ಮಂಗಳೂರು: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಇದೀಗ ಮತ್ತೊಂದು ಕೈಂಕರ್ಯದಿಂದ ಆಸ್ತಿಕರ ಗಮನಸೆಳೆದಿದೆ. ‘ಚೆಂಡು ಉತ್ಸವದ ನಾಡು’ ಎಂದೇ ಗುರುತಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಶತಮಾನದ ನಂತರ ಶತಚಂಡಿಕಾಯಾಗ ನಡೆಯುತ್ತಿದೆ.
ಇದು ನಿಜಕ್ಕೂ ಅಪೂರ್ವ ಹಾಗೂ ಅನನ್ಯ ಕೈಂಕರ್ಯ. ಸುಮಾರು 105 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಇಂತಹಾ ಚಂಡಿಕಾ ಯಾಗ ನಡೆದಿತ್ತು. ಲೋಕ ಕಲ್ಯಾಣಾರ್ಥವಾಗಿ ನೆರವೇರುತ್ತಿರುವ ಈ ಶತಚಂಡಿಕಾಯಾಗದಲ್ಲಿ ದೇಶದ ವಿವಿಧೆಡೆಯ ಯತಿಗಳು ಭಾಗಿಯಾಗುತ್ತಿದ್ದಾರೆ. ಚೆಂಡು ಉತ್ಸವ ಸಂದರ್ಭದ ಜನೋತ್ಸಾಹಕ್ಕೆ ಈ ಶತಚಂಡಿಕಾಯಾಗದ ಸಡಗರ ಸಾಕ್ಷಿಯಾಗುತ್ತಿರುವುದು ವಿಶೇಷ.
ಮಾರ್ಚ್ 5ರ ಬೆಳಿಗ್ಗೆ 6 ರಿಂದ ಶತಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ ನೆರವೇರಲಿದೆ. ಮರುದಿನ, ಮಾರ್ಚ್ 6, ಗುರುವಾರ ‘ದೊಡ್ಡ ರಂಗಪೂಜೆ’ ಉತ್ಸವ ನೆರವೇರಲಿದೆ.
ಮಾರ್ಚ್ 1 ರಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ವಿವಿಧ ಕೈಂಕರ್ಯಗಳು ನೆರವೇರುತ್ತಿವೆ. ಮಾರ್ಚ್ 5 ರಂದು ಬುಧವಾರ ಶತಚಂಡಿಕಾಯಾಗ ಪರಿಪೂರ್ಣವಾಗಿ ನೆರವೇರಲಿದೆ. ಲೋಕಕಲ್ಯಾಣಾರ್ಥದ ಜೊತೆಯಲ್ಲೇ ಸಾನಿಧ್ಯ ಅಭಿವೃದ್ದಿಗಾಗಿ ಸುಮಾರು 105 ವರ್ಷಗಳ ಬಳಿಕ ಶತಚಂಡಿಕಾಯಾಗ ಪೂಜೆ ನಡೆಯುತ್ತಿದ್ದು ವೈಧಿಕ ಕಾರ್ಯಕ್ರಮಗಳಲ್ಲಿ ಸಾವಿರ ಸೀಮೆಯ ಭಕ್ತರು ಕೈಜೋಡಿಸಿದ್ದಾರೆ.
ಎಲ್ಲವೂ ಅಚ್ಚುಕಟ್ಟು..
2019 ರಲ್ಲಿ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಕರಾವಳಿ ಜಿಲ್ಲೆಯ ಮಾಹಾ ಉತ್ಸವ ರೀತಿಯಲ್ಲಿ ಗಮನಸೆಳೆದಿತ್ತು. ಸ್ವಯಂಸೇವಕರ ವಿವಿಧ ತಂಡಗಳ ಪರಿಶ್ರಮ ಮೂಲಕ ಅತಿಥಿ ಭಕ್ತರ ಮೆಚ್ಚುಗೆ ಗಳಿಸಿತ್ತು. ಇದೀಗ 105 ವರ್ಷಗಳ ಬಳಿಕ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಶತಚಂಡಿಕಾಯಾಗ’ ಕೈಂಕರ್ಯ ಕೂಡ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತಿದ್ದು, ಯಶಸ್ಸಿಗಾಗಿ ನೂರಾರು ಸ್ವಯಂಸೇವಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
ಮಾ.1 ರಿಂದಲೇ ಕ್ಷೇತ್ರದಲ್ಲಿ ನಿರಂತರವಾಗಿ ಫಲಹಾರ, ಅನ್ನದಾನ ಸೇವೆ ನಡೆಯುತ್ತಿದೆ. ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಬಿಸಿಗಾಳಿಯ ಹೊಡೆತ ತಟ್ಟಿದರೂ ಭಕ್ತರಿಗಾಗಿ ಆರಾಮದಾಯಕ ಊಟೋಪಚಾರಕ್ಕೆ ಮಾಡಿರುವ ವ್ಯವಸ್ಥೆ ಅಚ್ಚುಕಟ್ಟಾಗಿದ್ದು,ಆಸ್ತಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಭೋಜನ ವ್ಯವಸ್ಥೆಯ ಸ್ಥಳಕ್ಕೆ ಜರ್ಮನ್ ಟೆಂಟ್ ಅಳವಡಿಸಿ ತಂಪಾದ ಗಾಳಿಗಾಗಿ ಎರೋಪ್ಲಾನ್ ಪ್ಯಾನ್ ಅಳವಡಿಕೆ ಮಾಡಲಾಗಿದೆ.
ಕ್ಷೇತ್ರಕ್ಕೆ ಬರುವ ಭಕ್ತರ ವಾಹನಗಳ ನಿಲುಗಡೆಗೂ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲವನ್ನೂ ಸ್ವಯಂಸೇವಕರ ತಂಡ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.