ದುಬೈ: ಸದೃಢ ರಾಷ್ಟ್ರ ಹಾಗೂ ನಾಡು ಕಟ್ಟಬೇಕಾದರೆ ಅಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಜಾಗತಿಕ ಆರೋಗ್ಯ ಸಮುದಾಯ ಒಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದರು.
ದುಬೈನಲ್ಲಿ ನಡೆದ ಮೂರು ದಿನಗಳ ವಿಶ್ವ ಆರೋಗ್ಯ ಪ್ರದರ್ಶನ (WHX)ದಲ್ಲಿ ಪಾಲ್ಗೊಂಡಿದ್ದ ಸಚಿವರು, ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆಗಳು ಹಾಗೂ ಕರ್ನಾಟಕದ ಗಮನಾರ್ಹ ಪ್ರಗತಿಯನ್ನು ಪ್ರಸ್ತುತಪಡಿಸಿದರು. “ಆರೋಗ್ಯ ಸವಾಲುಗಳನ್ನು ಎದುರಿಸುವಾಗ ಯಾವುದೇ ಅಡೆತಡೆಗಳು ಅಥವಾ ಗಡಿಗಳು ಇರಬಾರದು, ಆರೋಗ್ಯಕರ ಜನಸಂಖ್ಯೆ ಎಂದರೆ ಆರೋಗ್ಯಕರ ರಾಷ್ಟ್ರ ಎಂದರ್ಥ. ಮಾನವೀಯತೆಯಡಿ ನಾವು ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ದುಬೈನಲ್ಲಿ ನಡೆಯುತ್ತಿರುವ ಮೂರು ದಿನಗಳ WHX 2026 ಪ್ರದರ್ಶನದಲ್ಲಿ 180 ಕ್ಕೂ ಹೆಚ್ಚು ದೇಶಗಳಿಂದ 4,800ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಪ್ರದರ್ಶನವು ಅತ್ಯಾಧುನಿಕ ವೈದ್ಯಕೀಯ ಸಾಧನಗಳು, ಇಮೇಜಿಂಗ್, ಡಯಾಗ್ನೋಸ್ಟಿಕ್ಸ್, ಆರೋಗ್ಯ ರಕ್ಷಣಾ ಐಟಿ, ಡಿಜಿಟಲ್ ಆರೋಗ್ಯ, ಆಸ್ಪತ್ರೆ ಮೂಲಸೌಕರ್ಯ ಮತ್ತು ಸಂಬಂಧಿತ ಸೇವೆಗಳ ಪ್ರದರ್ಶನ ನಡೆಯಲಿದೆ.
ಏಕಕಾಲದಲ್ಲಿ, ವಿವಿಧ ಸಮ್ಮೇಳನಗಳು, ಬೂಟ್ ಕ್ಯಾಂಪ್ಗಳು AI/ಟೆಲಿಹೆಲ್ತ್ ಮತ್ತು ಸುಸ್ಥಿರ ಆರೋಗ್ಯ ರಕ್ಷಣೆ ಕುರಿತು ಚರ್ಚೆ, ಸಮಾಲೋಚನೆ ಸಭೆಗಳು ನಡೆಯಲಿವೆ. ಈ ಪ್ರದರ್ಶನದಲ್ಲಿ ಚೀನಾ, ಜರ್ಮನಿ, ಅಮೆರಿಕ, ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ 33 ರಾಷ್ಟ್ರಗಳು ವೇದಿಕೆಗಳಿವೆ.
ಇದೇ ಸಂದರ್ಭಲ್ಲಿ ಡಾ. ಪಾಟೀಲ್ ಅವರು ಆಸ್ಟರ್ ಡಿಎಂ ಹೆಲ್ತ್ಕೇರ್ ಬೂತ್ಗೆ ಭೇಟಿ ನೀಡಿದರು, ಕಂಪನಿಯ ಸಮಗ್ರ ಆರೋಗ್ಯ ರಕ್ಷಣೆ ಮಾದರಿಯನ್ನು ಶ್ಲಾಘಿಸಿದರು.
ಪ್ರಾಥಮಿಕ, ಮಾಧ್ಯಮಿಕ, ತೃತೀಯ ಮತ್ತು ಕ್ವಾಟರ್ನರಿ ಆರೈಕೆಯನ್ನು ಒಳಗೊಂಡ ಸಮಗ್ರ ವ್ಯವಸ್ಥೆಯನ್ನು ಡಾ. ಆಜಾದ್ ಮೂಪೆನ್ ಮತ್ತು ಅಲಿಶಾ ಮೂಪೆನ್ ಅವರು ಸಚಿವರಿಗೆ ವಿವರಿಸಿದರು. ಯುಎಇ ಆರೋಗ್ಯ ಸಚಿವ ಅಹ್ಮದ್ ಅಲ್ ಸಯೇಗ್ ಉಪಸ್ಥಿತರಿದ್ದರು.
ನಂತರ, ಪ್ರಸಿದ್ಧ ತುಂಬೆ ಮೆಡಿಕಲ್ ಸೆಂಟರ್ನಲ್ಲಿ ತುಂಬೆ ಮೆಡಿಸಿಟಿಯನ್ನು ಡಾ. ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಿದರು. ಡಾ. ತುಂಬೆ ಮೊಯಿದೀನ್ ಮತ್ತು ಕರ್ನಾಟಕ ರಾಜ್ಯ ಅಲೈಡ್ ಹೆಲ್ತ್ಕೇರ್ ಕೌನ್ಸಿಲ್ನ ಅಧ್ಯಕ್ಷ ಡಾ. ಯುಟಿ ಇಫ್ತಿಕರ್ ಉಪಸ್ಥಿತರಿದ್ದರು.





















































