ಉಡುಪಿ: ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಲಕ್ಷ ಉದ್ಯೋಗ ಸೃಷ್ಟಿಯ ಸಂಕಲ್ಪ ಮಾಡಿದ್ದರೆ, ಇತ್ತ ಕರುನಾಡ ಕರಾವಳಿಯಲ್ಲಿ ಸಮಾಜಮುಖಿ ಉದ್ಯಮಿಯೊಬ್ಬರು ತಾವೂ ಮೂರೂವರೆ ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಮಹಾಯಜ್ಞಕ್ಕೆ ಮುನ್ನುಡಿ ಬರೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರೂ ಆದ ಡಾ.ಗೋವಿಂದ ಬಾಬು ಪೂಜಾರಿ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಕರಾವಳಿ ಸುತ್ತಮುತ್ತಲ ಜಿಲ್ಲೆಗಳ ಯುವಜನರ ಪಾಲಿಗೆ ಕುತೂಹಲದ ಕೇಂದ್ರಬಿಂದುವಾಗಿದೆ.
ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ಸಾಮಾಜಿಕ ಸೇವೆ ಮೂಲಕ ಪ್ರತಿಷ್ಠಿತ ಎನ್ಜಿಒ ಆಗಿ ಗುರುತಾಗಿದೆ. ಪ್ರತಿಷ್ಠಿತ ಆಹಾರೋದ್ದಿಮೆ ಸಂಸ್ಥೆ ChefTalkನ ಮಾಲೀಕರಾಗಿರುವ ಡಾ.ಗೋವಿಂದ ಬಾಬು ಪೂಜಾರಿ ಅವರ ಮುಂದಾಳುತ್ವದ ಈ ಟ್ರಸ್ಟ್ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಪ್ರಯತ್ನಕ್ಕಿಳಿದಿದೆ. ಈ ತಿಂಗಳ 30ರಂದು (ಅಕ್ಟೋಬರ್ 30) ಉಪ್ಪುಂದದ ಕೆರ್ಗಾಲ್ ಬಳಿಯ ನಂದನವನ ಹಾಸ್ಪಿಟಾಲಿಟಿ ಸರ್ವಿಸಸ್, ಪ್ರಜ್ಞಾ ಸಾಗರ್ & ಹಾಲ್ಸ್ ಇಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ ಎಂದು ಡಾ.ಗೋವಿಂದ ಬಾಬು ಪೂಜಾರಿ ತಿಳಿಸಿದ್ದಾರೆ.
ಬಿಎ, ಬಿಕಾಂ, ಬಿಬಿಎಂ, ಬಿಸಿಎ, ಬಿಇ, ಬಿಎಸ್ಸಿ, ಡಿಪ್ಲೊಮಾ, ಐಟಿಐ ಶಿಕ್ಷಣ ಪಡೆದವರಿಗಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, IBM ಸಹಿತ ಐಟಿ ಕಂಪನಿಗಳು, SBI ಲೈಫ್ ಸಹಿತ ಇನ್ಶುರೆನ್ಸ್ ಕಂಪನಿಗಳು, ಅಮೆಜಾನ್ ಸಹಿತ ಇ’ಕಾಮರ್ಸ್ ಸಂಸ್ಥೆಗಳೂ ಸೇರಿದಂತೆ 30ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ ಎಂದು ಡಾ.ಪೂಜಾರಿ ತಿಳಿಸಿದ್ದಾರೆ.
ಉಡುಪಿ-ಬೈಂದೂರು ಪಾಲಿಗೆ ಇದೊಂದು ಐತಿಹಾಸಿಕ ಉದ್ಯೋಗ ಮೇಳವಾಗಲಿದ್ದು, ಈ ಮೂಲಕ ಸುಮಾರು 3000 ಮಂದಿಗೆ ಉದ್ಯೋಗ ಕೊಡಿಸಲು ವಿವಿಧ ಕಂಪನಿಗಳು ಮುಂದಾಗಿವೆ.
ಪ್ರತಿಷ್ಠಿತ ChefTalk, ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ, ಪ್ರಜ್ಞಾ ಸಾಗರ್ ಹೋಟೇಲ್ಸ್ ರೆಸಾರ್ಟ್, ಮತ್ಸ್ಯ ಬಂಧನ ಸಹಿತ ತಮ್ಮ ಒಡೆತನದ ವಿವಿಧ ಸಂಸ್ಥೆಗಳ, ಯೋಜನೆಗಳ ಮೂಲಕ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿರುವ ಡಾ.ಗೋವಿಂದ ಬಾಬು ಪೂಜಾರಿ, ಬೈಂದೂರಿನ ಈ ಬೃಹತ್ ‘ಉದ್ಯೋಗ ಮೇಳ’ದ ಮೂಲಕ 3 ಸಾವಿರ ಮಂದಿಗೆ ನೌಕರಿ ಕೊಡಿಸಲು ನಡೆಸಿರುವ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.