‘ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ’ ಮಾರ್ಗದ ಪ್ಯಾಕೇಜ್ ಟೂರ್..!
![]()
ಬೆಂಗಳೂರು: ಆಷಾಢ ಸಮೀಪಿಸುತ್ತಿದ್ದಂತೆಯೇ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತಯಾರಿಯಲ್ಲಿರುವ ಆಸ್ತಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮ KSRTC ಸಿಹಿ ಸುದ್ದಿಯನ್ನು ನೀಡಿದೆ. ವಿವಿಧ ದೇವಾಲಯಗಳ ಯಾತ್ರೆ ಸಂಬಂಧ ಹೊಸ ಟೂರ್ ಪ್ಯಾಕೇಜನ್ನು KSRTC ಪರಿಚಯಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ‘ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ’ ಮಾರ್ಗದಲ್ಲಿ ‘ಅಶ್ವಮೇಧ ಕ್ಲಾಸಿಕ್’ ಬಸ್ ಮೂಲಕ ಪ್ಯಾಕೇಜ್ ಟೂರನ್ನು ಘೋಷಿಸಿದೆ. ವಾರಾಂತ್ಯದ ದಿನಗಳಲ್ಲಿ (ಶನಿವಾರ & ಭಾನುವಾರ) ಈ ಪ್ಯಾಕೇಜ್ ಟೂರ್ (ಪ್ರವೇಶ ಶುಲ್ಕ, ಉಪಹಾರ, ಊಟ ಹೊರತುಪಡಿಸಿ) ಪರಿಚಯಿಸಲಾಗಿದೆ.
ಜೂನ್ 28ರಿಂದ ಈ ಕ್ಷೇತ್ರ ಯಾತ್ರೆ ಆರಂಭಗೊಳ್ಳಲಿದೆ. ಮುಂಗಡ ಬುಕಿಂಗ್ ಸೇರಿ ವಯಸ್ಕರಿಗೆ ತಲಾ 600 ರೂಪಾಯಿ ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ 450 ರೂಪಾಯಿ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ‘ಪ್ಯಾಕೇಜ್ ಟೂರ್’ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು ಉಪಯೋಗಿಸುವ www.ksrtc.in ಅಥವಾ www.ksrtc.karnataka.gov.in ವೆಬ್ಸೈಟ್ ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಈ ಬಗ್ಗೆ 080-26252625, 7760990100, 7760990560, 7760990287 ದೂರವಾಣಿ ಸಂಖ್ಯೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.