“ಕಾಶ್ಮೀರ ವಿಮೋಚನೆ”ಯ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆಯನ್ನು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಮಾನವ ಹಕ್ಕುಗಳನ್ನು ಗಂಭೀರವಾಗಿ ಉಲ್ಲಂಘನೆ ಮಾಡಿ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಹುನ್ನಾರ ನಡೆಸುತ್ತಿದೆ.
ಭಾರತದಾದ್ಯಂತ ಜಮ್ಮು ಮತ್ತು ಕಾಶ್ಮೀರವನ್ನು ಸೈನ್ಯ ಸ್ವಾಧೀನ ಮಾಡಿಕೊಂಡಿದೆ ಎಂದು ಮಾತನಾಡಿಕೊಳ್ಳುತ್ತಿದೆ. ಆದರೆ ನಿಜವಾದ ವಾಸ್ತವವನ್ನು ಯಾರೊಬ್ಬರಿಗೂ ತಿಳಿಯದ ಹಾಗೆ ನೋಡಿಕೊಳ್ಳುತ್ತಿದೆ. ಮೊಬೈಲ್, ಇಂಟರ್ನೆಟ್ಗಳಂತಹಾ ಸಂಪರ್ಕ ಸಾಧನಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ.
ರವಿವಾರ ಪೂರ್ವ ಯೋಜನೆಯಂತೆ ರಾಜ್ಯದಾದ್ಯಂತ ಸ್ಥಳಿಯರಲ್ಲದವರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ಕಾರಣಗಳನ್ನು ತಿಳಿಸದೇ, ಎಲ್ಲಿಯೂ ಬಹಿರಂಗಗೊಳಿಸದೆ ಕಾಶ್ಮೀರ ದಿಂದ ಹೊರಹೋಗುವಂತೆ ಆದೇಶಲಾಗಿತ್ತು, ಇದಕ್ಕಾಗಿ ವಿಶೇಷ ಶಸ್ತ್ರಾಸ್ತ್ರ ಪಡೆಗಳ ಘಟಕಗಳನ್ನು ರಾಜ್ಯದ ಹಲವಾರು ಕಡೆ ಬೀಡು ಬಿಟ್ಟಿದ್ದು ಅನುಮಾನಗಳನ್ನು ಇನ್ನೂ ಪ್ರಬಲಗೊಳಿಸುವುದಕ್ಕೆ ಅನುವುಮಾಡಿಕೊಟ್ಟಿದೆ.
ಚುನಾಯಿತ ಪ್ರತಿನಿಧಿಗಳಾದ ಉಮರ್ ಅಬ್ದುಲ್ಲಾ, ಸಜ್ಜಾದ್ ಲಾನೆ ಮತ್ತು ಮಹೇಬೂಬಾ ಮುಫ್ತಿಯವರಂತಾ ಪ್ರಭಾವೀ ನೇತಾರರನ್ನು ಸೇನಾಪಡೆಯ ಕಾವಲಿನಲ್ಲಿ ಗೃಹಬಂಧನದಲ್ಲಿ ಇಡಲಾಗಿದೆ. ಇವರುಗಳಾರೂ ‘ಸ್ವಾತಂತ್ರ್ಯ ಕಾಶ್ಮೀರ’ದ ಬಗ್ಗೆ ಮಾತನಾಡುವ ಪ್ರತ್ಯೇಕವಾದಿಗಳಲ್ಲ.
ಕೇವಲ ರಾಜಕೀಯ ಹಿತಾಸಕ್ತಿ ನೋಡುವ ಕೇಂದ್ರ ಸರ್ಕಾರವು ರಾಕ್ಷಸದಂತೆ ಕಾಶ್ಮೀರದ ಭೂಮಿಯನ್ನು ಮಾತ್ರ ಬಯಸುತ್ತಿದೆ, ಅಲ್ಲಿನ ಜನರ ಹಿತಾಸಕ್ತಿ ಬಗ್ಗೆ ಕಿಂಚಿತ್ತು ಯೋಚಿಸುತ್ತಿಲ್ಲ.





































































