ಹಾವೇರಿ: ಶಿಗ್ಗಾಂವಿ ಹಾಗೂ ಸವಣೂರಿನ 120 ಹಳ್ಳಿಗಳಿಗೆ ಕುಡಿಯುವ ನೀರಿನ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಆಯೋಜಿಸಿದ್ದ’ ’ಕಂದಾಯ ದಾಖಲೆಗಳು ಮನೆ ಮನೆಗೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಿಮ್ಮಾಪುರ ಗ್ರಾಮದಲ್ಲಿ ರಸ್ತೆ, ಶಾಲಾ ಕೊಠಡಿ, ಸಭಾಭವನ, ಕಾಂಕ್ರೀಟ್ ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಗೆ ರೇಷ್ಮೆ ಉತ್ಪಾದಕರಿಗೆ ರೇಷ್ಮೆ ಮಾರುಕಟ್ಟೆ,ಕೈಗಾರಿಕೆ ಟೌನಶಿಪ್ , ರಸ್ತೆಗಳ ನಿರ್ಮಾಣಕ್ಕೆ ಮಂಜೂರಾತಿ ಮಾಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಬಹುಮುಖ ಆರ್ಥಿಕ ಅಭಿವೃದ್ಧಿಯ ಚಿಂತನೆ ನಡೆಸಲಾಗಿದೆ ಎಂದರು.
ಕಂದಾಯ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಬಂದು ಜಮೀನಿನ ಪತ್ರ, ಮ್ಯಾಪ್, ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ಕಂದಾಯ ದಾಖಲೆಗಳನ್ನು ನೀಡುವ ಮೂಲಕ ಸರ್ಕಾರವೇ ಮನೆ ಬಾಗಿಲಿಗೆ ಬರುವ ಕಾರ್ಯಕ್ರಮವಾಗಿದೆ. ಜನರ ಸಂಕಷ್ಟವನ್ನು ತಿಳಿದು ಪರಿಹಾರ ಸೂಚಿಸುವ ಜನಪರ ಸರ್ಕಾರ ನಮ್ಮದು. ರಾಜ್ಯದಲ್ಲಿ ಉಂಟಾದ ಬೆಳೆಹಾನಿಗೆ ಕೇಂದ್ರ ಸರ್ಕಾರದ ಪರಿಹಾರಕ್ಕೆ ರಾಜ್ಯ ಸರ್ಕಾರದ ಪರಿಹಾರವನ್ನೂ ಸೇರಿಸಿ ಒಣಬೇಸಾಯಕ್ಕೆ ಒಟ್ಟು 12600 ರೂ. ನೀರಾವರಿ ಜಮೀನಿಗೆ 25000 ರೂ. ಹಾಗೂ ತೋಟಗಾರಿಕೆ ಬೆಳೆಗೆ 28,000 ರೂ. ಪರಿಹಾರ ನೀಡಲಾಗುತ್ತಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ಮಾಸಾಶನಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಅವರ ಮನೆಗೇ ನೀಡುವ ಕೆಲಸವನ್ನು ಮಾಡುವ ಮೂಲಕ ಜನಪರ, ಜನರಿಗೋಸ್ಕರ ಹಾಗೂ ಜನರ ಹತ್ತಿರವಿರುವಂತಹ ಸರ್ಕಾರ ಎಂದು ನಿರೂಪಿಸಲಾಗಿದೆ ಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಪೌಷ್ಟಿಕತೆ ನಿವಾರಣೆ, ಕೈಗಾರಿಕೆ, ಉದ್ಯೋಗ, ಸ್ತ್ರೀಶಕ್ತಿಸಂಘಗಳ ಸಬಲೀಕರಣ, ನೀರವರಿ, ರಸ್ತೆ ರಾಜ್ಯದ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ವೈಶಿಷ್ಟ್ಯಪೂರ್ಣ ಬಜೆಟ್ ನೀಡಲಾಗಿದೆ. 33 ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ, ಹಾಲು ಉತ್ಪಾದನೆ ಮಾಡುವ ರೈತರಿಗೆ ಆರ್ಥಿಕ ಸದೃಡತೆ ನೀಡಲು ಕ್ಷೀರ ಸಮೃದ್ಧಿ ಬ್ಯಾಂಕ್ ದೇಶದಲ್ಲಿ ಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ.ಇದೇ ಏಪ್ರಿಲ್ 1 ರಂದು ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ರವರು ಬ್ಯಾಂಕಿನ ಲೋಗೋವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ತಿಮ್ಮಾಪುರ ಗ್ರಾಮದಲ್ಲಿ 512 ಪತ್ರಗಳನ್ನು 354 ಕುಟುಂಬಗಳಿಗೆ ಪಹಣಿ,ಅಟ್ಲಾಸ್ ನೀಡಲಾಗಿದೆ. 1,23,380 ಪ್ರತಿಗಳನ್ನು ವಿತರಣೆ ಮಾಡಲಾಗಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ 75000 ಅರ್ಜಿಗಳು ಸ್ವೀಕೃತವಾಗಿದ್ದು,56000 ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಬಡಜನರಿಗೆ 45,000 ಆಯುಷ್ಮಾನ ಕಾರ್ಡ್ ವಿತರಣೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೈರಿಯನ್ನು ಘೋಷಣೆ ಮಾಡಲಾಗಿದೆ. ಆಡಳಿತದಲ್ಲಿ ಕ್ರಾಂತಿ ತಂದಿರುವ ಜನಸ್ಪಂದನಾ ಸರ್ಕಾರವಾಗಿದೆ ಎಂದು ತಿಳಿಸಿದರು.