ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ 37ನೇ ದಿನವೂ ಮುಂದುವರಿಯಿತು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರ ರೈತರ ಆಹೋ ರಾತ್ರಿ ಧರಣಿಯ ನಡುವೆಯೂ ಮೂರನೇ ದಿನದ ಸರದಿ ಉಪವಾಸ ಸತ್ಯಾಗ್ರಹ ಗಮನಸೆಳೆಯಿತು.
ಕಬ್ಬು ಬೆಳೆಗಾರರ ಹೋರಾಟ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತಾಳಿರುವ ಹಿನ್ನೆಲೆಯಲ್ಲಿ ಡಿ.29ರಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲು ರೈತರು ತೀರ್ಮಾನಿಸಿದ್ದಾರೆ.
ಕಳೆದ 14 ದಿನಗಳ ಹಿಂದೆ ಧರಣಿ ನಿರತ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತುಕತೆ ನಡೆಸಿ ಕಬ್ಬಿನ ದರ ಎರಿಕೆ ಭರವಸೆ ನೀಡಿದ್ದಾರೆ. ಆದರೆ ಈ ತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಕೇವಲ ಮಾತಿನ ಭರವಸೆ ಬೇಡ, ನುಡಿದಂತೆ ನಡೆಯಬೇಕು, ನ್ಯಾಯ ಸಮ್ಮತ ಕಬ್ಬುದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಮೂರು ದಿನದಿಂದ ಐವರು ರೈತರು ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇಂದು
ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ್ ಬುಬಾಟಿ ಪರಶುರಾಮಡಂಗೆ ರಾಜು ಧಾರವಾಡಕರ
ಉದಾಯ ಧಾರವಾಡಕರ ಪರಶುರಾಮ ಮಂಜನ್ನವರ ಎಲ್ಲರೂ ಹಳಿಯಾಳದ ರೈತರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಇನ್ನುಳಿದ ರೈತರು ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ನೇತೃತ್ವದಲ್ಲಿ ರೈತರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರವು ರೈತರ ಹೋರಾಟವನ್ನು ಲಘುವಾಗಿ ಕಾಣಬಾರದು. ವಚನಭ್ರಷ್ಟವಾಗಬಾರದು ಎಂದರು. ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಾಳೆಯಿಂದ ನಿರಂತರ ಉಪವಾಸ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ಮುಖ್ಯಮಂತ್ರಿಗಳು ಕಬ್ಬು ದರ ಏರಿಕೆ ಮಾಡಲು ಸರ್ಕಾರಕ್ಕೆ ಸಾಧ್ಯವಿಲ್ಲ ಎನ್ನುವಂಥಾದರೆ ಬಹಿರಂಗವಾಗಿ ತಿಳಿಸಿ, ರಾತ್ರಿ ವೇಳೆಯಲ್ಲಿ ಮುಂಜಾಗ್ರತಾ ಕ್ರಮವೆಂದು ರೈತರ ಮುಖಂಡರನ್ನು ಬಂಧಿಸುವುದು, ಚಳುವಳಿಯನ್ನು ದಿಕ್ಕು ತಪ್ಪಿಸುವುದು, ಪೊಲೀಸ್ ಬಲದ ಮೂಲಕ ಹತ್ತಿಕುವುದು ಸರ್ಕಾರಕ್ಕೆ ಶೋಭೆತರುವುದಿಲ್ಲ ಎಂದ ಕುರುಬೂರು ಶಾಂತಕುಮಾರ್, ಕಬ್ಬು ಬೆಳೆಗಾರ ರೈತರಿಗೆ ಯಾವುದೇ ಅಡಚಣೆ ಇಲ್ಲದೆ ಜಾಥಾ ನಡೆಸಲು ಅವಕಾಶ ಕಲ್ಪಿಸಬೇಕು. ಆಗ ನಮ್ಮ ಶಕ್ತಿ ತೋರಸುತ್ತೇವೆ ಎಂದರು.
























































