ಮೈಸೂರು: ಕಾಂಗ್ರೆಸ್ ಒಡೆದ ಮನೆಯಾಗಿದೆ. ಮೊದಲು ಅದನ್ನು ಜೋಡಿಸಿಕೊಳ್ಳುವುದು ಒಳ್ಳೆಯದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಪಕ್ಷದವರು ಮೊದಲು ಅವರ ಮನೆಯ ಯಾತ್ರೆಯನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಸಿದ್ದರಾಮಯ್ಯನವರದ್ದು ಒಂದು ಗುಂಪು, ಪರಮೇಶ್ವರ ಅವರದ್ದೇ ಒಂದು. ಹರಿಪ್ರಸಾದ್ ಅವರದ್ದೇ ಒಂದು ಗುಂಪು. ಖರ್ಗೆಯವರದ್ದೇ ಒಂದು ಗುಂಪು. ಕೆ.ಹೆಚ್.ಮುನಿಯಪ್ಪ ಅವರದ್ದೇ ಒಂದು ಗುಂಪು. ಹೀಗೆ ನಾನಾ ಗುಂಪುಗಳಾಗಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಭಾರತ ಜೋಡೊ ಯಾತ್ರೆ ಮಾಡುವುದಕ್ಕಿಂತ ಮೊದಲು ಅವರ ಮನೆ ಗಳನ್ನು ಸರಿಪಡಿಸಿಕೊಂಡು ಭಾರತ್ ಜೋಡೋ ಯಾತ್ರೆ ಕೈಗೊಂಡರೆ ಅನುಕೂಲವಾಗುತ್ತದೆ ಎಂಬುದು ನನ್ನ ಭಾವನೆ ಎಂದರು.
ಮೈಸೂರು ಮೇಯರ್ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಉಪಾಧ್ಯಕ್ಷರು ಬಂದು ಪಾಲಿಕೆ ಸದಸ್ಯರಿಂದ ಮಾಹಿತಿ ಪಡೆದು ಅಧ್ಯಕ್ಷರಿಗೆ ರವಾನಿಸಿದ್ದಾರೆ. ಅಧ್ಯಕ್ಷರಿಂದ ಇದುವರೆಗೂ ನನಗೆ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ತಕ್ಷಣ ತಿಳಿಸಲಾಗುವುದು. ಪಕ್ಷ ಏನು ಹೇಳಲಿದೆಯೋ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಆದೇಶವನ್ನು ಪಾಲಿಸುತ್ತೇನೆ ಎಂದರು.
ಮೇಯರ್ ಚುನಾವಣೆಯಲ್ಲಿ ನಿಮ್ಮ ತೀರ್ಮಾನವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನದೇನೂ ತೀರ್ಮಾನವಿಲ್ಲ. ಕಳೆದ ಬಾರಿ ಪಕ್ಷ ಏನು ಹೇಳಿತ್ತೋ ಅದನ್ನು ಮಾಡಿದ್ದೆವು. ಇಂದು ಇನ್ನೂ ಪಕ್ಷ ನಮಗೆ ನಿರ್ದೇಶನ ನೀಡಿಲ್ಲ. ಪಕ್ಷ ಏನು ಹೇಳಲಿದೆ ಅದರ ಪ್ರಕಾರವೇ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಜೆಡಿಎಸ್ ನಾಯಕರು ನಿಮ್ಮ ಜೊತೆ ಸಂಪರ್ಕಕ್ಕೆ ಬಂದಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾ.ರಾ. ಮಹೇಶ್ ಅವರು ದೂರವಾಣಿ ಕರೆ ಮಾಡಿದ್ದರು. ಪಕ್ಷದ ಅದೇಶವನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದೇನೆ ಎಂದರು.
ಮಳೆ ಹಾನಿ, ಬೆಳೆಹಾನಿ ಕುರಿತು ಪ್ರತಿಕ್ರಿಯಿಸಿ, ಎಲ್ಲೆಲ್ಲಿ ಹಾನಿಯಾಗಿದೆ ಎಂಬ ಮಾಹಿತಿ ಬಂದಿದೆ. ಕಂದಾಯ ಮಂತ್ರಿಗಳ ಜೊತೆಗೂ ಮಾತನಾಡಿ, ಸಾಕಷ್ಟು ಅನುದಾನವನ್ನು ಮೈಸೂರಿಗೆ ಬಿಡುಗಡೆ ಮಾಡಬೇಕು ಎಂದು ಕೇಳಿದ್ದೇನೆ. ಅವರೂ ಕೂಡ ಒಪ್ಪಿಕೊಂಡಿದ್ದಾರೆ. ತಕ್ಷಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೆ ಎಲ್ಲೆಲ್ಲಿ ಹಾನಿಯಾಗಿದೆ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಲಾಗಿದೆ. ಹಾನಿಗೀಡಾಗಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ನಂಜನಗೂಡಿಗೆ ಭೇಟಿ ನೀಡಿದ್ದಾರೆ. ಸಂಪೂರ್ಣ ಮಾಹಿತಿ ಸಂಗ್ರಹಿಸಲು ಹೇಳಿದ್ದೇನೆ ಎಂದು ತಿಳಿಸಿದರು.

























































