ಬೆಂಗಳೂರು: ಮೋದಿ ಸರ್ಕಾರದ ‘ಲೆಕ್ಕ’ ಮೂಲಕ ದೇಶದ ಪ್ರಗತಿ ಪಕ್ಕಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಶ್ಲೇಷಿಸಿದ್ದಾರೆ. ಭಾರತದ ಅರ್ಥಿಕ ಪ್ರಗತಿಗೆ ದೂರ ದೃಷ್ಟಿಯ ಬಜೆಟ್ ಎಂದವರು ಬಣ್ಣಿಸಿದ್ದಾರೆ.
ಕೇಂದ್ರದ ಹಣಕಾಸು ಸಚಿವರಾದ ನಿರ್ಮಾಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಸಿರುವ ಸಿ.ಟಿ.ರವಿ, ಭಾರತದ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದ್ದು ಜನ ಸಾಮಾನ್ಯರಿಗೆ, ರೈತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಆಶಾದಾಯಕವಾಗಿದೆ. ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿ ಮಾಡುವ ಪ್ರಯತ್ನ ಮಾಡಿರುವುದು ದೂರ ದೃಷ್ಟಿಯ ಬಜೆಟ್ಗೆ ಹಿಡಿದ ಕೈಗನ್ನಡಿಯಂತಿದೆ. 60 ಲಕ್ಷ ಉದ್ಯೋಗಗಳ ಸೃಷ್ಟಿಯ ಗುರಿಯ ಜೊತೆಗೆ ಆರ್ಥಿಕತೆಯನ್ನು ಉನ್ನತಿಗೆ ಕೊಂಡೊಯ್ಯವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿರುವುದು ದೇಶದ ಅಭಿವೃದ್ಧಿಯ ದಿಕ್ಸೂಚಿಯಂತಿದ ಎಂದಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿರುವುದಕ್ಕೆ ‘ಒನ್ ಕ್ಲಾಸ್ ಮೆನಿ ಟಿವಿ’ ಆರಂಭಿಸಿರುವುದು ಶಾಘನೀಯ. ಪ್ರಧಾನಿ ‘ಇ-ವಿದ್ಯಾ’ ಯೋಜನೆ ಅಡಿಯಲ್ಲಿ 200 ಚಾನೆಲ್ಗಳು ಅಸ್ತಿತ್ವಕ್ಕೆ ಬರಲಿದ್ದು ಶಿಕ್ಷಣಕ್ಕೆ ಪೂರಕವಾದ ಯೋಜನೆ ಆಗಿದೆ ಎಂದಿದ್ದಾರೆ.
ʼಕೆನ್ ಬೆಟ್ವಾʼಯೋಜನೆಯ ಅನುಷ್ಠಾನದ ಮೂಲದ ಅಂದಾಜು ವೆಚ್ಚ 44,605 ಕೋಟಿಯಲ್ಲಿ 9 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನಗಳು, 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್. 27 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಗುರಿ ಹೊಂದಲಗಿದ್ದು ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಸ್ವಾವಲಂಬಿತನೆಕ್ಕೆ ಸಾಕ್ಷಿಯಾಗಲಿದೆ.
ಕಾವೇರಿ–ಪೆನ್ನಾರ್ ಸೇರಿ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಿರುವುದು ಕರ್ನಾಟದ ಅಭಿವೃದ್ಧಿಗೆ ದೊಡ್ಡ ಕೊಡುಗೆ ಎಂದರೆ ತಪ್ಪಲ್ಲ ಎಂದು ಆಶಾವಾದ ವ್ಯಕ್ತಪಡಿಸಿರುವ ಸಿ.ಟಿ.ರವಿ, ಗೋದಾವರಿ–ಕೃಷ್ಣ, ಕೃಷ್ಣಾ–ಪೆನ್ನಾರ್, ನರ್ಮದಾ–ಗೋದಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಿರುವುದು ಸಮಗ್ರ ಅಭಿವೃದ್ಧಿಗೆ ಉತ್ತಮವಾದ ಯೋಜನೆಯಾಗಿದೆ. ಇದಕ್ಕಾಗಿ ಈ ಬಜೆಟ್ನಲ್ಲಿ 44ಸಾವಿರ ಕೋಟಿ ಹಣ ಮೀಸಲಿಡಲಾಗಿದ್ದು ಇದು ರೈತರ ಪಾಲಿಗೆ ಆಶಾದಾಯಕವಾದ ಯೋಜನೆಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತುನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ರೂ 48,000 ಕೋಟಿ ಮಂಜೂರು ಮಾಡಿರುವುದು ಅದ್ಭುತವಾದ ಯೋಜನೆಯಾಗಿದೆ. ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸಲು ದೇಶಾದ್ಯಂತ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿರುವುದು ಶಾಘನಾರ್ಹ ಎಂದವರು ಹೇಳಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ತನ್ನ ಪ್ರಯೋಜನಗಳನ್ನು ಗ್ರಾಹಕ ಸ್ನೇಹಿಯಾಗಿ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಿದ್ದು ಆರ್ಥಿಕಾಭಿವೃದ್ಧಿಗೆ ಪೂರಕವಾಕವಾಗಲಿವೆ. 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು ಸಾರ್ವಜಿಕರ ಒಳಿತಿಗಾಗಿ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮವಾಗಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಅಂದಾಜು ಶೇ.9.2ರಷ್ಟಿರುವುದು ದೇಶದ ಪ್ರಗತಿಯ ಸಂಕೇತ ಎಂದು ವರ್ಣಿಸಿರುವ ರವಿ, ಒಟ್ಟಾರೆ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಟೊಂಕಕಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.