ನವದೆಹಲಿ: ಹಿರಿಯ ನಾಗರಿಕರ ಘನತೆ, ಕಾಳಜಿ ಮತ್ತು ಗೌರವವನ್ನು ಖಚಿತಪಡಿಸುವ ಉದ್ದೇಶದ ‘ಏಜಿಂಗ್ ವಿತ್ ಡಿಗ್ನಿಟಿ’ ಅಭಿಯಾನದಡಿ 5.36 ಲಕ್ಷಕ್ಕೂ ಹೆಚ್ಚು ನಾಗರಿಕರು ರಾಷ್ಟ್ರೀಯ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಈ ಅಭಿಯಾನಕ್ಕೆ ಪೂರಕವಾಗಿ ಎಲ್ಡರ್ಲೈನ್ 14567 ರಾಷ್ಟ್ರೀಯ ಉಚಿತ ಸಹಾಯವಾಣಿ ದೇಶಾದ್ಯಂತ ಹಿರಿಯ ನಾಗರಿಕರಿಗೆ ಮಾಹಿತಿ, ಸಮಾಲೋಚನೆ, ಕುಂದುಕೊರತೆ ಪರಿಹಾರ ಮತ್ತು ತುರ್ತು ನೆರವು ಒದಗಿಸುತ್ತಿದೆ.
ಕೇಂದ್ರ ಸಚಿವ ಡಾ. ವೀರೇಂದ್ರ ಕುಮಾರ್, ಹಿರಿಯ ನಾಗರಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಹೇಳಿ, ‘ಏಜಿಂಗ್ ವಿತ್ ಡಿಗ್ನಿಟಿ’ ಪೋರ್ಟಲ್ನಲ್ಲಿ ಪ್ರತಿಜ್ಞೆ ಸ್ವೀಕರಿಸುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.

2021ರ ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಡರ್ಲೈನ್ 14567 ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಸೇವೆ ನೀಡುತ್ತಿದೆ. ಆರೋಗ್ಯ ಸೇವೆ, ಪಿಂಚಣಿ, ವೃದ್ಧಾಶ್ರಮ, ಕಾನೂನು ನೆರವು, ಸರ್ಕಾರಿ ಯೋಜನೆಗಳ ಮಾಹಿತಿ ಸೇರಿದಂತೆ ಹಲವು ಸೇವೆಗಳನ್ನು ಇದು ಒದಗಿಸುತ್ತದೆ.
ಹಿರಿಯರ ಮೇಲಿನ ದೌರ್ಜನ್ಯ, ನಿರ್ಲಕ್ಷ್ಯ, ಪುನರ್ವಸತಿ ಹಾಗೂ ಭಾವನಾತ್ಮಕ ಬೆಂಬಲಕ್ಕೂ ಈ ಸಹಾಯವಾಣಿ ನೆರವಾಗುತ್ತಿದೆ.
‘ಪ್ರತಿಜ್ಞೆ ತೆಗೆದುಕೊಳ್ಳಿ’ ಅಭಿಯಾನದಡಿ ಭಾಗವಹಿಸುವವರಿಗೆ ಡಿಜಿಟಲ್ ಪ್ರಮಾಣಪತ್ರವೂ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ ಸುರಕ್ಷಿತ, ಗೌರವಯುತ ಮತ್ತು ಘನತೆಯ ಜೀವನ ಒದಗಿಸುವಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.







































































