ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ, ಬಂಸ್ ಸಹಜ. ಅದರಲ್ಲೂ ಸಾರಿಗೆ ಕ್ಷೇತ್ರದ ಶ್ರಮಿಕರ ಬೇಡಿಕೆಗಳು ಇಂದು ನಿನ್ನೆಯದಲ್ಲ. ಹೀಗಿದ್ದರೂ ಸಾರಿಗೆ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಅವರು ಪ್ರತಿಭಟನೆ, ಸತ್ಯಾಗ್ರಹಗಳಿಗೆ ಅವಕಾಶವನ್ನೇ ಕೊಡದೆ ಬಹುತೇಕ ಬೇಡಿಕೆಗಳನ್ನು ಈಡೇರಿಸಿ ಹೊಸ ಆಡಳಿತ ಶೈಲಿಗೆ ಸಾಕ್ಷಿಯಾಗಿದ್ದಾರೆ.
ಈ ನಡುವೆ ನುಡಿದಂತೆಯೇ ನಡೆದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಸಾರಿಗೆ ಸಂಸ್ಥೆಗಳ ಒಕ್ಕೂಟದ ಪ್ರಮುಖರು ಅಭಿನಂಧಿಸಿದ ಸನ್ನಿವೇಶ ನಾಡಿನ ಗಮನಸೆಳೆಯಿತು. ಸಚಿವ ರಾಮಲಿಂಗ ರೆಡ್ಡಿ ಅವನ್ನು 32 ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ (ಆಟೋ, ಟ್ಯಾಕ್ಸಿ, ವ್ಯಾನ್, ಶಾಸಗಿ ಬಸ್ಸುಗಳು, ಶಾಲಾ ಬಸ್ಸುಗಳು ಸರಕು ಸಾಗಣೆ ವಾಹನಗಳು ಹಾಗೂ ಇತರೆ ಸರಕು ಸಾಗಣೆ ವಾಹನಗಳು) ಮತ್ತು ವಾಹನಗಳ ಮಾಲೀಕರು ಮತ್ತು ಚಾಲಕರು ಅಭಿನಂದಿಸಿದರು. ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಸನ್ಮಾನ ನೆರವೇರಿತು.
ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಕಳೆದ ವರ್ಷ ಜುಲೈ 11 ರಂದು ಮುಷ್ಕರಕ್ಕೆ ಮುಂದಾದ ಸಂದರ್ಭದಲ್ಲಿ ತಮ್ಮ 30 ಬೇಡಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಪರಿಶೀಲಿಸಿದ ಸಾರಿಗೆ ಸಚಿವರು 9 ತಿಂಗಳು 5 ದಿನದ ಅವಧಿಯಲ್ಲಿಯೇ 20 ಪ್ರಮುಖ ಬೇಡಿಕೆಗಳನ್ನು ಈಡೇರಿಸಿದ್ದರು. ಈ ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡ ಸಚಿವರಿಗೆ ಶನಿವಾರ ಬೆಂಗಳೂರಿನ ಟೌನ್ ಹಾಲ್ನಲ್ಲಿ ಬೃಹತ್ ಅಭಿನಂದನಾ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ ಸಾರಿಗೆ ಒಕ್ಕೂಟದ ಪ್ರಮುಖರು ಹೂಮಳೆಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರು ಹಾಗೂ ಒಕ್ಕೂಟದ ಅಧ್ಯಕ್ಷ.