ಮೈಸೂರು: ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಕರ್ನಾಟಕ ರಾಜ್ಯದ ರಾಜಕಾರಣದಲ್ಲೂ ಬದಲಾವಣೆಯ ಮುನ್ಸೂಚನೆ ನೀಡಿದಂತಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ಯಾತ್ರೆ’ ಹಳೇ ಮೈಸೂರು ಭಾಗದಲ್ಲಿ ಯಶಸ್ವಿಯಾಗಿ ಸಾಗಿದ್ದು, ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆ ಸಾಗಿದ ಹಾದಿಯುದ್ದಕ್ಕೂ ಜನಸಮುದ್ರ ಹರಿದಂತೆ ಭಾಸವಾಯಿತು.
ಕೇರಳದಲ್ಲಿ ಆರಂಭವಾದ ಈ ಐಕ್ಯತಾ ಯಾತ್ರೆ ಶುಕವಾರದಂದು ಚಾಮರಾಜನಗರ ಮೂಲಕ ಕರುನಾಡನ್ನು ಪ್ರವೇಶಿಸಿ ಮುನ್ನುಗ್ಗುತ್ತಿದೆ. ಭಾರೀ ಜನಸ್ತೋಮವು ರಾಹುಲ್ ಸೈನ್ಯವನ್ನು ಕರ್ನಾಟಕಕ್ಕೆ ಬರಮಾಡಿಕೊಂಡಿದ್ದು, ಎರಡನೇ ದಿನವಾದ ಶನಿವಾರವೂ ಅನಿರೀಕ್ಷಿತ ಸಂಖ್ಯೆಯಲ್ಲಿ ಜನ ಈ ಯಾತ್ರೆಯಲ್ಲಿ ಭಾಗಿಯಾದರು.
‘ಸಿದ್ದರಾಮೋತ್ಸವ’ದ ಯಶಸ್ಸಿನ ನಂತರ ಪ್ರದೇಶ ಕಾಂಗ್ರೆಸ್ನ ಮತ್ತೊಂದು ಯಶೋಗಾಥೆಗೆ ‘ಭಾರತ್ ಜೋಡೋ ಯಾತ್ರೆ’ ವೇದಿಕೆಯಾದಂತಿದೆ. ಶನಿವಾರ ಬೆಳಿಗ್ಗೆ ಪಾದಯಾತ್ರೆ ಉತ್ಸಾಹಕ್ಕೆ ಮಳೆರಾಯ ಅಡ್ಡಿಯಾದರೂ ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಜನಪ್ರವಾಹವೇ ಯಾತ್ರೆಯತ್ತ ಹರಿದುಬಂತು. ಈ ಸನ್ನಿವೇಶ ಕಂಡು ಸ್ವತಃ ‘ಕೈ’ ಧುರೀಣರೇ ಪುಳಕಿತರಾದರು.
ಶನಿವಾರದ ಜನಸ್ತೋಮ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ‘ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ನಂಜನಗೂಡು ಪ್ರವೇಶಿಸಿದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಹರ್ಷೋದ್ಗಾರದೊಂದಿಗೆ ಸ್ವಾಗತ ಕೋರಿತು. ವ್ಯಕ್ತವಾಗುತ್ತಿರುವ ಈ ಜನಬೆಂಬಲ ಕಂಡು ನಿಜಕ್ಕೂ ಆಶ್ಚರ್ಯವಾಗಿದೆ. ಇಷ್ಟು ದೊಡ್ಡ ಮಟ್ಟದ ಸ್ಪಂದನೆಯನ್ನು ನಾನು ಕೂಡ ನಿರೀಕ್ಷಿಸಿರಲಿಲ್ಲ ಎಂದರು.
ಕಾಂಗ್ರೆಸ್ ಯಾತ್ರೆಗೆ ಪ್ರಚಾರ ಕೊಟ್ಟಿದ್ದೇ ಬಿಜೆಪಿ ಕಾರ್ಯಕರ್ತರು?
