ಜಮ್ಮು: ಪ್ರಸಿದ್ಧ ವಾರ್ಷಿಕ ಶ್ರೀ ಅಮರನಾಥ ಯಾತ್ರೆ ಈ ವರ್ಷ ಜುಲೈ 3ರಂದು ಆರಂಭವಾಗಿ ಆಗಸ್ಟ್ 28ರಂದು ರಕ್ಷಾ ಬಂಧನದಂದು ಮುಕ್ತಾಯಗೊಳ್ಳಲಿದೆ ಎಂದು ಜಮ್ಮು–ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ಒಟ್ಟು 57 ದಿನಗಳ ಕಾಲ ನಡೆಯುವ ಈ ಯಾತ್ರೆಗೆ ಜೂನ್ 29ರಂದು ಜ್ಯೇಷ್ಠ ಪೂರ್ಣಿಮೆಯಂದು ಪ್ರಥಮ ಪೂಜೆ ನಡೆಯಲಿದೆ. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ಈ ಯಾತ್ರೆಗೆ ಏಪ್ರಿಲ್ 15ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ನೋಂದಣಿಯನ್ನು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದ್ದು, ದೇಶಾದ್ಯಂತ ಜೆ & ಕೆ ಬ್ಯಾಂಕ್, ಪಿಎನ್ಬಿ, ಎಸ್ಬಿಐ ಮತ್ತು ಯೆಸ್ ಬ್ಯಾಂಕ್ ಸೇರಿದಂತೆ 554 ಶಾಖೆಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ 3,888 ಮೀಟರ್ ಎತ್ತರದಲ್ಲಿರುವ ಹಿಮಾಲಯ ಗುಹಾ ದೇವಾಲಯವೇ ಯಾತ್ರೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಭಕ್ತರು ಶಿವನ ಪ್ರತೀಕವೆಂದು ನಂಬುವ ಹಿಮದ ಲಿಂಗಾಕಾರ ರಚನೆಯನ್ನು ದರ್ಶನ ಮಾಡುತ್ತಾರೆ.
ಭಕ್ತರು ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗ ಅಥವಾ ಬಾಲ್ಟಾಲ್ ಮಾರ್ಗದ ಮೂಲಕ ಗುಹೆ ತಲುಪಬಹುದು. ಪಹಲ್ಗಾಮ್ ಮಾರ್ಗವು 34 ಕಿ.ಮೀ. ದೂರವಿದ್ದು 3ರಿಂದ 5 ದಿನಗಳ ಪಾದಯಾತ್ರೆಯನ್ನು ಒಳಗೊಂಡಿರುತ್ತದೆ. ಬಾಲ್ಟಾಲ್ ಮಾರ್ಗವು 14 ಕಿ.ಮೀ. ದೂರವಿದ್ದು, ಒಂದೇ ದಿನದಲ್ಲಿ ಹೋಗಿ ಬರುವ ಅವಕಾಶವಿದೆ.
ಎರಡೂ ಮಾರ್ಗಗಳಲ್ಲಿ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದ್ದು, ಯಾತ್ರಿಕರಿಗಾಗಿ ಲಂಗರ್ ಹಾಗೂ ವಸತಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.
ಈ ವರ್ಷದ ಯಾತ್ರೆಗೆ ಭಕ್ತರು ಈಗಿನಿಂದಲೇ ಸಿದ್ಧತೆ ಆರಂಭಿಸಬಹುದಾಗಿದ್ದು, ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ.
























































