ಬೈಂದೂರು ಸಮೀಪದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಡಾ.ಗೋವಿಂದ ಬಾಬು ಪೂಜಾರಿಯವರ ನಡೆಯು ಜನಪ್ರತಿನಿಧಿಗಳನ್ನೂ ನಾಚಿಸುವಂತಿದೆ.
ಉಡುಪಿ: ಹಳ್ಳಿಗಳಲ್ಲಿ ದಿಲ್ಲಿ ಮಾದರಿಯ ಶಿಕ್ಷಣ ಸಿಗದಿರಬಹುದು. ಆದರೆ ಕರಾವಳಿಯ ಶಾಲೆಯೊಂದು ಇದೀಗ ದಿಲ್ಲಿಯ ರೀತಿ ಹೈಟೆಕ್ ಸ್ಪರ್ಶದೊಂದಿಗೆ ನಾಡಿನ ಗಮನಸೆಳೆದಿದೆ. ಖ್ಯಾತ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಡಾ.ಗೋವಿಂದ ಪೂಜಾರಿ ಅವರು ಉಡುಪಿ ಜಿಲ್ಲೆ ಬೈಂದೂರು ಬಳಿಯ ಕುಗ್ರಾಮದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಬೈಂದೂರು ಕ್ಷೇತ್ರದ ಮೆಟ್ಟಿನಹೊಳೆ ಶಾಲೆಗೆ ಅವರು ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿ ಈ ಶಿಕ್ಷಣ ಸಂಸ್ಥೆಯ ಸ್ವರೂಪವನ್ನೇ ಬದಲಿಸಿದ್ದಾರೆ.
ಸ್ಮಾರ್ಟ್ ಕ್ಲಾಸ್ ವೀಡಿಯೋ ಹೀಗಿದೆ:
ಸರ್ಕಾರಿ ಶಾಲೆಗೆ ಹೀಗೊಂದು ಹೈಟೆಕ್ ಸ್ಪರ್ಷ.. ಬೈಂದೂರು ಮೆಟ್ಟಿನಹೊಳೆ ಶಾಲೆಗೆ 'ಸ್ಮಾರ್ಟ್ ಕ್ಲಾಸ್' ಕೊಡುಗೆ ನೀಡಿದ ಡಾ.ಗೋವಿಂದ ಬಾಬು ಪೂಜಾರಿ.. pic.twitter.com/juCFFqGl5u
— jayaa (@unsocial2023) August 26, 2022
ಬಡಪಾಯಿಗಳ ಶಿಕ್ಷಣದ ಅಸರೆಯಾಗಿರುವ ಮೆಟ್ಟಿನಹೊಳೆ ಶಾಲೆಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಿ ಇವರು ಈ ಶಿಕ್ಷಣ ಸಂಸ್ಥೆಯನ್ನು ತಮ್ಮ ಮುಂದಾಳುತ್ವದ ಶ್ರೀ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಾಜೆಕ್ಟರ್, ಸ್ಜ್ರೀನ್ ಸಹಿತ ವಿವಿಧ ಎಲೆಕ್ಟ್ರಾನಿಕ್ ಉಪಕರಣ ಇನ್ಸ್ಟಾಲ್ ಮಾಡಿಸಿ ಸುಸಜ್ಜಿತಗೊಳಿಸಿದರು.
ಈ ಮೂಲಕ ಸಾರ್ವಜನಿಕ ಶಾಲೆಗೆ ಹೈಟೆಕ್ ಸ್ಪರ್ಶ ಸಿಕ್ಕಿದ್ದೇ ತಡ, ಬಡಪಾಯಿ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಈ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಗುರುವಾರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸ್ವತಃ ಡಾ.ಗೋವಿಂದ ಬಾಬು ಪೂಜಾರಿಯವರೇ ಉಪಸ್ಥಿತರಿದ್ದು ಮಕ್ಕಳ ಸಂತಸದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪೂಜಾರಿ, ಈಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಹಳ್ಳಿಗಳ ಮಕ್ಕಳಿಗೂ ಸಿಟಿಯಲ್ಲಿನ ಶಿಕ್ಷಣ ಸಿಗಬೇಕಿದೆ. ಆ ಮೂಲಕ ಹಳ್ಳಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಯಾರಿವರು ಗೋವಿಂದ ಬಾಬು ಪೂಜಾರಿ?
