ಬಳ್ಳಾರಿ: ರಾಜ್ಯದ್ಯಂತ ಗ್ರಾಮೀಣ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ಹಾಗೂ ಸಮಸ್ಯೆಯ ಬಗ್ಗೆ ರಾಜ್ಯದ ಸಾವಿರಾರು ರೈತರು ಎತ್ತಿನ ಗಾಡಿ ಜೊತೆಗೆ, ತಾವು ಬೆಳೆದ ಉತ್ಪನ್ನಗಳ ಜೊತೆ ಮೆರವಣಿಗೆಯಲ್ಲಿ ಸಾಗಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ಆಡಳಿತ ಕಚೇರಿ ಮುತ್ತಿಗೆ ಹಾಕಿದರು.
ಕಚೇರಿಯ ಮುಖ್ಯ ದ್ವಾರಕೆ ಬೀಗ ಜಡಿದು ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ರಾಜ್ಯದ ಎಲ್ಲಾ ಗ್ರಾಮೀಣ ಬ್ಯಾಂಕಗಳಲ್ಲೀ ಎಸ್ ಬಿ ಎಂ ರೀತಿಯಲ್ಲಿ ಒಟಿಎಸ್ ಸಾಲ ತಿರುವಳಿ ಪದ್ಧತಿ ಜಾರಿಗೆ ತರಬೇಕು, ಸಾಲ ವಸೂಲಿಗಾಗಿ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಮುಖದಮೆಗಳನ್ನು ವಾಪಸ್ ಪಡೆದು ಒಟಿಎಸ್ ನಲ್ಲಿ ತಿರುವಳಿ ಮಾಡಬೇಕು. ರೈತರು ಗಿರಿವಿ ಇಟ್ಟಿರುವ ಚಿನ್ನ ಆಭರಣಗಳನ್ನು ಕೃಷಿ ಸಾಲದ ನೆಪ ಹೇಳದೆ ಕೂಡಲೇ ಬಿಡುಗಡೆ ಗೊಳಿಸಬೇಕು ಎಂದು ಒತ್ತಾಯಿಸಿದರು.
ಸುಮಾರು 3 ಗಂಟೆಯ ವೇಳೆಗೆ ಪ್ರತಿಭಟನಾಕಾರರ ಬಳಿ ಬಂದ ಬ್ಯಾಂಕಿನ ಜನರಲ್ ಮ್ಯಾನೇಜರ್ ಶಿವಶಂಕರ್ ಮಾತನಾಡಿ.ಏಪ್ರಿಲ್ 2 ರಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ. ರೈತ ಮುಖಂಡರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು
ಇಂದಿನ ಚಳುವಳಿಯ ನೇತೃತ್ವವನ್ನು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾದವರಡ್ಡಿ ವಹಿಸಿ ಮಾತನಾಡಿ ಎರಡು ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದರು ಗ್ರಾಮೀಣ ಬ್ಯಾಂಕಿನವರು ನಿರ್ಲಕ್ಷತನ ವಹಿಸುತ್ತಿದ್ದಾರೆ ಶ್ರೀಮಂತರಿಗೆ ಉದ್ಯಮಿಗಳಿಗೆ ಹೆಚ್ಚು ಸಾಲ ನೀಡಿ ಗ್ರಾಮೀಣ ಜನರ ಪರ ಎಂದು ಹೇಳುತ್ತಿದ್ದಾರೆ ಇದು ರೈತ ದ್ರೋಹದ ಕೆಲಸ ಎಂದರು.
ಚಳುವಳಿಯಲ್ಲಿ ಭಾಗವಹಿಸಿ ಬೆಂಬಲಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ. ಶ್ರೀಮಂತರ ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ಸಾಲ ಮನ್ನ ಮಾಡಲು ಸಾಧ್ಯವಾಗುತ್ತಿಲ್ಲ. ಬಡವರು ರೈತರು ಸಂಕಷ್ಟದಲ್ಲಿ ಇದ್ದಾರೆ ಎನ್ನುವ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಕೊಡುವ ಹಣ ಇಲ್ಲದಂತಾಗಿದೆ ಎಲ್ಲ ಸರ್ಕಾರಗಳು ರೈತರ ಕಣ್ಣಿಗೆ ಮಣ್ಣು ಎರಚುತ್ತಿವೆ. ಈ ರೀತಿಯ ಶೋಷಣೆಯಿಂದಲೇ ರೈತರು ಕೃಷಿಯಿಂದ ವಲಸೆ ಹೋಗುತ್ತಿದ್ದಾರೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ರಾಜ್ಯದ ಎಲ್ಲಾ ರೈತ ಸಂಘಟನೆಗಳು ರಾಜಕೀಯ ಪಕ್ಷಗಳ ಮರ್ಜಿಯಿಂದ ಹೊರಗೆ ಬಂದು ಒಟ್ಟಾಗಿ ಹೋರಾಟ ಮಾಡಿದರೆ ಖಂಡಿತವಾಗಿಯೂ ರೈತರಿಗೆ ನ್ಯಾಯ ಸಿಗುತ್ತದೆ ಗ್ರಾಮೀಣ ಬ್ಯಾಂಕಿನವರು ಸಮಸ್ಯೆ ಬಗೆಹರಿಸಿದಿದ್ದರೆ ರಾಜ್ಯದ ಎಲ್ಲಾ ಶಾಖೆಗಳನ್ನು ಏಕಕಾಲದಲ್ಲಿ ಒಂದೇ ದಿನ ಬ್ಯಾಂಕ್ ಬಂದ್ ಮಾಡುವ ಚಳುವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಳುವಳಿಯಲ್ಲಿ ಕರ್ನಾಟಕ ರಾಜ್ಯರೈತ ಸಂಘದ ಮಂಜೇಗೌಡ. ಬಲ್ಲೂರ್ ರವಿಕುಮಾರ್. ಹತ್ತಳ್ಳಿ ದೇವರಾಜ್, ಲಕ್ಷ್ಮಿದೇವಿ. ಮಲ್ಲಿಕಾರ್ಜುನರೆಡ್ಡಿ ವಕೀಲರು.ಎನ್ ಎಚ್ ದೇವಕುಮಾರ. ಇನ್ನು ಮುಂತಾದ ಸಾವಿರಾರು ರೈತರು ಭಾಗವಹಿಸಿದ್ದರು.