ಹಾಸನ: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದು ಹಿರಿಯರ ಮಾತು. ಋಣಾನುಬಂಧ ಎಂಬುದೂ ಪೂಜ್ಯರ ಹಿತಮಾತು. ಅದೇನೇ ಇದ್ದರೂ ವಧೂ-ವರರಿಗಾಗಿ ನಡೆಯುವ ಹುಡುಕಾಟ, ಪರದಾಟ ಮಾತ್ರ ಹೆತ್ತವರ ಸಂಕಟ.
ಇಲ್ಲಿ ಮೂವರು ತ್ರಿಕೋನ ಪ್ರೇಮಿಗಳ ನಡುವೆ ಋಣಾನುಬಂಧದ ಬಗ್ಗೆ ಸತ್ವ ಪರೀಕ್ಷೆ ನಡೆದಿದೆ ಎಂದೇ ಹೇಳಬಹುದು. ತ್ರಿಕೋನ ಪ್ರೇಮ ಅಂದರೆ ಅದು ಒಂದು ದುರಂತ ಕಥೆಯ ಸನ್ನಿವೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ‘ಟಾಸ್’ ಎಂಬ ಸೂತ್ರ ಇಡೀ ಊರಿನ ಸಂಕಟವನ್ನು ದೂರ ಮಾಡಿದೆ.
ಏನಿದು ‘ಟಾಸ್’ ಟಾಸ್ಕ್..
ಹಾಸನ ಜಿಲ್ಲೆ ಅರಕಲಗೂಡು ಸಮೀಪದ ಹಳ್ಳಿಯೊಂದರ ಯುವಕ ಇಬ್ಬರು ಯುವತಿಯರನ್ನು ಪ್ರೀತಿಸುತ್ತಿದ್ದ. ಇಬ್ಬರು ಯುವತಿಯರೂ ಈ ಯುವಕನನ್ನು ಮದುವೆಯಾಗಲು ರೆಡಿಯಾಗಿದ್ದರು. ಒಬ್ಬಳನ್ನಷ್ಟೇ ಯುವಕ ವರಿಸಬೇಕಿತ್ತು. ಆದರೆ ಯಾರನ್ನು ವರಿಸುವುದು ಎಂಬ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ. ಅಷ್ಟರಲ್ಲೇ ‘ನನ್ನನ್ನೇ ಮದುವೆಯಾಗಬೇಕು ಇಲ್ಲವಾದರೆ ಸಾಯುತ್ತೇನೆ’ ಎಂದು ಇಬ್ಬರೂ ಚಾಲೆಂಜ್ ಮಾಡಿದ್ದರು. ಹಾಗಾಗಿ ಹುಡುಗ ನಿರ್ಧಾರ ತೆಗೆದುಕೊಳ್ಳಲಾಗದೆ ಸಂದಿಗ್ಧ ಸ್ಥಿತಿಯಲ್ಲಿದ್ದ.
ಇಡೀ ಊರಿಗೇ ಅಗ್ನಿಪರೀಕ್ಷೆ..!
ಮದುವೆ ವಿಚಾರದಲ್ಲಿ ಮೂರು ಕುಟುಂಬಗಳ ಅಸಹಾಯಕತೆಯ ಬಗ್ಗೆ ತಿಳಿದ ಊರ ಹಿರಿಯರು ಸಮಸ್ಯೆ ಬಗೆಹರಿಸಲು ಅಖಾಡಕ್ಕೆ ಇಳಿದರು. ಕೆಲವು ದಿನಗಳ ಹಿಂದೆ ಮೂರೂ ಕುಟುಂಬಗಳ ಸದಸ್ಯರನ್ನು ಸೇರಿಸಿ ಸಂಧಾನ ನಡೆಸಲಾಯಿತು. ಆದರೆ ಇಬ್ಬರೂ ಹುಡುಗಿಯರೂ ತಾನೇ ಮದುವೆಯಾಗುವುದು ಎಂದು ಪಟ್ಟುಹಿಡಿದರು. ಊರವರ ಸಲಹೆಗೆ ಇಬ್ಬರೂ ಜಪ್ಪೆನ್ನಲಿಲ್ಲ. ಅದರಲ್ಲೊಬ್ಬಳಂತೂ ವಿಷ ಸೇವಿಸಿ ಆತ್ನಹತ್ಯೆಗೆ ಮುಂದಾದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇದರಿಂದಾಗಿ ಇಡೀ ಊರು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿತು.
ಈ ನಡುವೆ ಒಂದು ನಿಷ್ಟೂರ ಸೂತ್ರವನ್ನು ಊರವರು ಮುಂದಿಟ್ಟರು. ಅಂತಿಮ ಸಂಧಾನದ ದಿನವನ್ನು ಸೆ.4, ಶುಕ್ರವಾರಕ್ಕೆ ನಿಗದಿಪಡಿಸಲಾಗಿತ್ತು.
ಅದರಂತೆ ಶುಕ್ರವಾರ ಸಂಧಾನ ಸಭೆಯಲ್ಲಿ ‘ಟಾಸ್’ ಹಾಕಿ ಯುವತಿಯರ ಅದೃಷ್ಟ ತಿಳಿಯಲು ತೀರ್ಮಾನಿಸಲಾಯಿತು. ಈ ‘ಟಸ್’ ಟಾಸ್ಕ್ ನಂತರ ಯಾವುದೇ ತಕರಾರು ಇರಬಾರದು, ಪೊಲೀಸ್ ಕೇಸ್ ಹಾಕಲೂಬಾರದು ಎಂಬ ಷರತ್ತನ್ನೂ ಮುಂದಿಡಲಾಯಿತು.
ಆದರೆ ಅಲ್ಲಿ ಆಗಿದ್ದೇ ಬೇರೆ. ‘ಟಾಸ್’ ಟಾಸ್ಕ್ ಮೂಲಕ ವಧು ಆಯ್ಕೆ ನಡೆಯುವ ಹೊತ್ತಿಗೆ ಯುವಕ ಮಾಯವಾಗಿದ್ದ. ಆತ ತೆರಳಿದ್ದು ವಿಷ ಸೇವಿಸಿದ್ದ ಯುವತಿಯತ್ತ. ತನ್ನನ್ನು ಪಡೆಯಲು ಸಾವನ್ನೇ ಎದುರಿಸಿದವಳೇ ಶ್ರೇಷ್ಠಳು ಎಂದು ಆತ ಈಕೆಯನ್ನು ಆಯ್ಕೆ ಮಾಡಿದ್ದಾಳೆ.
ಅದಾಗಲೇ ಈ ಬಗ್ಗೆ ಅರಿತ ಮತ್ತೊಬ್ಬಳ ಮನಸ್ಸು ಭಾರವಾಗಿತ್ತು. ಆದರೂ ಪರಿಸ್ಥಿತಿ ಬಗ್ಗೆ ರಾಜಿಯಾಗಲೇಬೇಕಾಯಿತು.