ಆದ್ಯಾತ್ಮ ಮತ್ತು ವಿದ್ಯೆಯು ವ್ಯಕ್ತಿಯ ಸಾಧನೆಗೆ ಪ್ರೇರಣೆಯಾಗುತ್ತದೆ.. ‘ನಾವು ಆಧ್ಯಾತ್ಮದೊಂದಿಗೆ ಜ್ಞಾನವಂತರಾಗಬೇಕು. ವಿದ್ಯೆ ಕಲಿತು ಸಮಾಜ ಕಟ್ಟಿ, ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕು..’ ಗಣೇಶ್ ರಾವ್ ಭಾಷಣದ ಲಹರಿ ಹೀಗಿದೆ..
ಮಂಗಳೂರು: ತುಳುನಾಡಿನ ಕಾರಣಿಕ ಕ್ಷೇತ್ರ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಸ್ಥಾಪನೆಗೊಂಡು 150 ವರ್ಷ ಪೂರ್ಣಗೊಂಡಿದೆ. ಈ ಸಂಬಂಧ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಧಾರ್ಮಿಕ ಕೈಂಕರ್ಯ ಗಮನಸೆಳೆದಿದೆ. ಶನಿವಾರ ನಡೆದ ಸಮಾರಂಭ ಭಕ್ತ ಸಮೂಹದ ಕುತೂಹಲದ ಕೇಂದ್ರಬಿಂದುವಾಗಿತ್ತು.
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ 150 ವರ್ಷಾಚರಣೆ ಸಮಾರಂಭ ಮಾರ್ಚ್ 7ರ ವರೆಗೂ ನಡೆಯಲಿದ್ದು, ‘ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ವು ಧಾರ್ಮಿಕ ಮಹಾಹಬ್ಬಕ್ಕೆ ಸಾಕ್ಷಿಯಾಗಿದೆ.
‘ನಮ್ಮೂರ ಸಂಭ್ರಮ’ದ ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಶನಿವಾರ ನಡೆಯಿತು. ಸಮಾರಂಭವನ್ನು ಉದ್ಘಾಟಿಸಿದ ಕರಾವಳಿ ಕಾಲೇಜು ಸಮೂಹದ ಮುಖ್ಯಸ್ಥರೂ ಆದ ಶಿಕ್ಷಣ ತಜ್ಞ ಗಣೇಶ್ ರಾವ್ ಭಾಷಣವು ಸಭಿಕರ ಗಮನಕೇಂದ್ರೀಕರಿಸಿತು. ಆದ್ಯಾತ್ಮ ಮತ್ತು ವಿದ್ಯೆಯು ಬದುಕಿನುದ್ದಕ್ಕೂ ಥಳುಕು ಹಾಕುತ್ತಾ ವ್ಯಕ್ತಿಯ ಸಾಧನೆಗೆ ಯಾವ ರೀತಿ ಪ್ರೇರಣೆಯಾಗುತ್ತದೆ ಎಂದು ಹೇಳಿದರು. ‘ನಾವು ಆಧ್ಯಾತ್ಮದೊಂದಿಗೆ ಜ್ಞಾನವಂತರಾಗಬೇಕು. ವಿದ್ಯೆ ಕಲಿತು ಸಮಾಜ ಕಟ್ಟಿ, ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕು ಎಂದು’ ಅವರು ಪ್ರತಿಪಾದಿಸಿದರು.
ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರೂ ಆದ ಎಸ್. ಗಣೇಶ್ ರಾವ್ ಅವರು, ಧರ್ಮವು ಸಮಾಜಕ್ಕೆ ಯಾವ ರೀತಿ ಆಧಾರವಾಗಿರುತ್ತೆ ಎಂಬುದನ್ನು ತಮ್ಮದೇ ದಾಟಿಯಲ್ಲಿ ವಿವರಿಸಿದರು. ‘ಧರ್ಮ ಎಂದಿಗೂ ಕೇಡು ಬಯಸುವುದಿಲ್ಲ. ಎಲ್ಲರನ್ನೂ ಪ್ರೀತಿಯಿಂದ ಉದಾತ್ತ ನೆಲೆಯಲ್ಲಿ ಸೆಳೆಯುತ್ತದೆ. ಅಂತಹ ಧರ್ಮವನ್ನು ಕಂಕನಾಡಿ ಗರಡಿ ಕ್ಷೇತ್ರದಲ್ಲಿ ಕಾಣಬಹುದು ಎಂದವರು ಹೇಳಿದರು.
ಪ್ರಕೃತಿಯೇ ಮೂಲ ದೇವರು; ಅದರ ನಾಶ ಬೇಡ..
ನಮ್ಮದು ಭಾರತೀಯತೆಯ ಧರ್ಮ. ನಮ್ಮ ನಂಬಿಕೆ ಮೂಢನಂಬಿಕೆಯಲ್ಲ, ಮೂಲ ನಂಬಿಕೆ. ಪ್ರಕೃತಿಯನ್ನೇ ದೇವರೆಂದು ಪೂಜಿಸುವವರು ನಾವು ಎಂದ ಗಣೇಶ್ ರಾವ್, ಅದೇ ಪ್ರಕೃತಿ ಅಭಿವೃದ್ಧಿಯ ಹೆಸರಿನಲ್ಲಿ ನಾಶವಾಗುತ್ತಿರುವುದು ಆತಂಕಕಾರಿ ಎಂದರು.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಗುಡ್ಡೆಗುತ್ತು, ಮಂಗಳೂರು ಮೇಯರ್ ಜಯಾನಂದ ಅಂಚನ್, ಶಾಸಕರಾದ ಯು.ಟಿ. ಖಾದರ್ ಮೊದಲಾದ ಗಣ್ಯರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.