ನಟರಾಜ್ ಶರ್ಮಾ, ಸಾರಿಗೆ ಸಚಿವರು ,ರಾಪಿಡೋ ಬೈಕ್ ಟ್ಯಾಕ್ಸಿ ರದ್ಧತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ.5.40 ಕೋಟಿ ವೆಚ್ಚದಲ್ಲಿ 2 ಇಂದಿರಾ ಕ್ಯಾಂಟೀನ್, ಅಗ್ರೀಗೇಟರ್ ಆ್ಯಪ್ Concept Note ಒದಗಿಸಲು ಕ್ರಮ, ಕೈಗೊಂಡಿದ್ದಾರೆ. ಅಸಂಘಟಿತ ಚಾಲಕರ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಅದಕ್ಕಾಗಿ ಹಣ ಒದಗಿಸಲು ವಿಧಾನಸಭೆಯಿಂದ ಒಪ್ಪಿಗೆ, ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಧನಸಹಾಯ, ಅಗ್ರಿಗೇಟರ್ ಲೈಸನ್ಸ್ ಹೊಂದಿರುವ ಓಲಾ/ ಊಬರ್ ಕಂಪನಿಗಳ ಡೈನಾಮಿಕ್ ದರ ರದ್ದು,
ನೋಂದಾಯಿತ ವಾಹನಗಳಿಗೆ ತ್ರೈಮಾಸಿಕ ತೆರಿಗೆ, ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ ರಹದಾರಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ರಾಪಿಡೋ, ಓಲಾ, ಊಬರ್ ಇ- ರಿಕ್ಷಾಗಳ ನೇರ ನೋಂದಣಿ ನಿಷೇಧ, ಬಾಕಿ ಇರುವ ರಾಜ್ಯ ಪ್ರವಾಸಿ ವಾಹನಗಳ ರಹದಾರಿಗೆ ತ್ವರಿತ ಕ್ರಮ, ಹೊರರಾಜ್ಯ ವಾಹನಗಳಿಗೆ ವಿಶೇಷ/ತಾತ್ಕಾಲಿಕ ರಹದಾರಿ ನೀಡುವ ವ್ಯವಸ್ಥೆ ಮತ್ತು ತಂತ್ರಾಂಶ ಅಭಿವೃದ್ಧಿಗೆ NIC ರವರಿಗೆ ಸೂಚನೆ, ಹೆಚ್ಚು ಕಮೀಷನ್ ಪಡೆಯುತ್ತಿರುವ ಅಗ್ರಿಗೇಟರ್ ಕಂಪನಿಗಳ ಮೇಲೆ ಪ್ರಕರಣ ದಾಖಲು, ದಂಡ ವಸೂಲಿ, ಹೀಗೆ ತಮ್ಮ 20 ಬೇಡಿಕೆಗಳನ್ನು ಅತ್ಯಲ್ಪ ಸಮಯದಲ್ಲಿ ಬಗೆಹರಿಸಿ, ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಗಳಿಗೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಸಚಿವರ ಪಾತ್ರ ಹಿರಿದಿದೆ. ಖಾಸಗಿ ಚಾಲಕರ ಹಾಗೂ ಕುಟುಂಬದವರಿಗೆ ಸಚಿವರು ನ್ಯಾಯ ಒದಗಿಸಿದ್ದಾರೆ ಎಂದು ಪ್ರಶಂಸಿಸಿದರು.
ಅಭಿನಂದನಾ ಸಮಾರಂಭದಲ್ಲಿ ಪೀಸ್ ಆಟೋ ಅಧ್ಯಕ್ಷ ರಘು, ಕರ್ನಾಟಕ ಚಾಲಕರ ಒಕ್ಕೂಟದ ಅಧ್ಯಕ್ಷ. ಜಿ.ನಾರಾಯಣಸ್ವಾಮಿ, ಇಂಡಿಯನ್ ವೆಹಿಕಲ್ ಟ್ರೇಡ್ ಯುನಿಯನ್ ಅಧ್ಯಕ್ಷ .ಸದಾನಂದ ಸ್ವಾಮಿ, ಭಾರತ್ ಟ್ರಾನ್ಸಪೊರ್ಟ ಅಸೋಸಿಯೆಶನ್ ಅಧ್ಯಕ್ಷ.ಜಯಣ್ಣ, ಟ್ಯಾಕ್ಸಿ ಚಾಲಕರ ಸಂಘದ ಹಮೀದ್, ಹಾಗೂ 26 ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


























































