ಬೆಂಗಳೂರು: ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ನಿಂದನೆಯ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಯಾಮ್ ಪಿತ್ರೋಡ ಅವರ ಹೇಳಿಕೆ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸಿದೆ. ವರ್ಣಭೇದ ನೀತಿ ಹಾಗೂ ಬಣ್ಣದ ಕುರಿತು ಮಾತಾಡುವುದು ಕಾಂಗ್ರೆಸ್ನ ಡಿಎನ್ಎ ಯಲ್ಲೇ ಇದೆ. ಇದಕ್ಕೂ ಮುನ್ನವೇ *ಹಿನ್ನೆಲೆ ಗಾಯಕರಾಗಿ ಡಿ.ಕೆ.ಸುರೇಶ್* ಈ ಮಾತನಾಡಿದ್ದರು. ಈಗ ದೇಶ ಒಡೆಯುವ, ಛಿದ್ರ ಮಾಡುವ ಮಾತನ್ನು ಪಿತ್ರೋಡಾ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಸಿದ್ಧಾಂತವನ್ನು ತಿಳಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣದ ಗ್ಯಾರಂಟಿಯನ್ನು ನೀಡಿದ್ದಾರೆ. ಹಿಂದೆ ವರ್ಣಭೇದ ನೀತಿಯಿಂದ ಅನೇಕ ಸಾವು ನೋವುಗಳಾಗಿತ್ತು. ನೆಲ್ಸನ್ ಮಂಡೇಲ, ಮಹಾತ್ಮ ಗಾಂಧೀಜಿಯಿಂದ ಇದರ ವಿರುದ್ಧ ಹೋರಾಟ ನಡೆದಿತ್ತು. ಆದರೆ ಕಾಂಗ್ರೆಸ್ ಬಣ್ಣದ ಆಧಾರದಲ್ಲಿ ಜನರ ಮನಸ್ಸನ್ನು ಒಡೆದಿದೆ. 5 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮನ್ನು ಆಫ್ರಿಕಾದವರು ಎಂದಿದ್ದಾರೆ. ಒಕ್ಕಲಿಗರು, ಲಿಂಗಾಯಿತರು, ದಲಿತರಿಗೆ ಕಾಂಗ್ರೆಸ್ ಯಾವ ಬಣ್ಣ ಹಚ್ಚುತ್ತದೆ ಎಂದು ಪ್ರಶ್ನೆ ಮಾಡಿದರು.
ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಾರೆ. ಸೋನಿಯಾ ದೇಶದ ಸೊಸೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಸೋನಿಯಾ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾಡ್ರಾ ಯಾವ ದೇಶದಿಂದ ಬಂದಿದ್ದಾರೆ ಎಂದು ಮೊದಲು ತಿಳಿಸಬೇಕು. ನುಡಿದಂತೆ ನಡೆಯುವ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಹೇಳುತ್ತಾರೆ. ಈಗ ಬಿಳಿ ಗ್ಯಾರಂಟಿ, ಕಪ್ಪು ಗ್ಯಾರಂಟಿ, ಚೈನೀಸ್ ಗ್ಯಾರಂಟಿ, ಅರಬ್ಬಿ ಗ್ಯಾರಂಟಿ, ಆಫ್ರಿಕಾ ಗ್ಯಾರಂಟಿಯನ್ನು ನೀಡಿದ್ದಾರೆ ಎಂದರು.
























































