ಬೆಂಗಳೂರು : ಬಡವರಿಗಾಗಿ ರೂಪಿಸಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲು ವಸತಿ ಸಚಿವ ಜಮೀರ್ ಅಹಮದ್ ಗಡುವು ನೀಡಿದ್ದಾರೆ.
ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು ಒಂದೊಂದು ಯೋಜನೆ ವರ್ಷಗಳ ಕಾಲ ವಿಳಂಬ ಆದರೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಈಡೇರುವುದಿಲ್ಲ. ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.
ಒಂದೊಂದು ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನು ಪೂರ್ಣ ಗೊಳಿಸಿದ ಬಳಿಕವೇ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳಬೇಕು. ಪ್ರತಿ ಯೋಜನೆಗೆ ಬೇಕಾದ ಹಣಕಾಸು ಹೊಂದಿಕೊಂಡು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಆದ ನಂತರವಷ್ಟೇ ಮತ್ತೊಂದು ಯೋಜನೆ ಪ್ರಾರಂಭಿಸಬೇಕು. ಆಗ ಮಾತ್ರ ನಂಬಿಕೆ ಬರಲು ಸಾಧ್ಯ. ಇದು ಕಡ್ಡಾಯವಾಗಿ ಪಾಲನೆ ಆಗಲೇಬೇಕು ಎಂದು ಸೂಚನೆ ನೀಡಿದರು.
ಪ್ರಧಾನ ಮಂತ್ರಿ ಅವಾಸ್, ಯೋಜನೆಯ ಅವಧಿ ಜೂನ್ ಗೆ ಮುಗಿಯಲಿದ್ದು, 1.41 ಮನೆಗಳ ಗುರಿಯ ಪೈಕಿ 37 ಸಾವಿರ ಮನೆಗಳಿಗೆ ಮಾತ್ರ ಅನುಮತಿ ದೊರೆತಿದೆ. ಚುನಾವಣೆ ಮತ್ತಿತರರ ಕಾರಣಕ್ಕೆ ತಡವಾಗಿದ್ದರೆ ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಯ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳಿ. ಅಗತ್ಯ ವಾದರೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜತೆಯೂ ಚರ್ಚೆ ಮಾಡುತ್ತೇನೆ ಎಂದು ಸೂಚನೆ ನೀಡಿದರು.
ಬಸವ ವಸತಿ, ಅಂಬೇಡ್ಕರ್ ನಿವಾಸ್, ದೇವರಾಜ ಅರಸು ನಗರ ಮತ್ತು ಗ್ರಾಮೀಣ ವಸತಿ ಯೋಜನೆ ಯಡಿ ಹಲವು ವರ್ಷ ಕಳೆದರೂ ಘಟಕ ಪೂರ್ಣ ಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು,ಯೋಜನೆ ಜಾರಿಯಾದ ವರ್ಷದಿಂದ ಇದುವರೆಗಿನ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ನೂರಾರು ಕೋಟಿ ವೆಚ್ಚ ಮಾಡಿದರೂ ಶೇ.30 ರಷ್ಟು ಪ್ರಗತಿ ಆದರೆ ಏನು ಪ್ರಯೋಜನ ಎಂದು ಪ್ರೆಶ್ನೆ ಮಾಡಿದರು.
ವಸತಿ ಯೋಜನೆಗಳ ಜಾರಿ ವಿಳಂಬಕ್ಕೆ ಫಲಾನುಭವಿಗಳ ಪಾಲಿನ ಹಣ ತುಂಬುವಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಾಗ, ಬ್ಯಾಂಕ್ ಗಳ ಜತೆ ಮಾತನಾಡಿ ಸಾಲ ಸೌಲಭ್ಯ ಕೊಡಿಸುವ ಬಗ್ಗೆ ತುರ್ತು ಸಭೆ ನಡೆಸಿ ಎಂದು ಸೂಚನೆ ನೀಡಿದರು.