ಕೊಪ್ಪಳ: ರಾಜ್ಯದ ಜನರು ನೆರೆ, ಬರ ಇನ್ನಿತರೆ ಕಷರಗಲ್ಲಿ ಇದ್ದಾಗ ಬಾರದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಹೊತ್ತಿನಲ್ಲಿ ಬಂದು ರೋಡ್ ಶೋ ಮಾಡಿ ಕೈಬೀಸಿ ಹೋಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು; ಚುನಾವಣೆ ಬಂದಿದೆ. ಬಿಜೆಪಿಯ ದೆಹಲಿ ನಾಯಕರು ರಾಜ್ಯಕ್ಕೆ ಲಗ್ಗೆ ಇಡ್ತಿದ್ದಾರೆ. ಇವರು ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಅವರು ಬರಬೇಕಾಗಿತ್ತು. ಇವಾಗ ಬಂದು ಮೋದಿಯವರು ರೋಡ್ ಶೋ ಮೂಲಕ ಜನರತ್ತ ಕೈ ಬೀಸುತ್ತಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು? ಕೃಷ್ಣಾ ನ್ಯಾಯಧಿಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ? ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ? ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಅವರು ಕೇಳಿದರು.
ಇಷ್ಟು ದಿನ ಏನನ್ನೂ ಮಾಡದವರು ಈಗ ಬಂದು ನಲ್ಲಿಯಲ್ಲಿ ನೀರು ಕೊಡ್ತಿನಿ ಅಂತ ಮೋದಿ ಹೇಳ್ತಾ ಇದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ? ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ. ಇದರಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಸಂಪದ್ಭರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.
























































