ಬೆಂಗಳೂರು: ತಮಿಳುನಾಡಿನ ಕುನೂರಿನ ಸಮೀಪ ವಾಯುಸೇನಾ ಹೆಲಿಕಾಪ್ಟರ್ ಪತನಗೊಂಡು ಸಿಡಿಎಸ್ (ಚೀಫ್ ಅಫ್ ಡಿಫೆನ್ಸ್ ಸ್ಟಾಪ್) ಜನರಲ್ ಬಿಪಿನ್ ರಾವತ್ ದಂಪತಿ ಮತ್ತು ಇತರ 12 ರಕ್ಷಣಾಧಿಕಾರಿಗಳು ಸಾವನ್ನಪ್ಪಿದ ಘಟನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ಈ ಘಟನೆಗೆ ದಿಗ್ಬ್ರಾಂತಿ ವ್ಯಕ್ತಪಡಿಸಿರುವ ಅವರು ದೇಶ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಇಂತಹ ದುರಂತ ನಡೆದಿದ್ದು ಇತಿಹಾಸದಲ್ಲೇ ಮರೆಯಲಾಗದ ಘಟನೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಬ್ರಿಗೇಡಿಯರ್ ಎಲ್.ಎಸ್.ಲಿದ್ದರ್, ಲೆಫ್ಟಿನೆಂಟ್ ಕರ್ನಲ್ ಅರವೀಂದರ್ ಸಿಂಗ್, ಎನ್.ಕೆ.ಗುರೇಶರ್ಸಿಂಗ್, ಎನ್.ಕೆ.ಜಿತೇಂದ್ರಘಿ, ಲಾನ್ಸ್ ನಾಯ್ಕ್ ವಿವೇಕಕುಮಾರ್, ಲಾನ್ಸ್ ನಾಯ್ಕ್ ಬಿ.ಸಾಯಿ ತೇಜ, ಲಾನ್ಸ್ ನಾಯ್ಕ್ ಹೌಸ್ ಸತ್ತಾರ್ ಸೇರಿದಂತೆ ಸೇನಾ ಸಹಾಯಕರು, ಭದ್ರತಾ ಕಮಾಂಡ್ಗಳು, ಪೈಲಟ್ಗಳು ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಗಡಿ, ಶತ್ರು ದೇಶದ ವಿರುದ್ಧ ಹೋರಾಟ, ಪ್ರವಾಹ, ರಾಷ್ಟ್ರೀಯ ವಿಪ್ಪತ್ತು ಸೇರಿದಂತೆ ನಾಗರಿಕರ ರಕ್ಷಣೆಗೆ ತಮ್ಮ ಜೀವವನ್ನೇ ತ್ಯಾಗ ಮಾಡಿ ಇನ್ನೊಬ್ಬರನ್ನು ರಕ್ಷಿಸುತ್ತಿದ್ದ ಸೇನೆ ಸಿಬ್ಬಂದಿ ಸಾವನ್ನಪ್ಪಿರುವುದು ದುರಂತ ಎಂದು ಹೇಳಿದ್ದಾರೆ.
ದೇಶದ ಮೊದಲ ಸಿಡಿಎಸ್ (ಚೀಫ್ ಅಫ್ ಡಿಫೆನ್ಸ್ ಸ್ಟಾಪ್) ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರು, ಈ ಹಿಂದೆ ಸೇನಾ ಮುಖ್ಯಸ್ಥರಾಗಿ ಶತ್ರು ರಾಷ್ಟ್ರಗಳ ಜೊತೆ ನಡೆದ ಯುದ್ದವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಪರಮ ವಿಶಿಷ್ಟ ಸೇವಾ ಪದಕ, ಉತಮ್ ಯೋಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯೋಧ್ ಸೇವಾ ಪದಕ, ಸೇನಾ ಪದಕ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಸ್ಮರಿಸಿದ್ದಾರೆ.
ಘಟನೆಯಿಂದಾಗಿ ಇಡೀ ದೇಶಕ್ಕೆ ಆಘಾತವಾಗಿದ್ದು, ಮೃತರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಿ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಶೋಕ ಸಂದೇಶದಲ್ಲಿ ನಿರಾಣಿ ಅವರು ಪ್ರಾರ್ಥಿಸಿದ್ದಾರೆ.