ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆಯ ಮಾತುಗಳಿಗೆ ಆಧಾರ ಇಲ್ಲ. ಇದೊಂದು ರಾಜಕೀಯ ಪ್ರೇರಿತ ನಡೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಿಎಂ ಬದಲಾವಣೆ ಕುರಿತ ವದಂತಿಗಳಿಗೆ ಪ್ರತಿಕ್ರಿಯಿಸಿದರು. ಇದರಿಂದ ನನ್ನ ನಿರ್ಣಯಗಳು ಇನ್ನಷ್ಟು ಗಟ್ಟಿಯಾಗುತ್ತದೆ. ಇನ್ನೂ ಹೆಚ್ಚಿನ ಕೆಲಸವನ್ನು ಜನರಿಗೆ, ರಾಜ್ಯಕ್ಕೆ ಮಾಡಬೇಕೆಂಬ ಪ್ರೇರಣೆಯನ್ನು ಈ ಎಲ್ಲಾ ವಿಚಾರಗಳು ಕೊಟ್ಟಿವೆ. ದಿನಕ್ಕೆ ಇನ್ನೂ 2 ಗಂಟೆಗಳ ಹೆಚ್ಚಿನ ಕೆಲಸ, ರಾಜ್ಯದ ಅಭಿವೃದ್ಧಿ ಗೆ ಅತಿ ಹೆಚ್ಚು ಸಮಯವನ್ನು ನೀಡಲಾಗುವುದು. ಬರುವ ದಿನಗಳಲ್ಲಿ ಪಕ್ಷದ ಬಲವರ್ಧನೆ ಹಾಗೂ ಜನರ ಬಳಿಗೆ ಹೋಗುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು ಎಂದರು.
ಕಾಂಗ್ರೆಸ್ ಏನೋ ಅಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರ ಇದೆ. ಅದನ್ನು ರಾಜ್ಯದ ತುಂಬಾ ಜನರ ಮನಸ್ಸಿನಲ್ಲಿ ಹರಡಬೇಕೆಂದಿದ್ದಾರೆ. ಜನ ಯಾರೂ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಸ್ಥಿತಪ್ರಜ್ಞನಾಗಿದ್ದೇನೆ. ಸತ್ಯ ನನಗೆ ಗೊತ್ತಿದೆ ಎಂದರು.

























