ಇತ್ತೀಚೆಗೆ ನಡೆದ ‘ಸಿದ್ದರಾಮೋತ್ಸವ’ ಬಗ್ಗೆ ಬಿಜೆಪಿ ಕಾರ್ಯಕರ್ತರು ಮಾಡಿದ ಬಗೆಬಗೆಯ ಟೀಕೆಗಳೇ ಆ ಕಾರ್ಯಕ್ರಮಕ್ಕೆ ಭರ್ಜರಿ ಪ್ರಚಾರ ತಂದುಕೊಟ್ಟಿತ್ತು. ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ಬಿಜೆಪಿಯ ಸೋಷಿಯಲ್ ಮೀಡಿಯಾ ಶೂರರು ಹರಿಯಬಿಡುತ್ತಿರುವ ಟೀಕೆಗಳೇ ಇದೀಗ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯ ಯಶಸ್ಸಿಗೂ ಕಾರಣವಾಗುತ್ತಿವೆ.
ಪ್ರಸ್ತುತ ರಾಜ್ಯ ಸರ್ಕಾರದ ಸಾಲು ಸಾಲು ಹಗರಣಗಳಿಂದಾಗಿ, ಪರ್ಸಂಟೇಜ್ ಕರ್ಮಕಾಂಡಗಳ ಆರೋಪಗಳಿಂದಾಗಿ ಬಿಜೆಪಿ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಅದರಂತೆಯೇ ಬಿಜೆಪಿಯ ಸೋಷಿಯಲ್ ಮೀಡಿಯಾ ಶೂರರ ಅನಗತ್ಯ ಟೀಕೆಗಳ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೇ ಒಲವಿಲ್ಲ ಎಂಬಂತಿದೆ. ಈ ಬೆಳವಣಿಗೆಯನ್ನೇ ಕಾಂಗ್ರೆಸ್ ಬಳಸಿಕೊಳ್ಳುತ್ತಿರುವುದು.
ಬಿಜೆಪಿಯ ವೈಫಲ್ಯಗಳೇ ವರದಾನ?
ಇತ್ತೀಚೆಗಷ್ಟೇ ನಡೆದ ‘ಸಿದ್ದರಾಮೋತ್ಸವ’ ಕಾರ್ಯಕ್ರಮದಲ್ಲಿ ವ್ಯಕ್ತವಾದ ಜನಶಕ್ತಿ ಪ್ರದರ್ಶನವು ರಾಜ್ಯದ ಆಡಳಿತಾರೂಢ ಬಿಜೆಪಿಗೆ ‘ಬದಲಾವಣೆ ಸನ್ನಿಹಿತ’ ಎಂಬ ಸಂದೇಶವನ್ನು ರವಾನಿಸಿದಂತಿತ್ತು. ಅನಂತರ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಮೂಲಕ ‘ಸಿದ್ದರಾಮೋತ್ಸವ’ಕ್ಕೆ ಸೆಡ್ಡು ಹೊಡೆಯುವ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನವೂ ವಿಫಲವಾಯಿತು. ಇತ್ತ ದೊಡ್ಡಬಳ್ಳಾಪುರ ಬಳಿ ಲಕ್ಷಾಂತರ ಜನರನ್ನು ಸೇರಿಸುವುದಾಗಿ ಹೇಳಿಕೊಂಡ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರಯತ್ನವೂ ಕೈಗೂಡಲಿಲ್ಲ. ಬಿಜೆಪಿಯ ಮಂಗಳೂರು, ದೊಡ್ಡಬಳ್ಳಾಪುರ ಕಾರ್ಯಕ್ರಮಗಳೆಡರ ವೈಫಲ್ಯಕ್ಕೂ ಸಿಎಂ ಬೊಮ್ಮಾಯಿ ಸೈನ್ಯವು ಆರೆಸ್ಸೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾರಣ ಎಂಬುದು ಕೇಸರಿ ಪಾಳಯದ ಮೊಗಸಾಲೆಯಲ್ಲಿ ಹರಿದಾಡುತ್ತಿರುವ ಮಾತುಗಳು. ಬಹುಶಃ ಬಿಜೆಪಿಯೊಳಗಿನ ಇಂತಹಾ ವೈಫಲ್ಯಗಳೇ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.