ಬೆಂಗಳೂರು: ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯರಾದ ವಿನೋದ್ ತಾವ್ಡೆ ಅವರು ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿ ತೆರಳಿದ್ದಾರೆ. ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇನ್ನೂ ಕೆಲವರ ಜೊತೆ ಚರ್ಚಿಸಿ ರಾಜ್ಯ ಅಧ್ಯಕ್ಷರು ಯಾರು ಮತ್ತು ಯಾರು ವಿಪಕ್ಷ ನಾಯಕರೆಂದು ಪಕ್ಷ ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರದ ವೀಕ್ಷಕರು ರಾಜ್ಯಾಧ್ಯಕ್ಷರ ಮತ್ತು ವಿಪಕ್ಷ ನಾಯಕರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿ ಕರ್ನಾಟಕಕ್ಕೆ ಹೆಸರುಗಳನ್ನು ತಿಳಿಸುತ್ತಾರೆ ಎಂದು ವಿವರಿಸಿದರು.
ವಿಪಕ್ಷ ನಾಯಕರ ಕುರಿತು ಶೀಘ್ರವೇ ಅವರು ತಿಳಿಸಲಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆಯ ವಿಪಕ್ಷ ನಾಯಕರ ಹೆಸರನ್ನು ತಿಳಿಸುತ್ತಾರೆ. ಕೆಲವೇ ಸಮಯದಲ್ಲಿ ವಿಪಕ್ಷ ನಾಯಕರು ಮತ್ತು ರಾಜ್ಯ ಅಧ್ಯಕ್ಷರ ಕುರಿತ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.