ಮೈಸೂರು: ‘ಮೂಡಾ’ದಲ್ಲಿ 5 ಸಾವಿರ ಕೋಟಿಯಷ್ಟು ಅಕ್ರಮ ನಡೆದಿದ್ದರೆ ಅದೆಲ್ಲವೂ ಬಿಜೆಪಿ ಆಡಳಿತ ಅವಧಿಯಲ್ಲಿ ಆಗಿರುವ ಅಕ್ರಮ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಸಿಎಂ ಕುಟುಂಬದ ವಿರುದ್ಧ ಮೂಡಾ ಹಗರಣ ಬಗ್ಗೆ ಬಿಜೆಪಿ ನಾಯಕರು ಆರೋಪ ಮಾಡುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಸಿಎಂ ಪತ್ನಿ ಪಾರ್ವತಮ್ಮ ಅವರು ಅನ್ಯಾಯವಾಗಿ ನಿವೇಶನ ಪಡೆದಿರುವ ಒಂದು ದಾಖಲೆ ಇದ್ದರೆ ಅದನ್ನು ಮಾಧ್ಯಮಗಳ ಮುಂದೆ ಇಡಿ. ಇಲ್ಲದಿದ್ದರೆ ನೀವು ಸಾರ್ವಜನಿಕವಾಗಿ ಇರಲು ನೈತಿಕತೆ ಇರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ಅಶೋಕ್ ಅವರೇ ನೀವು ರಾಜಕೀಯಕ್ಕೆ ಬರುವ ಮುನ್ನ ಇದ್ದ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಎಂದು ಹೇಳುತ್ತೀರಾ? ಈಗ ಅದು ಎಷ್ಟಾಗಿದೆ? ನಿಮ್ಮ ಬೇನಾಮಿ ಆಸ್ತಿ ಎಷ್ಟಿದೆ ಎಂದು ಮುಂದಿನ ದಿನಗಳಲ್ಲಿ ಒಂದೊಂದಾಗಿ ಬಿಚ್ಚಿಡುತ್ತೇವೆ. ಇವುಗಳ ಬಗ್ಗೆ ತನಿಖೆ ಮಾಡಿಸಿ ಮುಟ್ಟುಗೋಲು ಹಾಕಿಸುತ್ತೇವೆ. ವಿರೋಧ ಪಕ್ಷ ನಾಯಕನಾಗಿ ನಿಮ್ಮ ಮಾತಿನಲ್ಲಿ ನಿಜ ಇರಬೇಕಲ್ಲವೇ? ವಿರೋಧ ಪಕ್ಷದ ನಾಯಕ ಎಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸರಿಸಮನಾದ ಸ್ಥಾನ. ಸಿದ್ದರಾಮಯ್ಯ ಅವರೂ ಕೂಡ ವಿರೋಧ ಪಕ್ಷದ ನಾಯಕರಾಗಿದ್ದರು. ನಿಮ್ಮಂತೆ ಹುಚ್ಚನ ರೀತಿ ಮಾತನಾಡುತ್ತಿರಲಿಲ್ಲ. ನೀವು ಮಾತೆತ್ತಿದರೆ ಸುಳ್ಳನ್ನೇ ಆಡುತ್ತೀರಿ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ನಿಮ್ಮನ್ನು ತೆಗೆಯುತ್ತಾರೆ ಎಂಬ ಭಯದಲ್ಲಿ ದಿನಬಳಗಾದರೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನೀವು ಆರೋಪ ಮಾಡುವುದಲ್ಲ, ದಾಖಲೆ ಸಮೇತ ಮಾತನಾಡಬೇಕು ಎಂದು ಎಂ.ಲಕ್ಷ್ಮಣ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂಬರುವ ಅಧಿವೇಶನದಲ್ಲಿ ನೀವು ಈ ವಿಚಾರವಾಗಿ ಮಾತನಾಡಿ. ಸಿದ್ದರಾಮಯ್ಯನವರು ಕೇವಲ ಒಂದೇ ಒಂದು ಸಾಲಿನಲ್ಲಿ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನೇ ಅಶೋಕ್ ಅವರು 2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ ಹೇಳಿ 10 ಕೋಟಿ ಹಣ ಪಡೆದಿದ್ದರು. ಆದರೆ ಹಣವೂ ವಾಪಸ್ ನೀಡಲಿಲ್ಲ, ಮೇಯರ್ ಸ್ಥಾನವನ್ನು ನೀಡಲಿಲ್ಲ ಎಂದು ಹೇಳಿಕೆ ನೀಡಿರುವ ದಾಖಲೆ ನಮ್ಮ ಬಳಿ ಇವೆ ಎಂದ ಎಂ.ಲಕ್ಷ್ಮಣ್, ಈ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ನಾವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.