ಬೆಂಗಳೂರು: ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಪ್ರತಾಪ್ಸಿಂಹ ಅವರ ಐಟಿ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಈ ಕೂಡಲೇ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಯನ್ನು ಸೀಲ್ ಮಾಡಬೇಕು ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್, ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿಗಳಾದ ಸಾಗರ್ ಶರ್ಮ, ಮನೋರಂಜನ್ ಮತ್ತು ಲಲಿತ್ ಝಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಅವರ ಜೊತೆಯೇ ಮೂರು ಬಾರಿ ಸಭೆ ನಡೆಸಿದ್ದಾರೆ. ಈ ಕೂಡಲೇ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಕಿಡಿ ಹೊತ್ತಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಎರಡು ಕೋಮುಗಳು, ಜನ ಸಾಮಾನ್ಯರ ನಡುವೆ ಕಿಡಿ ಹೊತ್ತಿಸುವುದಕ್ಕೆ ಅವರು ಆಯ್ಕೆಯಾಗಿದ್ದಾರೆ. ಮನೋರಂಜನ್ ಎನ್ನುವ ವ್ಯಕ್ತಿ ಗೊತ್ತಿಲ್ಲದೇ ಇದ್ದರೂ ಏಕೆ 3-4 ಬಾರಿ ಪಾಸ್ ನೀಡಿದ್ದಾದರೂ ಏಕೆ?. ಕ್ಷೇತ್ರದ ಹೊರಗಿನ ವ್ಯಕ್ತಿಗಳಾದ ಸಾಗರ್ ಶರ್ಮ, ಲಲಿತ್ ಝಾ ನಿಗೆ ಪಾಸ್ ನೀಡಿದ್ದಾದರೂ ಏಕೆ? ಎಂದು ಪ್ರಶ್ನಿಸಿದ ಅವರು, ರಾಜಕೀಯವಾಗಿ ಇಂತಹ ಘಟನೆಗಳಿಂದ ಲಾಭ ಪಡೆಯಲು ಬಿಜೆಪಿ ಹೊರಟಿದೆ. 2014, 2019 ರ ಚುನಾವಣೆಗಳನ್ನು ಹೇಗೆ ನಡೆಸಿದರು ಎನ್ನುವ ನಿದರ್ಶನ ನಮ್ಮ ಮುಂದಿದೆ. 2024 ರ ಚುನಾವಣೆ ಹೇಗೆ ನಡೆಸಬೇಕು ಎಂಬುದರ ತಾಲೀಮು ಇದಾಗಿದೆ ಎಂದರು.
6 ಮಂದಿ ಆರೋಪಿಗಳ ಮೇಲೆ ಘಟನೆ ನಡೆದ 35 ಗಂಟೆಗಳಾದ ನಂತರ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬಹುದೇ? ಒಳಗೆ ಬಿಡಲು ಕಾರಣಕರ್ತರು ಯಾರು? ಎಂದು ಪ್ರಶ್ನೆ ಮಾಡಿದ ಲಕ್ಷ್ಮಣ್, ಮೈಸೂರಿನ ವಿಜಯನಗರ 2 ನೇ ಹಂತದ ದೇವರಾಜೇಗೌಡ ಎಂಬುವರ ಮಗನಾದ ಮನೋರಂಜನ್. ಕಂಪ್ಯೂಟರ್ ಎಂಜಿನಿಯರಿಂಗ್ ಪೂರ್ಣಗೊಳಿಸಿಲ್ಲ. ಮನೋರಂಜನ್ ಅವರ ತಂದೆ ಮಾಧ್ಯಮಗಳ ಎದುರು ʼನಾನು ಪ್ರತಾಪ್ ಸಿಂಹ ಅವರ ಅನುಯಾಯಿʼ , ಪ್ರತಾಪ್ ಸಿಂಹ ಅವರ ಗೆಲುವಿಗೆ ಶ್ರಮ ಹಾಕಿದ್ದು, ಮೋದಿ ಅಭಿಮಾನಿ ಎಂದು ಹೇಳಿಕೆ ನೀಡಿದ್ದರು ಎಂದು ಗಮನಸೆಳೆದರು.
ಪ್ರತಾಪ್ ಸಿಂಹ ಅವರಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್:
ಮನೋರಂಜನ್ ಮತ್ತು ಅವರ ತಂದೆ ಎಷ್ಟು ದಿನಗಳಿಂದ ಪರಿಚಯ? ನಿಮ್ಮ ಐಟಿ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದರೆ? ನಮ್ಮ ತಂದೆಯವರು ಪ್ರತಾಪ್ ಸಿಂಹ ಪರವಾಗಿ ಕೆಲಸ ಮಾಡಿದ್ದಾರೆಯೇ? ಮನೋರಂಜನ್ ಅವರ ತಂದೆಗೂ ನಿಮಗೂ ಇರುವ ಸಂಬಂಧವೇನು?
