ಕನ್ಹೇರಿ: ಕೃಷಿ ಉಳಿಯಬೇಕಾದರೆ ಕೃಷಿಕರನ್ನು ವರಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
ಕನ್ಹೇರಿಯ ಸಿದ್ಧಗಿರಿ ಸಂಸ್ಥಾನದಲ್ಲಿ ನಡೆದ “ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು” ಹೆಸರಿನ ಧರ್ಮಗುರುಗಳು ಹಾಗೂ ಸಾವಯವ ರೈತರ ಮಹಾಸಮಾವೇಶದ ಎರಡನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಎರಡು ದಿನ ನಡೆದ ಈ ಸಮಾವೇಶದಲ್ಲಿ ಸಾವಯವ ಕೃಷಿ, ದೇಶೀ ಗೋ ತಳಿ ಸಂರಕ್ಷಣೆ, ಜಲ ಸಂರಕ್ಷಣೆ, ದೇಶೀ ಬೀಜಸಂರಕ್ಷಣೆ, ಸಾವಯವ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆ ಮೊದಲಾದ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. 300ಕ್ಕೂ ಹೆಚ್ಚು ಸಂತರು, ಮಠಾಧಿಪತಿಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ರೈತರು ಭಾವಹಿಸಿದ್ದ ಈ ಸಮಾವೇಶದಲ್ಲಿ ಕೃಷಿ ಸಂಬಂಧಿತ ಐದು ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು, ಹೂವಿನ ಹಡಗಲಿ ನಂದೀಪುರದ ಶ್ರೀ ಮಹೇಶ್ವರ ಸ್ವಾಮೀಜಿ, ಬಳ್ಳಾರಿಯ ಶ್ರೀ ಕಲ್ಯಾಣ ಸ್ವಾಮೀಜಿ, ಬೀದರಿನ ಬಸವಕಲ್ಯಾಣ ಶ್ರೀ ರಾಜಶೇಖರ ಸ್ವಾಮೀಜಿ, ಸುತ್ತೂರಿನ ಶ್ರೀ ಜಯರಾಜೇಂದ್ರ ಮಹಾಸ್ವಾಮೀಜಿ, ಮುಧೋಳದ ರಾಮರೂಡ ಮಠದ ಶ್ರೀ ಶಂಕರಾರಢ ಮಹಾಸ್ವಾಮೀಜಿ, ಸುಭಿಕ್ಷ ಆರ್ಗ್ಯಾನಿಕ್ ಮಲ್ಟಿ ಸ್ಟೇಟ್ ಕೊಆಪರೇಟಿವ್ ಸೊಸೈಟಿಯ ಅಧ್ಯಕ್ಷ ಆನಂದ. ಆ. ಶ್ರೀ, ಸಾವಯವ ಕೃಷಿ ಪರಿವಾರದ ರಾಜ್ಯಧ್ಯಕ್ಷ ದತ್ತಾತ್ರೇಯ ಹೆಗಡೆ ಮೊದಲಾದವರು ಸಮಾವೇಶದಲ್ಲಿ ಭಾಗಿಯಾದರು..
ಕೌಜಲಗಿಯ ಗುರುಕುಲದ ವಿದ್ಯಾರ್ಥಿಗಳು ವೇದಮಂತ್ರಗಳಿಂದ ಸಲ್ಲಿಸಿದ ಪ್ರಾರ್ಥನೆ ಸಮಾವೇಶದಲ್ಲಿ ಭಾಗವಹಿಸಿದವರ ಗಮನಕೇಂದ್ರೀಕರಿಸಿತು.