ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC ಕೇಂದ್ರ ಕಚೇರಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಈ ಸಮಾರಂಭದಲ್ಲಿ ಸ್ಫೂರ್ತಿಯಾದರು.
ಪದ್ಮಶ್ರೀ ಪುರಸ್ಕೃತ ಕೊಪ್ಪಳದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ರವರು ಈ ಸಮಾರಂಭದಲ್ಲಿ ಕುತೂಹಲದ ಕೇಂದ್ರಬಿಂದುವಾದರೂ. ತಮ್ಮ ಗಾನಸುಧೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದ ಅವರಿಗೆ ಗೌರವ ಧನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಈಗ ಪುರುಷರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ನಿಗಮದ ತಾಂತ್ರಿಕ ಸಿಬ್ಬಂದಿ ಪುರುಷ ಸಿಬ್ಬಂದಿಯಷ್ಟೇ ಕಾರ್ಯಕ್ಷಮತೆಯಿಂದ ಕಾರ್ಯನಿರ್ವಹಿಸಿ, ವಾಹನಗಳ ಪುನಃಶ್ಚೇತನ ಕಾರ್ಯದಲ್ಲಿ ಮುಂಚೂಣಿಯಲ್ಲಿರುವುದು ಅಭಿನಂದನೀಯ ಎಂದರು.
ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಎಲ್ಲಾ ರೀತಿಯಿಂದಲೂ ಅನುಕೂಲ ಕಲ್ಪಿಸಲಾಗುತ್ತಿದೆ, ಮಾರ್ಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿರ್ವಾಹಕಿಯರಿಗೂ ಕೂಡ ಮಾರ್ಗ ನಿಯೋಜನೆಯಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದೆ. ಮಹಿಳಾ ಸಮಾನತೆ, ಸಬಲೀಕರಣ ಎಂಬುದನ್ನು ನಮ್ಮಲ್ಲಿ ಅಕ್ಷರಶಃ ಕಾಣಬಹುದಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
KSRTC ಉಪಾಧ್ಯಕ್ಷರು ಮಾತನಾಡಿ, ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಪ್ರಸ್ತುತ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಅಭಿವೃದ್ದಿ ಹೊಂದುತ್ತಿರುವುದು ಸ್ವಾಗತಾರ್ಹ ಎಂದು ಎಲ್ಲಾ ಪ್ರತಿಭಾ ಪುರಸ್ಕೃತ 42 ಮಹಿಳಾ ಸಿಬ್ಬಂದಿಯನ್ನು ಅಭಿನಂದಿಸಿದರು.
KSRTC ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾರ್ಗದರ್ಶನವಾಗಿದೆ ಎಂದರು. ಶಿಕ್ಷಣವೇ ಶಕ್ತಿ , ಪ್ರತಿಯೊಬ್ಬ ಮಹಿಳೆಯರು ಶಿಕ್ಷಣ ಪಡೆಯಬೇಕು. ತಮ್ಮ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ದೊರಕಿಸಿಕೊಟ್ಟು, ಸಬಲರನ್ನಾಗಿ ಮಾಡಬೇಕು ಎಂದು ಪ್ರತಿಪಾದಿಸಿದ ಅವರು, ಶಿಕ್ಷಣ ಒಂದೇ ಮಹಿಳೆಯರನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೊಯಲು ಸಾಧನವಾಗಿದೆ ಎಂದರು.
ಮಹಿಳಾ ದಿನಾಚರಣೆ ಸಮಾರಂಭದಲ್ಲಿ ನಿಗಮದ 17 ವಿಭಾಗಗಳಿಂದ ತಲಾ ಒಬ್ಬರಂತೆ ಉತ್ತಮ ಕಾರ್ಯ ಸಾಧನೆ ತೋರಿದ, ತಾಂತ್ರಿಕ ಸಿಬ್ಬಂದಿ-19, ನಿರ್ವಾಹಕರು-16, ಹಾಗೂ ಕರಾಸಾ ಪೇದೆ-7, ಒಟ್ಟು 42 ಮಹಿಳಾ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ತಾಂತ್ರಿಕ ಸಿಬ್ಬಂದಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸಿರುವ ನಗರ ಸಾರಿಗೆ ಬಸ್ಸುಗಳ ಪುನಶ್ಚೇತನದ ವಿಡಿಯೋವನ್ನು ಬಿಡುಗಡೆ ಮಾಡಲಾಯಿತು
- KSRTC ಯಲ್ಲಿ ಒಟ್ಟು 34,000 ಸಿಬ್ಬಂದಿ ಇದ್ದು, ವಿವಿಧ ಹುದ್ದೆಗಳಲ್ಲಿ ಸುಮಾರು 3052 ಮಹಿಳಾ ಉದ್ಯೋಗಿಗಳು ಸೇವೆಸಲ್ಲಿಸುತ್ತಿದ್ದಾರೆ. ಅದರಲ್ಲಿ ಮಹಿಳಾ ಅಧಿಕಾರಿ-80, ನಿರ್ವಾಹಕರು-875, ಚಾಲಕ ಕಂ ನಿರ್ವಾಹಕರು-26, ತಾಂತ್ರಿಕ ಸಿಬ್ಬಂದಿಗಳು-976, ಭದ್ರತಾ ಸಿಬ್ಬಂದಿಗಳು-110 ಕಚೇರಿ ಸಹಾಯಕರು-80 ಹಾಗೂ ಮಹಿಳಾ ಸ್ವಚ್ಚತಾಗಾರರು-135 ಮಂದಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಕಳೆದ ಎರಡು ವರ್ಷಗಳಿಂದ 79 ಮಹಿಳೆಯರನ್ನು ಅನುಕಂಪದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನಿಗಮದಲ್ಲಿ ನೇಮಕಾತಿ ಮಾಡಿರುವುದೂ ವಿಶೇಷ.