ಮನೋರಂಜನ್ ಮತ್ತು ಸಾಗರ್ ಶರ್ಮ ಅವರನ್ನು ಅಮಿತ್ ಶಾ ಅವರಿಗೆ ಅಮಿತ್ ಶಾ ಅವರನ್ನು ಭೇಟಿಮಾಡಿಸಿದ್ದೀರಿ. ಆರ್ ಎಸ್ಎಸ್ ಮುಖಂಡರನ್ನು ಭೇಟಿ ಮಾಡಿಸಿದ್ದು ಏಕೆ? ಕೊಡಗಿನ ಯಾವ ರೆಸಾರ್ಟ್ನಲ್ಲಿ ಮೂರು ಜನ ಆರೋಪಿಗಳನ್ನು ಎಷ್ಟು ದಿನ ತಂಗಿಸಿದ್ದೀರಿ? ಕೊಡಗಿನ ಬಿಜೆಪಿ, ಆರ್ಎಸ್ಎಸ್ ಮುಖಂಡರ ಜೊತೆ ಎಷ್ಟು ಸಭೆಗಳನ್ನು ನಡೆಸಿದ್ದೀರಿ? ಮನೋರಂಜನ್ಗೆ ಡಿಜಿಟಲ್ ಪಾವತಿ ಮೂಲಕ ಹಣ ಕಳಿಸಿದ್ದೀರಿ ಎನ್ನುವ ಮಾತಿದೆ. ಕಳೆದ 4 ತಿಂಗಳಿನಲ್ಲಿ ನಡೆದ ಸಭೆಯ ಬಗ್ಗೆ ಉತ್ತರಿಸುವಿರಾ?
ಸಣ್ಣ ಘಟನೆ ನಡೆದರೆ ಸಾಕು ಟ್ವೀಟ್ , ಪೇಸ್ಬುಕ್ ಪೈವ್ ಮೂಲಕ ಬಂದು ಅರಚಿಕೊಳ್ಳುವ ನೀವು ಏಕೆ ಈ ಘಟನೆಯ ಸಂಬಂಧ ಹೇಳಿಕೆಯನ್ನೇ ನೀಡುತ್ತಿಲ್ಲ. ಸಾಗರ್ ಶರ್ಮ ಎನ್ನುವ ವ್ಯಕ್ತಿಗೆ ರೇಡಿಯೋ ತಯಾರಿಕಾ ತರಬೇತಿ ಕೊಡಿಸಿದ್ದೀರಿ ಎನ್ನುವ ಮಾಹಿತಿಯಿದ್ದು, ಕೂಡಲೇ ಜನರಿಗೆ ಉತ್ತರ ಕೊಡಬೇಕು.
ದೇಶದ ಅತ್ಯುಚ್ಚ ರಕ್ಷಣಾ ವ್ಯವಸ್ಥೆಗಳು ಇದ್ದರೂ ನಾಲ್ಕು ಜನ ಹೇಗೆ ಸಂಸತ್ ಒಳಗೆ ಪ್ರವೇಶ ಪಡೆದರು. ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಸಾಗರ್ ಶರ್ಮ ಟೇಬಲ್ನಿಂದ ಟೇಬಲ್ಗೆ ಜಿಗಿಯುವ ವೇಳೆ ಕೈಯಲ್ಲಿ ಹಿಡಿದುಕೊಂಡಿದ್ದ ವಸ್ತು ಯಾವುದು? ಇಷ್ಟೊಂದು ದಾಂಧಲೆ ನಡೆದರೂ ವೈದ್ಯರು ಏಕೆ ಸ್ಥಳಕ್ಕೆ ಬರಲಿಲ್ಲ. ಅವರು ಹಾಕಿದ ಸ್ಮೋಕ್ ಬಾಂಬ್ನಿಂದ ಏನಾದರೂ ಅನಾಹುತ ಉಂಟಾಗಿದ್ದರೆ ಪರಿಣಾಮ ಏನಾಗುತ್ತಿತ್ತು.
ನೀಲಂ ಎನ್ನುವ ಆರೋಪಿಯನ್ನು ಮಹಿಳಾ ಪೊಲೀಸರು ಆರಾಮದಿಂದ ಎಳೆದುಕೊಂಡು ಹೋಗುತ್ತಿದ್ದಾರೆ. ಸಣ್ಣ ಭದ್ರತಾ ಲೋಪವಾದರೂ ಭದ್ರತಾ ಸಿಬ್ಬಂಧಿ ಎಲ್ಲಿ ಹೋಗಿದ್ದರು? ಈ ವ್ಯವಸ್ಥೆಯನ್ನು ಏನೆಂದು ಕರೆಯುವುದು.
ದಾಂಧಲೆ ನಡೆದ 10 ನಿಮಿಷದ ಒಳಗೆ ಸಮಾಚಾರ ಮಾಧ್ಯಮಗಳಿಗೆ ಹೇಗೆ ತಿಳಿಯಿತು. ಪೊಲೀಸರು ಸಣ್ಣ ಸಾಕ್ಷಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ಆದರೆ ಸ್ಮೋಕ್ ಬಾಂಬಿನ ತುಣುಕನ್ನು ಪಡೆಯಲು ಮಾಧ್ಯಮ ಪ್ರತಿನಿಧಿಗಳು ಕಿತ್ತಾಡುತ್ತಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿಯವರ ಕೈವಾಡವಿದೆ. ಇದು ಗುಪ್ತಚರ ಇಲಾಖೆಯ ವೈಫಲ್ಯವಲ್ಲವೇ?
