ಬೆಂಗಳೂರು: ಜನತೆಯ ಎದುರು ಸುಳ್ಳಿನ ಸರಮಾಲೆಗಳೆನ್ನೇ ಹಣೆದು, ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ. 2008- 2013ರ ನಿಮ್ಮ ಅವಧಿಯಲ್ಲಿ ಅದೆಷ್ಟು ಆಸ್ತಿಗಳನ್ನು ಅಡವಿಟ್ಟಿದ್ರಿ ಎನ್ನೋದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆ ಆಸ್ತಿಗಳನ್ನು ಸಾಲಮುಕ್ತಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆಸ್ಪತ್ರೆಗಳ ಅವ್ಯವಸ್ಥೆ ಕುರಿತ ಬಿಜೆಪಿ ಟೀಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ಯುಪಿಎ ಸರ್ಕಾರ ಇದ್ದಾಗ 2014ರಲ್ಲಿ ಭಾರತದ ಸರ್ಕಾರದ ಸಾಲ ₹55 ಲಕ್ಷ ಕೋಟಿ ಇತ್ತು. ನಿಮ್ಮ ಆಡಳಿತದ ಹತ್ತು ವರ್ಷದ ಅದು ಬರೋಬ್ಬರಿ ₹200 ಲಕ್ಷ ಕೋಟಿಗೂ ಅಧಿಕವಾಗಿದೆ. ನಿಮ್ಮದೇ ಕೇಂದ್ರ ಸರ್ಕಾರ ಮಾಡಿರುವ ಈ ಬೆಟ್ಟದಷ್ಟು ಸಾಲ ಎಲ್ಲೆಲ್ಲಿ ವಿನಿಯೋಗವಾಗಿದೆ ಎನ್ನುವ ಲೆಕ್ಕ ಕೊಡ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ನಾವು ನೀಡಿದ ಭರವಸೆಯಂತೆ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡು ಬಂದಿದೆ. ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದು ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದ್ದೇವೆ. ಗೃಹ ಅರೋಗ್ಯದಂತಹ ಕಾರ್ಯಕ್ರಮದ ಮೂಲಕ 1 ಕೋಟಿಗೂ ಅಧಿಕ ಜನರ ಬಳಿಗೆ ತೆರಳಿ ನಾಗರಿಕರ ಆರೋಗ್ಯ ತಪಾಸಣೆ ಮಾಡಿದ್ದೇವೆ.
ಒಟ್ಟು 496 ಔಷಧಿಗಳ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ 99 ಔಷಧಿಗಳಿಗೆ Notification of Award (NOA) ನೀಡಲಾಗಿದೆ. ಅಗತ್ಯ ಆಂಟಿಬಯಾಟಿಕ್ಗಳು, ಹೆಚ್ಚು ಬಳಕೆಯಲ್ಲಿರುವ ಔಷಧಿಗಳು ಹಾಗೂ IV ದ್ರಾವಣಗಳು ಮುಂದಿನ 30 ದಿನಗಳಲ್ಲಿ ಲಭ್ಯವಾಗುವಂತೆ ಕ್ರಮವಹಿಸಲಾಗುತ್ತಿದೆ. ರೋಗಿಗಳ ಚಿಕಿತ್ಸೆಯಲ್ಲಿ ಅಡಚಣೆ ಆಗದಂತೆ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪ್ರಯೋಜನ ಮೂಲಕ ಮಧ್ಯಂತರ ಪೂರೈಕೆಯನ್ನು ಕಾರ್ಯಗತಗೊಳಿಸಲಾಗಿದ್ದು, ₹30 ಕೋಟಿ ಆರೋಗ್ಯ ಸಂಸ್ಥೆಗಳಿಗೆ ವಿನಿಯೋಗಿಸಲಾಗುತ್ತಿದೆ. GeM ಮೂಲಕ ನೇರ ಖರೀದಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರಕ್ರಿಯೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ನಾಲ್ಕು ವಿಶೇಷ ಮೌಲ್ಯಮಾಪನ ತಂಡಗಳನ್ನು ರಚಿಸಿ, ಆರೋಗ್ಯ ಸಂಸ್ಥೆಗಳಿಗೆ ಔಷಧಿಗಳನ್ನುಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಜನರ ಮನೆ ಮನೆಗೆ ತೆರಳಿ ಅವರಿಗೆ ಆರೋಗ್ಯ ಭದ್ರತೆ ನೀಡುತ್ತಿರುವ ನಮ್ಮ ಸರ್ಕಾರದ ಬಗ್ಗೆ ಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನವನ್ನು ಇನ್ನಾದರೂ ಬಿಡಿ ಎಂದವರು ತರಾಟೆಗೆ ತೆಗೆದುಕೊಂಡಿದ್ದಾರೆ.

























