- ನಿಗಮವು ಎಲ್ಲಾ ರೀತಿಯಲ್ಲಿಯೂ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹಿಸುತ್ತಿದ್ದು, ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸೈಡ್.
- ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳಾ ನೌಕರರಿಗೆ ಆಗುವ ಲೈಂಗಿಕ ಕಿರುಕುಳವನ್ನು ತಡೆಯಲು Sexual Harassment of Women at Workplace (Prevention, Prohibition & Redressal) Act-2013 ರನ್ವಯ ಮಹಿಳಾ ನೌಕರರ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆ, ಲಿಂಗ ಸಂವೇದಿ ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ.
ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದ ಮಾದರಿಯಲ್ಲಿ 180 ದಿನಗಳ ಹೆರಿಗೆ ರಜೆಯನ್ನು ನೀಡಲಾಗುತ್ತಿದೆ. - ಸರ್ಕಾರದ ಮಾದರಿಯಲ್ಲಿ ಕಿರಿಯ ಮಗುವಿಗೆ 18 ವರ್ಷ ತಲುಪುವವರೆಗೆ ಒಟ್ಟು ಸೇವಾವಧಿಯಲ್ಲಿ ಗರಿಷ್ಠ ಆರು ತಿಂಗಳವರೆಗೆ (180 ದಿನಗಳ) “ಶಿಶುಪಾಲನಾ ರಜೆ” ಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಗುವಿಗೆ ಮೂರು ವರ್ಷ ತುಂಬುವವರೆಗೆ ರೂ.1250/- ಗಳನ್ನು ಮಾಸಿಕ ಶಿಶು ಪಾಲನಾ ಭತ್ಯೆ ನೀಡಲಾಗುತ್ತಿದ್ದು, ಇದುವರೆವಿಗೂ, ನಿರ್ವಾಹಕರು-17, ತಾಂತ್ರಿಕ-82 ಇತರೆ ಮಹಿಳಾ ಸಿಬ್ಬಂದಿಗಳು-78 ಒಟ್ಟಾರೆ 177 ಮಹಿಳಾ ಸಿಬ್ಬಂದಿಗಳು ಶಿಶುಪಾಲನಾ ಭತ್ಯೆಯನ್ನು ಪಡೆಯುತ್ತಿದ್ದಾರೆ.
- ಬುದ್ದಿಮಾಂದ್ಯ/ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಮಹಿಳಾ ನೌಕರರಿಗೆ ಒಟ್ಟು 730 ದಿವಸಗಳ “ಶಿಶು ಪಾಲನಾ ರಜೆ”ಯನ್ನು ವೇತನಸಹಿತವಾಗಿ ನೀಡಲಾಗುತ್ತಿದೆ.
ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ.
- ನಿಗಮವು ವಿದ್ಯಾಚೇತನ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಪಿ.ಹೆಚ್.ಡಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-2, ವೈದ್ಯಕೀಯ-43, ಡಿಗ್ರಿ-703, ಡಿಪ್ಲೋಮೋ-43, ಒಟ್ಟಾರೆ ಪಿ.ಯು.ಸಿ.ಯಿಂದ, ಪಿ.ಹೆಚ್.ಡಿ.ವರೆಗಿನ ವಿದೇಶಿ ವ್ಯಾಸಂಗ ಸೇರಿದಂತೆ ಒಟ್ಟು 1402 ಮಹಿಳಾ ವಿದ್ಯಾರ್ಥಿಗಳಿಗೆ. (2022-23 ರಿಂದ 2024-25) ರೂ.70,71,500/- (ಎಪ್ಪತ್ತು ಲಕ್ಷದ ಎಪ್ಪತ್ತೊಂದು ಸಾವಿರದ ಐನೂರು ರೂ.ಗಳು ಮಾತ್ರ) ವಿದ್ಯಾರ್ಥಿ ವೇತನ ನೀಡಲಾಗಿದೆ.
- ಜನವರಿ 2025 ರಿಂದ ನೂತನ ”ಕೆ.ಎಸ್ಆರ್.ಟಿ.ಸಿ ಆರೋಗ್ಯ” ನಗದು ರಹಿತ ವೈದೈಕೀಯ ಚಿಕಿತ್ಸಾ ಸೌಲಭ್ಯವನ್ನು ಜಾರಿಗೊಳಿಸಿದ್ದು, ಇದುವರೆವಿಗೂ ಒಟ್ಟಾರೆ 984 ಮಹಿಳಾ ಸಿಬ್ಬಂದಿಗಳು ಚಿಕಿತ್ಸೆಗೊಳಪಟ್ಟಿರುತ್ತಾರೆ ಹಾಗೂ ಮಹಿಳಾ ಸಿಬ್ಬಂದಿ ಅವಲಂಬಿತರು 11860 ಜನ ಚಿಕಿತ್ಸೆ ಪಡೆದಿದ್ದು, ಅವಲಂಬಿತರ ಪತ್ನಿ-6996, ತಾಯಿ-3519 ಹಾಗೂ ಹೆಣ್ಣು ಮಕ್ಕಳು-2935 ಚಿಕಿತ್ಸೆ ಪಡೆದಿರುವ ಮೊತ್ತ ರೂ19.87 ಕೋಟಿ ಮೊತ್ತವಾಗಿರುತ್ತದೆ.
KSRTC ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತ) ಡಾ. ನಂದಿನಿದೇವಿ, ಸಹಿತ ಅನೇಕ ಅಧಿಕಾರಿಗಳ ಭಾಗವಹಿಸುವಿಕೆ ಸಮಾರಂಭವನ್ನು ಅರ್ಥಪೂರ್ಣಗೊಳಿಸಿತು.