ಬಿಜೆಪಿಯವರು 2024 ರ ಚುನಾವಣೆಗೆ ಭರ್ಜರಿ ಸಂಚನ್ನು ರೂಪಿಸಿದ್ದರು. ಆದರೆ ಇದು ಬಿಜೆಪಿಯವರಿಗೆ ತಿರುಗುಬಾಣವಾಗಿ ಮಾರ್ಪಟ್ಟಿದೆ. ಬಿಜೆಪಿಯವರು ದಾಂಧಲೇಕೋರರಿಗೆ ತರಬೇತಿ ನೀಡಿ ಕಳುಹಿಸಲಾಗಿದೆ. ಯಾವುದೇ ತನಿಖಾ ಸಂಸ್ಥೆಗೆ ನೀಡಿದರು, ಈ ಪ್ರಕರಣವನ್ನು ಮುಚ್ಚಿಹಾಕುತ್ತಾರೆ ಹಾಗೂ ವಿಪಕ್ಷದ ವಿರುದ್ದವಾಗಿ ಹೇಳಿಕೆ ನೀಡಿ ಇಡೀ ಪ್ರಕರಣದ ದಾರಿ ತಪ್ಪಿಸುತ್ತಾರೆ. ಆದ ಕಾರಣ ಮುಖ್ಯ ನ್ಯಾಯಾದೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು.
ನರೇಂದ್ರ ಮೋದಿಯವರು ಅಪಘಾತವಾಗಿ 4 ಜನ ಸತ್ತರೂ ಟ್ವೀಟ್ ಮಾಡುತ್ತಾರೆ. ದೇಶದ ಗೃಹ ಸಚಿವ ಅಮಿತ್ ಷಾ ಅವರೇ ಇದಕ್ಕೆ ನೇರ ಹೊಣೆ ಆದರೆ ಇವರ್ಯಾರು ಕೂಡ ಸಣ್ಣ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಸುಳ್ಳುಗಳನ್ನೇ ಹಂಚುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯನೂ ಒಂದೂ ಟ್ವೀಟ್ ಮಾಡಿಲ್ಲ. ಆದರೆ ನೀಲಂ ಎನ್ನುವ ಮಹಿಳೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಪೋಟೊ ಹಾಕಿ ಮುಖ್ಯ ವಿಚಾರ ತಿರುಚುವ ಕೆಲಸ ಮಾಡುತ್ತಿದ್ದಾರೆ.
ಮನೋರಂಜನ್ ಅವರ ತಂದೆ ದೇವರಾಜೇಗೌಡ ಅವರು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದರು ಎಂದು ಬಿಂಬಿಸಲು ಹೊರಟಿದ್ದರು. ಸಣ್ಣ ಸುಳಿವು ಸಿಕ್ಕರೂ ಸಾಕು ಗಂಭೀರ ವಿಚಾರವನ್ನು ತಿರುಚುವ ಕೆಲಸಕ್ಕೆ ಬಿಜೆಪಿ ಸಿದ್ದವಾಗಿದೆ.
ಸಂಸತ್ ಒಳಗೆ ನುಗ್ಗಿದವರಲ್ಲಿ ಒಬ್ಬ ವ್ಯಕ್ತಿ ಮುಸ್ಲಿಂ ಆಗಿದ್ದರೆ ಅಥವಾ ಕಾಂಗ್ರೆಸ್ ಸಂಸದರು ಪಾಸ್ ನೀಡಿದ್ದರೇ ಇಡೀ ದೇಶದಲ್ಲೇ ದಾಂಧಲೆ ನಡೆಸಲು ಬಿಜೆಪಿಯವರು ಸಜ್ಜಾಗುತ್ತಿದ್ದರು. ಆದರೆ ಈಗ ಏಕೆ ಒಬ್ಬರೂ ಬಾಯಿ ಬಿಡುತ್ತಿಲ್ಲವಲ್ಲ? ಏಕೆ.
ಚೀನಾದವರು ಭಾರತದ ನೆಲವನ್ನು ಅತಿಕ್ರಮಿಸಿ ಹಳ್ಳಿಗಳನ್ನು ನಿರ್ಮಾಣ ಮಾಡಿ, ರೈಲ್ವೇ ಹಳಿಗಳನ್ನು ಹಾಕುತ್ತಿದ್ದರೂ ಪ್ರಧಾನಿಗಳು ಮಾತೇ ಆಡುತ್ತಿಲ್ಲ. ಇವರಿಂದ ಜನಸಾಮಾನ್ಯರ ರಕ್ಷಣೆ ಸಾಧ್ಯವೇ?