ದರು.
“ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಯಾವ ರೀತಿ ಬದಲಾವಣೆ ತಂದಿದೆ ಎಂದರೆ, ಇಷ್ಟು ದಿನಗಳ ಕಾಲ ಈ ಯೋಜನೆ ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಆದರೆ ಈಗ ಇದನ್ನು ಕೇಂದ್ರೀಕೃತ ಯೋಜನೆಯಾಗಿ ಪರಿವರ್ತಿಸಿದ್ದು, ಕೇಂದ್ರ ಸರ್ಕಾರ ಎಲ್ಲಿ ಎಷ್ಟು ಕೆಲಸ ನಡೆಯಬೇಕು ಎಂದು ನಿರ್ಧಾರ ಮಾಡುವಂತಾಗಿದೆ. ಮಹಾತ್ಮ ಗಾಂಧಿ ಅವರು ಸ್ವರಾಜ್ಯ ಹಾಗೂ ಗ್ರಾಮ ಪಂಚಾಯಿತಿಗಳ ಮೇಲೆ ನಂಬಿಕೆ ಇಟ್ಟಿದ್ದವರು. ಆದರೆ ಈಗ ಕೇಂದ್ರ ಸರ್ಕಾರ ದೆಹಲಿಯಲ್ಲಿ ಕೂತು ಸ್ಥಳೀಯ ಸರ್ಕಾರ, ಪಂಚಾಯ್ತಿಗಳ ಆಯ್ಕೆಯನ್ನು ಮೀರಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಈ ಯೋಜನೆಯಲ್ಲಿ 90% ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು, ಉಳಿದ 10% ಅನುದಾನವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕಾಗಿತ್ತು. ಆದರೆ ಈಗ, ಈ ಯೋಜನೆಯಲ್ಲಿನ ಅನುದಾನದ ಪಾಲನ್ನು 60:40 ಅನುಪಾತಕ್ಕೆ ಪರಿವರ್ತಿಸಲಾಗಿದೆ. ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ತಮ್ಮ ಮೊದಲ ಭಾಷಣದಲ್ಲಿ ಈ ಯೋಜನೆಗೆ 50 ಸಾವಿರ ಕೋಟಿ ಮೀಸಲಿಟ್ಟಿತ್ತು. ಜೊತೆಗೆ ಈ ಯೋಜನೆ ಕಾಂಗ್ರೆಸ್ ಸರ್ಕಾರದ ಐತಿಹಾಸಿಕ ಪ್ರಮಾದ ಎಂದು ಹೇಳಿದ್ದರು. 11 ವರ್ಷಗಳ ಬಳಿಕ ಬಿಜೆಪಿ ಸರ್ಕಾರ ಈ ಯೋಜನೆ ನಿಲ್ಲಿಸಲು ಸಾಧ್ಯವಾಗಿಲ್ಲ. ಇನ್ನು ಈ ಯೋಜನೆಗೆ ತಂದಿರುವ ಬದಲಾವಣೆಯನ್ನು ಬಿಹಾರ ಚುನಾವಣೆ ಬಳಿಕ ಮಾಡುತ್ತಿದ್ದಾರೆ. ಬಿಹಾರ ಗ್ರಾಮೀಣ ಪ್ರದೇಶದ ರಾಜ್ಯವಾಗಿದ್ದು, ಮನರೇಗ ಯೋಜನೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಅವರು ಅರಿತಿದ್ದಾರೆ. ಹೀಗಾಗಿ ಅವರು ಚುನಾವಣೆಗೂ ಮುನ್ನ ಈ ಬದಲಾವಣೆ ತರಲಿಲ್ಲ” ಎಂದು ಹರಿಹಾಯ್ದರು.
“ಅತ್ಯಂತ ಶೋಷಿತ ವರ್ಗದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಈ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟವಾಗುತ್ತಿದೆ. ಕೇಂದ್ರ ಸರ್ಕಾರ ಕೆಲವು ಉದ್ಯಮಿಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಈ ಯೋಜನೆ ಜಾಗತಿಕವಾಗಿ ಪ್ರಶಂಸೆ ಪಡೆದಿತ್ತು. ಇಡೀ ವಿಶ್ವದಲ್ಲೇ ಬೇರೆ ಯಾವುದೇ ದೇಶದಲ್ಲಿ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನು ಜಾರಿಗೆ ತಂದಿರಲಿಲ್ಲ. ಈಗ ಅದನ್ನು ತೆಗೆದುಹಾಕಲಾಗಿದೆ. ಕೇಂದ್ರ ಸರ್ಕಾರ ತನ್ನ ತಪ್ಪನ್ನು ಮರೆಮಾಚಲು 100 ದಿನಗಳಿಂದ 125 ಉದ್ಯೋಗ ದಿನಗಳನ್ನು ಏರಿಕೆ ಮಾಡಲಾಗುತ್ತಿದೆ ಎಂದು ಬಿಂಬಿಸುತ್ತಿದ್ದಾರೆ” ಎಂದು ಟೀಕಿಸಿದರು.
