ಬೆಂಗಳೂರು: ರಾಜ್ಯ ಸರ್ಕಾರದ ನಿಗಮವೊಂದಕ್ಕೆ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಂಡಿದ್ದೇ ತಡ, ನಿಗಮದ ಇಡೀ ಕಚೇರಿಯೇ ಖಾಲಿಯಾಯಿತೇ ಎಂಬ ಅಚ್ಚರಿಯ ಪ್ರಸಂಗ ನಡೆದಿದೆ.
ಇಂತಹಾ ಕಹಿ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ನ ಕಚೇರಿ.
ಬೆಂಗಳೂರಿನ ಶಾಂತಿನಗರದಲ್ಲಿನ ಟಿಟಿಎಂಸಿ ಕಟ್ಟಡದಲ್ಲಿರುವ ಈ ನಿಗಮಕ್ಕೆ ಡಿ.ಎಸ್.ವೀರಯ್ಯ ಅವರು ಕೆಲ ದಿನಗಳ ಹಿಂದಷ್ಟೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಅಧಿಕಾರವಹಿದ ಸಂದರ್ಭದಲ್ಲಿ ಈ ನಿಗಮಕ್ಕೆ ಕಾಯಕಲ್ಪ ಸಿಗುವ ಭರವಸೆ ಬಿಜೆಪಿ ಪಕ್ಷದ ನಾಯಕರಷ್ಟೇ ಅಲ್ಲ, ಸಂಘ ಪರಿವಾರ ಹಾಗೂ ಸಾರ್ವಜನಿಕ ವಲಯದಲ್ಲೂ ಭಾರೀ ನಿರೀಕ್ಷೆ ವ್ಯಕ್ತವಾಯಿತು. ಆದರೆ ಆಗಿದ್ದೇ ಬೇರೆ. ಇಂದು 12.40ರ ಸುಮಾರಿಗೆ ಈ ನಿಗಮದ ಕಚೇರಿಗೆ ಪತ್ರಕರ್ತರ ತಂಡ ಭೇಟಿ ನೀಡಿದಾಗ ಇಡೀ ಕಚೇರಿಯಲ್ಲಿ ನೀರವ ಮೌನ. ವ್ಯವಸ್ಥಾಪಕ ನಿರ್ದೇಶಕರ ಆಪ್ತ ಸಹಾಯಕ ಪಾಷಾ ಎಂಬವರು ಹಾಗೂ ಇನ್ನಿಬ್ಬರು ಅಲ್ಲಿ ಓಡಾಡುತ್ತಿದ್ದರು. ಅವರನ್ಬು ಕೇಳಿದರೆ ತಾವು ಇಲ್ಲಿ ಅಟೆಂಡರ್ ಆಗಿದ್ದೇವೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಅಧಿಕಾರಿಗಳಾಗಲೀ, ಸಿಬ್ಬಂದಿಯಾಗಲೀ ಕಚೇರಿಯಲ್ಲಿರಲಿಲ್ಲ. ಇಡೀ ಸಿಬ್ಬಂದಿ ಸಮೂಹ ಈ ನಿಗಮದ ಅಧ್ಯಕ್ಷರ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗಿ ಕಚೇರಿಯಲ್ಲಿದ್ದ ವ್ಯಕ್ತಿಯೊಬ್ಬರು ಮಾಹಿತಿ ಹಂಚಿಕೊಂಡರು.
ಎಂಡಿಗೆ ಅಚ್ಚರಿ!!
ಇಲ್ಲಿ 15 ಮಂದಿ ಕೆಲಸ ಮಾಡುತ್ತಿದ್ದು ಬಹುತೇಕ ಮಂದಿ ಇಂದು ಹೊಸ ಅಧ್ಯಕ್ಷರ ಜೊತೆ ಹೊರಗೆ ಹೋಗಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ನೀಡಿದ ಮಾಹಿತಿ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಪತ್ರಕರ್ತರು ವ್ಯವಸ್ಥಾಪಕ ನಿರ್ದೇಶಕರಿಗೆ ಕರೆ ಮಾಡಿ ಪ್ರತಿಕ್ರಿಯೆ ಕೇಳಿದಾಗ ಅವರೂ ವ್ಯವಸ್ಥೆ ಬಗ್ಗೆ ತಿಳಿದು ತಬ್ಬಿಬ್ಬಾದರು. ಈ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಅತ್ಯುತ್ತಮ ಜನಪ್ರತಿನಿಧಿಗೆ ಮುಜುಗರ!!
ಅತ್ಯುತ್ತಮ ಜನಪ್ರತಿನಿಧಿ ಎಂದೇ ಗುರುತಾಗಿರುವ ಮಾಜಿ ಶಾಸಕ ವೀರಯ್ಯ ಅವರು ಇದೀಗ ಈ ನಿಗಮದ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ನಿಗಮಕ್ಕೆ ಕಾಯಕಲ್ಪ ನೀಡಬೇಕೆಂಬುದು ಅವರ ಹೆಬ್ಬಯಕೆ. ಆದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಚೇರಿಯನ್ನೇ ಶೂನ್ಯದತ್ತ ಕೊಂಡೊಯ್ದದ್ದು ಮಾತ್ರ ಅವರ ಬೇಸರಕ್ಕೂ ಕಾರಣವಾಯಿತಂತೆ.
ಸಾರ್ವಜನಿಕರ ಒಳಿತಿಗಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯೊಂದರ ಸ್ಥಿತಿ ಈ ರೀತಿಯಾದರೆ ಹೇಗೆ ಎಂಬ ಪ್ರಶ್ನೆಯನ್ನು ಈ ನಿಗಮದ ಕಚೇರಿಯ ಸನ್ನಿವೇಶ ಹುಟ್ಟು ಹಾಕುವಂತಿತ್ತು.