ಬೆಂಗಳೂರು: ವಿಶ್ವ ಒಕ್ಕಲಿಗರ ಮಠದ ಸ್ವಾಮೀಜಿಯವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮಕ್ಕೆ ವಿಧಾನಸಭೆಉ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಒಕ್ಕಲಿಗರ ಮಠದ ಸ್ವಾಮೀಜಿಯವರ ವಿರುದ್ಧ ಪ್ರಕರಣ ದಾಖಲಿಸಿ ಕಿರುಕುಳ ನೀಡಲು ಸರ್ಕಾರ ಮುಂದಾಗಿದೆ. ಒಕ್ಕಲಿಗ ಸ್ವಾಮೀಜಿ ಮೇಲೆಯೂ ದಬ್ಬಾಳಿಕೆ ಮಾಡುವ ವ್ಯವಸ್ಥಿತ ಸಂಚು ಮಾಡಲಾಗಿದೆ. ಕೋರ್ಟ್ ಆದೇಶ ಪಾಲನೆ ಮಾಡಲ್ಲ, ರಸ್ತೆ ಎಲ್ಲವೂ ನಮ್ಮದೇ ಎಂದವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಸಿಎಂ ಸಿದ್ದರಾಮಯ್ಯನವರಿಗೆ ಹಿಂದೂಗಳನ್ನು ಕಂಡರೆ ಅಲರ್ಜಿ. ಆದ್ದರಿಂದಲೇ ಒಕ್ಕಲಿಗ ಸ್ವಾಮೀಜಿ ವಿರುದ್ಧ ದ್ವೇಷ ಕಾರಲಾಗುತ್ತಿದೆ. ಇದು ಒಕ್ಕಲಿಗ ಸಮುದಾಯಕ್ಕೆ ಮಾಡುತ್ತಿರುವ ಅಪಮಾನ ಎಂದರು.
ಸಿಎಂ ಸಿದ್ದರಾಮಯ್ಯ ಹೆಸರಿಗಷ್ಟೇ ಅಹಿಂದ. ಈಗ ಕೇವಲ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ನೌಕರರಿಗೆ ವೇತನ ಕೊಡಲು ಕೂಡ ಹಣವಿಲ್ಲ. ಬಳ್ಳಾರಿ ಆಸ್ಪತ್ರೆಯಲ್ಲಿ ಕಳಪೆ ಔಷಧಿ ನೀಡಿರುವುದರಿಂದ ತಾಯಂದಿರು ಸತ್ತಿದ್ದಾರೆ. ಕೋವಿಡ್ನಲ್ಲಿ ಹಗರಣ ನಡೆದಿದೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಭ್ರಷ್ಟಾಚಾರಕ್ಕಾಗಿ ಕಳಪೆ ಔಷಧಿ ಪೂರೈಸಿದ್ದಾರೆ. ಈ ಸಾವಿಗೆ ಯಾರು ಕಾರಣ ಎಂದು ಜವಾಬ್ದಾರಿ ನಿಗದಿ ಮಾಡಿ. ಈ ಸಾವುಗಳಿಗೆ ನ್ಯಾಯ ನೀಡಿ ಎಂದು ಆಗ್ರಹಿಸಿದರು.