ಬೆಂಗಳೂರು: ರಾಜ್ಯದ ಗ್ರಾಮೀಣ ಜನರಲ್ಲಿ ಅಕ್ಷರದ ಪ್ರೀತಿ ಬೆಳೆಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಾರಿಗೆ ತಂದ ‘ಪುಸ್ತಕಗೂಡು’ ಅಭಿಯಾನವು ಯಶಸ್ವಿಯಾಗಿ ಮುಂದುವರೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಬಸ್ ನಿಲ್ದಾಣ, ಮಾರುಕಟ್ಟೆ ಮುಂತಾದ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಪುಸ್ತಕಗಳನ್ನು ಶೇಖರಿಸಿ ಇಡುವುದರಿಂದ ಸಾಮಾನ್ಯವಾಗಿ ಸಾರ್ವಜನಿಕರಲ್ಲಿ ಓದುವ ತವಕ ಹೆಚ್ಚುತ್ತದೆ. ಇದೀಗ ಕಲಬುರಗಿ ಜಿಲ್ಲೆ, ಚಿತ್ತಾಪೂರ ತಾಲ್ಲೂಕಿನ ದಿಗ್ಗಾಂವ ಗ್ರಾಮ ಪಂಚಾಯತಿಯ ಬಸ್ ನಿಲ್ದಾಣದಲ್ಲಿ ಸುಂದರ ಮತ್ತು ಸುಸಜ್ಜಿತ ‘ಪುಸ್ತಕ ಗೂಡು’ ಸ್ಥಾಪನೆಯಾಗಿದೆ.
ಈಗಾಗಲೇ ರಾಜ್ಯದ ಗ್ರಾಮೀಣ ಗ್ರಂಥಾಲಯಗಳನ್ನು ಡಿಜಿಟಲ್ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಿದ್ದು, ಗ್ರಾಮೀಣರ ಬೌದ್ಧಿಕ ವಿಕಸನಕ್ಕೆ ಅಗಾಧ ಕೊಡುಗೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ‘ಪುಸ್ತಕಗೂಡು’ ಯೋಜನೆ ಜನಸಾಮಾನ್ಯರಲ್ಲಿ ಓದಿನ ಅಭಿರುಚಿ ಬೆಳೆಸುತ್ತಿದೆ. ಯುವಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅಗತ್ಯವಾದ ಸೂಕ್ತ ಸವಲತ್ತುಗಳನ್ನು ಒದಗಿಸುವುದು ಹಾಗೂ ವಾತಾವರಣ ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ ಎಂದವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ಗ್ರಾಮೀಣ ಜನರಲ್ಲಿ ಅಕ್ಷರದ ಪ್ರೀತಿ ಬೆಳೆಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಜಾರಿಗೆ ತಂದ 'ಪುಸ್ತಕಗೂಡು' ಅಭಿಯಾನವು ಯಶಸ್ವಿಯಾಗಿ ಮುಂದುವರೆಯುತ್ತಿದೆ.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ಬಸ್ ನಿಲ್ದಾಣ, ಮಾರುಕಟ್ಟೆ ಮುಂತಾದ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ… pic.twitter.com/rncKXYdn9E
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 23, 2025