ಉಡುಪಿ ಜಿಲ್ಲೆಯ ಬೈಂದೂರು ಮೂಲದ ಗೋವಿಂದ ಪೂಜಾರಿಯವರು ಅಷ್ಟೇನು ಕಲಿತವರಲ್ಲ. ಆದರೂ ಬಡಪಾಯಿ ಉತ್ಸಾಹಿ ಯುವಜನರ ಪಾಲಿಗೆ ಗುರುಗಳ ಸ್ಥಾನದಲ್ಲಿದ್ದಾರೆ. ಪ್ರಾಥಮಿಕ ಶಿಕ್ಷಣ ಮುಗಿಯುವುದರೊಳಗೆ ಕಾಯಕದ ಹಾದಿ ಹಿಡಿದಿದ್ದ ಗೋವಿಂದ ಪೂಜಾರಿಯವರು ಮುಂಬೈಗೆ ತೆರಲಿ ಹೊಟೇಲ್ ಕ್ಷೇತ್ರದಲ್ಲಿ ಕಾರ್ಮಿಕರಾಗಿ ದುಡಿಮೆ ಆರಂಭಿಸಿದರು. ‘ಕಾಯಕವೇ ಕೈಲಾಸ’ ಎಂಬಂತೆ ಶ್ರದ್ದೆಯಿಂದ ಕಾರ್ಯನಿರ್ವಹಿಸುತ್ತಿದ್ದ ಇವರು ಶೆಫ್ ಆಗಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಖ್ಯಾತರಾದರು. ತಾವೇ ಉದ್ಯಮ ಆರಂಭಿಸಿ ತನ್ನ ವೃತ್ತಿ-ಪ್ರವೃತ್ತಿಯ ಹೆಸರಿನಲ್ಲೇ ‘ChefTalk’ ಎಂಬ ಕಂಪನಿ ಕಟ್ಟಿದರು. ಈ ಕಂಪನಿ ಇದೀಗ ಆರೇಳು ಸಾವಿರ ಕುಟುಂಬಗಳಿಗೆ ಕೆಲಸ ನೀಡಿ ಹಸಿವು ನೀಗಿಸಿದೆ.
ಅಷ್ಟೇ ಅಲ್ಲ, ಈ ಉದ್ಯಮದಲ್ಲಿ ಬಂದ ಹಣದಲ್ಲಿ ಬಹುಪಾಲನ್ನು ಬಡವರಿಗಾಗಿ ಮೀಸಲಿಟ್ಟಿರುವ ಈ ಪೂಜಾರಿ, ಬಡವರನ್ನೇ ದೇವರನ್ನಾಗಿ ಕಾಣುತ್ತಿದ್ದಾರೆ. ಸೂರಿಲ್ಲದ ಅನೇಕರಿಗೆ ಮನೆ ಕಟ್ಟಿಸಿಕೊಟ್ಟಿರುವ ಇವರು, ಅಸಂಖ್ಯ ಜನರಿಗೆ ವೈದ್ಯಕೀಯ ಹಾಗೂ ಶೈಕ್ಷಣಿಕ ನೆರವು ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಲವು ಗ್ರಾಮಗಳಿಗೆ ಜೀವ ಜಲ ಒದಗಿಸಿ ‘ಆಧುನಿಕ ಭಗೀರಥ’ ಎನಿಸಿದ್ದಾರೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅವರು ನಿರಂತರ ಸೇವೆ ನೀಡುತ್ತಾ ಸಾಮಾಜಿಕ ಹರಿಕಾರ ಎನಿಸಿಕೊಂಡಿದ್ದಾರೆ.
ಇವರ ಸೇವೆಯನ್ನು ಗಮನಿಸಿದ ಏಷ್ಯಾದ ಪ್ರತಿಷ್ಠಿತ ವೈದ್ದಿಕ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದೂ ಇತಿಹಾಸ. ಇದೀಗ ಬೈಂದೂರಿನ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಡಾ.ಗೋವಿಂದ ಬಾಬು ಪೂಜಾರಿಯವರ ನಡೆ ಜನಪ್ರತಿನಿಧಿಗಳನ್ನೂ ನಾಚಿಸುವಂತಿದೆ.