ಬೆಂಗಳೂರು, ಅಕ್ಟೋಬರ್ 01 : ತೀವ್ರ ಕುತೂಹಲ ಮೂಡಿಸಿದ್ದ ಬಿಬಿಎಂಪಿ ಚುನಾವಣೆ ನಡೆದಿದ್ದು, ಬೆಂಗಳೂರಿನ 53ನೇ ಮೇಯರ್ ಆಗಿ ಸರಳ ಬಹುಮತದಿಂದ ಬಿಜೆಪಿ ಅಭ್ಯರ್ಥಿ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಯೊಬ್ಬರು ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಮೇಯರ್ ಗದ್ದುಗೆ ಏರಲು ಯಶಸ್ವಿಯಾಗಿದೆ..
ಎರಡು ಬಾರಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿ ಆಯ್ಕೆಯಾದ ಗೌತಮ್ ಕುಮಾರ್, RSSನಲ್ಲಿ ಗುರುತಿಸಿಕೊಂಡಿದ್ದಾರೆ. ಬಿಕಾಂ ಪದವೀಧರರಾಗಿರುವ ಗೌತಮ್ ಕುಮಾರ್, ಎಂದಿಗೂ ಪಕ್ಷ ಮತ್ತು ಸಂಘದ ಮಾತನ್ನು ಯಾವತ್ತೂ ಮೀರಿದವರಲ್ಲ. ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಗೌತಮ್ ಕುಮಾರ್ ಪರ 129 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ್ ಗೆ 112 ಮತಗಳು ಲಭ್ಯವಾಗಿದೆ.
ಬೆಂಗಳೂರಿನ 53ನೇ ಮೇಯರ್ ಆಗಿ ಆಯ್ಕೆಯಾದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಮೋದಿಜೀಯವರ ಧ್ಯೇಯೋದ್ದೇಶಗಳನ್ನು ಎತ್ತಿ ಹಿಡಿಯುವ ಯೋಜನೆ ಹಮ್ಮಿಕೊಂಡಿದ್ದೇನೆ..ಬಿಜೆಪಿಯ ಹಿರಿಯ ನಾಯಕರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತೇನೆ. ಬೆಂಗಳೂರಿಗರನ್ನು ಕೊಲ್ಲುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಾಣುವುದು ನನ್ನ ಮುಖ್ಯ ಕೆಲಸವಾಗಿದೆ..ಇಷ್ಟು ಮಾತ್ರವಲ್ಲದೆ ಮೋದಿಯವರ ಸ್ವಚ್ಛ ಭಾರತ್ ಕನಸನ್ನು ನಾನೂ ಬೆಂಗಳೂರಿನಲ್ಲಿ ಸರಿಯಾದ ರೀತಿಯಲ್ಲಿ ಅಳವಡಿಸುತ್ತೇನೆ. ಹಸಿರನ್ನು ಉಳಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ ಎಂಬುದಾಗಿ ನೂತನ ಮೇಯರ್ ಹೇಳಿಕೊಂಡಿದ್ದಾರೆ..
ಇನ್ನು ಬಿಬಿಎಂಪಿ ಮುಂದಿನ ಬಜೆಟ್ ಬಗ್ಗೆ ಮಾತನಾಡಿದ ಅವರು ಹಿರಿಯದ ಜೊತೆ ವಾಸ್ತವಾಂಶದ ಬಗ್ಗೆ ಚರ್ಚೆ ನಡೆಸಿದ ನಂತರವಷ್ಟೇ ಬೆಂಗಳೂರಿನ ಅಭಿವೃಧ್ಧಿ ಕಾರ್ಯಗಳಿಗೆ ಬೇಕಾಗಿರುವ ಬಜೆಟ್ ಲೆಕ್ಕಾಚಾರವನ್ನು ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ.











































































