ದೋಹಾ: ಕತಾರ್ ರಾಜ್ಯದ ದೋಹಾ ಮೂಲದ ಸಮುದಾಯವಾದ ಕರ್ನಾಟಕ ಸಂಘ ಕತಾರ್ ತನ್ನ ರಚನೆಯ 25 ನೇ ವರ್ಷವನ್ನು ಪ್ರವೇಶಿಸಿದೆ, ಈ ವರ್ಷಾಚರಣೆಯ ಪ್ರಥಮ ಕಾರ್ಯಕ್ರಮ “ವಸಂತೋತ್ಸವ – 2024” ಹೆಸರಲ್ಲಿ ಶುಕ್ರವಾರ ನಡೆಯಿತು. “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ಬ್ಯಾನರ್ ಅಡಿಯಲ್ಲಿ ಆಯೋಜಿಸಲಾದ ಕಾನ್ಸರ್ಟ್ ಮಾದರಿಯ ಕಾರ್ಯಕ್ರಮವು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.
ಕನ್ನಡದ ಪ್ರಸಿದ್ಧ ಸ್ಟ್ಯಾಂಡ್-ಅಪ್ ಹಾಸ್ಯನಟ ರಾಘವೇಂದ್ರ ಆಚಾರ್ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮಕ್ಕೆ ಉತ್ತಮ ಚಾಲನೆ ನೀಡಿತು. ವೀಕ್ಷಕರು ಹಾಸ್ಯ ಮತ್ತು ರಾಕ್ ಸಂಗೀತ ಕಾರ್ಯಕ್ರಮದ ಹಬ್ಬಕ್ಕೆ ಸಾಕ್ಷಿಯಾದರು.
ಕತಾರ್ ರಾಷ್ಟ್ರದ ಭಾರತದ ರಾಯಭಾರಿ ಗೌರವಾನ್ವಿತ ವಿಪುಲ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗೆಲು, ಕರ್ನಾಟಕ ಸಂಘದ ಕತಾರ್ ಮಾಜಿ ಅಧ್ಯಕ್ಷರಾದ ಅರವಿಂದ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇತರ ಅಪೆಕ್ಸ್ ಸಂಸ್ಥೆಗಳ ಅಧ್ಯಕ್ಷರು ಮತ್ತು ಕರ್ನಾಟಕ ಸಂಘ ಕತಾರ್ ನಿರ್ವಹಣಾ ಸಮಿತಿಯ ಸದಸ್ಯರು ಮತ್ತು ಸಲಹಾ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹೇಶ್ ಗೌಡ ಮಾತನಾಡಿ, ಸಂಘದ ಯಶಸ್ಸಿಗೆ ಸಹಕರಿಸಿದ ಹಿಂದಿನ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. 2024 ಕರ್ನಾಟಕ ಸಂಘ ಕತಾರ್ಗೆ ರಜತ ಮಹೋತ್ಸವ ವರ್ಷವಾಗಿದ್ದು, ಈ ವರ್ಷ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದು ಸಭೆಗೆ ತಿಳಿಸದರು.
ವಿಪುಲ್ ಅವರು ಮಾತನಾಡಿ, ಮಹೇಶ್ ಗೌಡ ಅವರು ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ಲಾಘಿಸಿದರು.
ಸಮಾರಂಭದ ಆಕರ್ಷಣೆಯ ಕೇಂದ್ರಬಿಂದುವಾದ ರಘು ದೀಕ್ಷಿತ್ ಮತ್ತು ಅವರ ತಂಡದ ರಾಕಿಂಗ್ ಪ್ರದರ್ಶನ, ಪ್ರೇಕ್ಷಕರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಕತಾರ್ ಕರ್ನಾಟಕ ಸಂಘದ ಪರವಾಗಿ ರಘು ದೀಕ್ಷಿತ್ ಅವರಿಗೆ “ಕರ್ನಾಟಕ ನವ್ಯ ಸಂಗೀತ ಸಾಮ್ರಾಟ್” ಎಂಬ ಬಿರುದನ್ನು ನೀಡಿ ಗೌರವಿಸಿತು