ಬೆಂಗಳೂರು: ಸಂಸತ್ ದಾಳಿ ಘಟನೆಯು ದೇಶದ ಪ್ರಜಾಪ್ರಭುತ್ವದ ಕರಾಳ ಕೃತ್ಯ ಎಂದು ಬಣ್ಣಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಇದಕ್ಕೆ ಕಾರಣರಾಗಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಲೋಕಸಭೆಯ ಸ್ಪೀಕರ್ ಅವರಿಗೆ ರಮೇಶ್ ಬಾಬು ಅವರು ಪಾತ್ರ ಬರೆದಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ಲೋಕಸಭಾ ಸ್ಪೀಕರ್ ಅವರಿಗೆ ಪತ್ರ ಬರೆಯಲಾಗಿದೆ ಎಂದಿರುವ ರಮೇಶ್ ಬಾಬು, ಸದನಕ್ಕೆ ನುಗ್ಗಿ ದಾಂದಲೆ ನಡೆಸಿರುವ ಸನ್ನಿವೇಶವನ್ನು ನಾವು ‘ದೇಶದ ಪ್ರಜಾಪ್ರಭುತ್ವದ ಕರಾಳದಿನ’ ಎಂದು ಕರೆಯುತ್ತೇವೆ ಎಂದರು. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿರುವ ರಮೇಶ್ ಬಾಬು, ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟನೆ ಮಾಡಬೇಕು ಎಂದು ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಅವರು ಸಂಸತ್ ಪ್ರವೇಶಕ್ಕೆ ಈಗಾಗಲೇ 3 ಬಾರಿ ಪಾಸ್ ನೀಡಿದ್ದಾರೆ ಎನ್ನುವುದು ಆತಂಕಕಾರಿ ವಿಚಾರ. ಟ್ವೀಟ್ ಮೇಲೆ ಟ್ವೀಟ್ ಮಾಡುವ ಬಿಜೆಪಿಯವರು ಇದುವರೆಗೂ ಈ ವಿಚಾರದ ಬಗ್ಗೆ ದನಿ ಎತ್ತಿಲ್ಲ. ಟಿವಿ ಚರ್ಚೆಗೆ ಹೋಗಲು ನಿರಾಕರಿಸುತ್ತಿದ್ದಾರೆ ಎಂದವರು ಟೀಕಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸತ್ತಿನ ಭದ್ರತೆಯ ವಿಚಾರವಾಗಿ ಸ್ಪೀಕರ್ ಉತ್ತರ ನೀಡುತ್ತಾರೆ ಎಂದು ಬಾಲಿಶವಾದ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪಲಾಯನವಾದ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಸಂಸತ್ ಒಳಗೆ ಆದಂತಹ ಘಟನೆಗೆ ಸ್ಪೀಕರ್ ಅವರು ಹೊಣೆಯಾದರೆ, ಸಂಸತ್ ಹೊರಗಡೆಯ ಘಟನೆಗೆ ಕೇಂದ್ರ ಸರ್ಕಾರ ಹೊಣೆ ಹೊತ್ತುಕೊಳ್ಳಬೇಕು ಎಂದು ರಮೇಶ್ ಬಾಬು ವಿಶ್ಲೇಷಿಸಿದರು.
ಇದೊಂದು ಪೂರ್ವನಿಯೋಜಿತ ಕೃತ್ಯ. ಏಕೆಂದರೆ ಘಟನೆ ನಡೆದ ಸಂದರ್ಭ ರಾಹುಲ್ ಗಾಂಧಿ ಅವರು ಸೇರಿದಂತೆ ಅನೇಕ ಪಕ್ಷಗಳ ಸದಸ್ಯರು ಸಂಸತ್ ಒಳಗೆ ಇರುತ್ತಾರೆ. ಆದರೆ ಪ್ರಧಾನಿ, ಗೃಹಸಚಿವರು, ಪ್ರಮುಖ ಸಚಿವರು ಯಾರೂ ಸಹ ಒಳಗೆ ಇರುವುದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ರಮೇಶ್ ಬಾಬು ಹೇಳಿದರು.
ಆರೋಪಿ ಮನೋರಂಜನ್ ಅವರ ಮನೆ ವ್ಯಾಪ್ತಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿತ್ತು. ಆದರೆ ಈ ಕೆಲಸ ನಡೆದಿಲ್ಲ. ಮೈಸೂರಿನಲ್ಲಿ ಷಡ್ಯಂತ್ರದ ಭಾಗವಾಗಿ ಸಭೆಗಳು ನಡೆದಿರುವ ಕಾರಣ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ಎಂದು ರಮೇಶ್ ಬಾಬು ಆಗ್ರಹಿಸಿದರು.