ಬೆಂಗಳೂರು: ಕಳೆದ 9 ದಿನಗಳಿಂದ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ಕ್ಕೆ ಇಂದು ತೆರೆ ಬಿದ್ದಿದ್ದು, ಮುಂದಿನ ಹಂತದ ಕಾರ್ಯಕ್ರಮವನ್ನು ಶೀಘ್ರವೇ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ 9 ದಿನಗಳಿಂದ ಸಂಘಟನೆ ಕಾರ್ಯಕ್ರಮ ನಡೆದಿದೆ. ಎಲ್ಲಾ ಜಿಲ್ಲೆಗಳ ಮುಖಂಡರ ಜತೆ ಸಭೆ ನಡೆಸಿದ್ದೇವೆ. ಬಿಡದಿ ಕಾರ್ಯಾಗಾರದ ನಂತರ ಪಕ್ಷದ ಕಚೇರಿಯಲ್ಲಿ ಜನತಾ ಸಂಗಮ ನಡೆದಿದೆ. ಮುಖಂಡರು, ಪದಾಧಿಕಾರಿಗಳು ಹಾಗೂ ಮುಂಬರುವ ಚುನಾವಣೆ ಸಂಭವನೀಯ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದ್ದೇವೆ. ದೇವೇಗೌಡರ ಸಮ್ಮುಖದಲ್ಲಿ ಅವರಿಗೆಲ್ಲ ಗುರಿ ದಾರಿ ತೋರಿದ್ದೇವೆ” ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿಂದಗಿ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಫಲಿತಾಂಶ ಸಿಗಲಿಲ್ಲ. ಆದರೂ ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ಕುಗ್ಗಿಲ್ಲ. ಎಲ್ಲ ಜಿಲ್ಲೆಗಳಿಂದ ಬಂದವರು ಸಂಘಟನಾತ್ಮಕವಾಗಿ ಹೆಚ್ಚು ಆಸಕ್ತಿ ವಹಿಸಿದ್ದರು. ಅವರ ಅನುಮಾನ, ಗೊಂದಲಗಳನ್ನು ಬಗೆಹರಿಸಿದ್ದೇವೆ. ಜನರ ಸಮೀಪ ಹೋಗಲು ಕೆಲ ಯೋಜನೆಗಳ ಅನುಷ್ಠಾನವೂ ಆಗಿದೆ ಎಂದು ಹೇಳಿದರು.
ಕೆಲ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಅಲ್ಲಿನ ಹಲವು ಕೊರತೆಗಳ ಕಾರಣ ಸಂಘಟನೆಗೆ ಸ್ವಲ್ಪ ಸಮಯಾವಾಕಾಶ ಬೇಕಿದೆ. ಜತೆಗೆ, ಬೆಂಗಳೂರು ನಗರದ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಮುಂದಿನ ಬಿಬಿಎಂಪಿ ಚುನಾವಣೆ ಹಾಗೂ 2023ರ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ಮಹಾನಗರಕ್ಕೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕೂಡ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದೇನೆ. ನಗರದ ಮೊತ್ತ ಮೊದಲ ಮೇಲ್ಸೇತುವೆ ಸಿರ್ಸಿ ವೃತ್ತದಿಂದ ಕಾರ್ಪೊರೇಷನ್ ವರೆಗಿನ ಮೇಲುಸೇತುವೆ ಗೌಡರು ಕೊಟ್ಟ ಕೊಡುಗೆ ಎಂದು ಅವರು ತಿಳಿಸಿದರು.
ಈಗಾಗಲೇ ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇವೆ. 2023ಕ್ಕೆ ನಮ್ಮ ಪಕ್ಷದ ಸ್ವತಂತ್ರ ಸರಕಾರ ಬಂದರೆ ಕೊಟ್ಟಿರುವ ಎಲ್ಲ ಭರವಸೆಗಳನ್ನು ಕಾಲ ಮಿತಿಯಲ್ಲಿ ಅನುಷ್ಟಾನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.