“ನಾನು ರಾಜಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಸುಮಾರು 50 ಲಕ್ಷ ಮಾನವ ದಿನಗಳ ಉದ್ಯೋಗ ನೀಡಲಾಗಿತ್ತು. ಈಗ ಈ ಯೋಜನೆಯನ್ನು ಬದಲಿಸಲಾಗಿದೆ. ಯುಪಿಎ ಸರ್ಕಾರದಲ್ಲಿ ಜಾರಿಗೆ ತಂದಿದ್ದ ಯೋಜನೆಗಳ ಹೆಸರನ್ನು ಬದಲಾಯಿಸುವುದು ಈ ಸರ್ಕಾರದ ಮುಖ್ಯ ಗುರಿಯಾಗಿದೆ. ಸಾರ್ವಜನಿಕರು ಇದನ್ನು ಕಟುವಾಗಿ ವಿರೋಧಿಸಬೇಕು. ಕೇಂದ್ರ ಸರ್ಕಾರದ ಈ ನೀತಿಯನ್ನು ಹೇಗೆ ವಿರೋಧಿಸಬೇಕು ಎಂದು ಇದೇ 27ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಈ ಯೋಜನೆ 12-15 ಕೋಟಿ ಜನರಿಗೆ ನೆರವಾಗುತ್ತಿತ್ತು. ಈಗ ಕೇಂದ್ರದ ಈ ನಿರ್ಧಾರದಿಂದ ಗ್ರಾಮೀಣ ಭಾಗದ ಮೇಲೆ ಮತ್ತಷ್ಟು ಒತ್ತಡ ಹೆಚ್ಚಲಿದೆ. ಹೀಗಾಗಿ ಇದು ಖಂಡನೀಯ. ಕೇಂದ್ರದ ಈ ನೀತಿ ವಿರುದ್ಧ ಇಂಡಿಯಾ ಮೈತ್ರಿಕೂಟ ಸೇರಿದಂತೆ ಇಡೀ ಭಾರತ ದೇಶ ಒಟ್ಟಾಗಿ ವಿರೋಧ ಮಾಡಬೇಕು. ಈ ಬದಲಾವಣೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಸಾಧ್ಯವಾದಷ್ಟು ಒತ್ತಡ ಹಾಕಲಾಗುವುದು” ಎಂದು ತಿಳಿಸಿದರು.
“2014ರಿಂದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡಿಕೊಂಡು ಬಂದಿದೆ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಬಂದಿದೆ. ನ್ಯಾಯಾಲಯ ಈ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಇದರೊಂದಿಗೆ ಇಡಿ ಇಷ್ಟು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರ ಮೇಲೆ ಕೆಸರೆರೆಚುತ್ತಿರುವ ಬಗ್ಗೆ ಉತ್ತರ ನೀಡಬೇಕಾಗಿದೆ. ಇ.ಡಿ ದಾಖಲಿಸಿರುವ ಪ್ರಕರಣ ರಾಜಕೀಯ ಪ್ರೇರಿತವಾಗಿರುವ ಕಾರಣ ನ್ಯಾಯಾಲಯ ಈ ಪ್ರಕರಣವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನವನ್ನು ಇಡಿ ಮಾಡುತ್ತಿದೆ. ಕಳೆದ 11 ವರ್ಷಗಳಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರ ಈಗ ಉನ್ನತ ನ್ಯಾಯಾಲಯದ ಮೇಟ್ಟಿಲೇರಲು ಮುಂದಾಗಿದ್ದು, ಸರ್ಕಾರ ಇಲ್ಲಿಗೆ ನಿಲ್ಲಿಸುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ವ್ಯವಹಾರ ನಡೆಸಿಲ್ಲವಾದರೂ ಅವರನ್ನು ಆರೋಪದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ. ಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸುವ ಮೂಲಕ ದ್ವೇಷ ರಾಜಕಾರಣಕ್ಕೆ ಶಾಸ್ತಿ ಮಾಡಿದೆ, ಸತ್ಯಕ್ಕೆ ಜಯ ಸಿಕ್ಕಿದೆ” ಎಂದರು.
“ಕಳೆದ 11 ವರ್ಷಗಳ ಸುಳ್ಳು ಭರವಸೆ ಹಾಗೂ ಸುಳ್ಳು ಆರೋಪಗಳು ಈಗ ಜನರ ಮುಂದೆ ಅನಾವರಣಗೊಂಡಿದ್ದು, ಜನರು ಈಗ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ತಮ್ಮ ಮುಂದಿನ ಆಯ್ಕೆಗೆ ಪರಿಗಣಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಸಂಸತ್ತಿನ ಒಳಗೆ ಹಾಗೂ ಹೊರಗೆ ತಮ್ಮ ದಿಟ್ಟ ನಾಯಕತ್ವ ಪ್ರದರ್ಶಿಸುತ್ತಿದ್ದು, ಪಕ್ಷವನ್ನು ಮತ್ತೆ ಬಲಿಷ್ಠವಾಗಿ ನಿರ್ಮಿಸಲು ನಾವೆಲ್ಲರೂ ಬದ್ಧವಾಗಿದ್ದೇವೆ” ಎಂದು ತಿಳಿಸಿದರು.






















































