ಕೆಲವು ಕಂಪನಿಗಳು ಭಾರೀ ಮೊತ್ತದ ಬಿಲ್ ವಂಚನೆ ಮಾಡುತ್ತಿದವೆ ಎನ್ನುತ್ತಿರುವ ವಿದ್ಯುತ್ ಕಂಪನಿಗಳು ಬಡಪಾಯಿ ಗುಡಿಸಲುವಾಸಿಗಳ ಮೇಲಷ್ಟೇ ದರ್ಪ ತೋರಿಸುತ್ತಿವೆ. ಕರೆಂಟ್ ಬಿಲ್ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಪವರ್ ಕಟ್ ಮಾಡಲು ಮುಂದಾದ ಬೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ಅಟ್ಟಾಡಿಸಿ ಥಳಿಸಿದ ಘಟನೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಸಿರಾ ಬಳಿ ನಡೆದಿದೆ.
ಬೆಸ್ಕಾಂ ಸಿಬ್ಬಂದಿಗೆ ಅಟ್ಟಾಡಿಸಿ ಕಲ್ಲು, ದೊಣ್ಣೆಗಳಲ್ಲಿ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ಈ ಘಟನೆಯ ದೃಶ್ಯ ವೈರಲ್ ಆಗಿದೆ.
ಶಿರಾ ತಾಲೂಕಿನ ಚಿಕ್ಕನಕೋಟೆ ಗೊಲ್ಲರಹಟ್ಟಿಯಲ್ಲಿ, ವಿದ್ಯುತ್ ಬಿಲ್ ವಸೂಲಿಗಾಗಿ ತೆರಳಿದ್ದ ಬೆಸ್ಕಾಂ ಸಿಬ್ಬಂದಿ ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸದೆ, ವಿದ್ಯುತ್ ಸಂಪರ್ಕ ಕಡಿಯುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕುಪಿತರಾದ ಗ್ರಾಮಸ್ಥರು ರೊಚ್ಚಿಗೆದ್ದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಬೆಸ್ಕಾಂನ ಶಾಖಾಧಿಕಾರಿ ರಾಜಣ್ಣ ಎಂಬವರಿಗೆ ಗಂಭೀರ ಗಾಯಗಳಾಗಿದೆ. ಲೈನ್ಮ್ಯಾನ್ಗಳಾದ ಭೂತರಾಜು, ನರಸಿಂಹರಾಜು, ತಿಪ್ಪೇಸ್ವಾಮಿ ಎಂಬವರ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಗಾಯಾಳುಗಳು ಶಿರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪಟ್ಟನಾಯಕನಹಳ್ಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.






















































