‘ಮುಡಾ’ ಹಗರಣದಲ್ಲಿ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಯತ್ನಾಳ್ ಆರೋಪ.. HDK, BSY ಕುಟುಂಬದ ವಿರುದ್ದವೂ ತನಿಖೆಯಾಗಲಿ, ಯತ್ನಾಳ್ ಹೊಸ ಬಾಂಬ್.. ಕಾಂಗ್ರೆಸ್ ಜೊತೆ ವಿಜಯೇಂದ್ರ ಅಡ್ಜೆಸ್ಟ್ಮೆಂಟ್ ರಾಜಕಾರಣ ಎಂದು ಆಕ್ರೋಶ.. ಲೋಕಸಭಾ ಚುನಾವಣೆಯಲ್ಲಿ ಅನೇಕರನ್ನ ಸೋಲಿಸಲು ಈ ನಾಯಕರು ಹೊಂದಾಣಿಕೆ ನಡೆದಿದೆ ಎಂದೂ ಆರೋಪ..
ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ‘ಮುಡಾ’ ಹಗರಣದಲ್ಲಿ ಬಿಜೆಪಿ ನಾಯಕರ ಕೈವಾಡವೂ ಇದೆ ಎಂದು ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆದರೆ, ಇದರಲ್ಲಿ ಕುಮಾರಸ್ವಾಮಿ ಇದ್ದಾರೋ? ಯಡಿಯೂರಪ್ಪ-ವಿಜಯೇಂದ್ರ ಕುಟುಂಬದವರು ಇದ್ದಾರಾ? ಎಂಬ ಬಗ್ಗೆ ಗೊತ್ತಾಗುತ್ತದೆ ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಹೇಳಿಕೆ ನೀಡಿರುವ ಬಸನಗೌಡಾ ಪಾಟೀಲ ಯತ್ನಾಳ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಅವರು ಬಿಜೆಪಿಯಲ್ಲಿ ಇದ್ದಾಗಲೇ ಹಗರಣ ನಡೆದಿದೆ. ಈಗ ಅವರು ಹಗರಣ ಮುಚ್ಚಿ ಹಾಕಲು ಕಾಂಗ್ರೆಸ್ ಸೇರಿದ್ದಾರೆ ಎಂದು ದೂರಿದ್ದಾರೆ. ರಾಜೀವ ಯಾರ ನಿರ್ದೇಶನದ ಮೇಲೆ ಕಾಂಗ್ರೆಸ್ ಸೇರಿದ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ ಎಂದೂ ಹೇಳಿದ್ದಾರೆ. ರಾಜೀವ್ ಯಡ್ಡಿಯೂರಪ್ಪ ಶಿಷ್ಯನೋ, ವಿಜಯೇಂದ್ರ ಶಿಷ್ಯನೋ ಯಾರೆಂದು ಅವರೇ ಹೇಳಬೇಕು. ನಿಮ್ಮ ಶಿಷ್ಯ ಇದ್ದಾನೆ ಏಕೆ ಪಾದಯಾತ್ರೆ ಮಾಡುತ್ತಿದ್ದೀರಿ ಎಂದು ವಿಜಯೇಂದ್ರನನ್ನು ಕೇಳಬೇಕು ಎಂದವರು ನೀಡಿರುವ ಹೇಳಿಕೆ ಕೂಡಾ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ.
ಈ ಹಗರಣದಲ್ಲಿ ಕೇವಲ ಸಿದ್ಧರಾಮಯ್ಯ ಅವರನ್ನ ಮಾತ್ರ ಗುರಿ ಮಾಡಬೇಡಿ. ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಅವರು ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಒಗಟು ಒಗಟಾಗಿ ಮಾತನಾಡಿರುವ ಯತ್ನಾಳ್, ಇದು ಕೇವಲ ಸಿದ್ಧರಾಮಯ್ಯ ವಿರುದ್ದ ಹೋರಾಟ ಅಲ್ಲ ಕಾಂಗ್ರೆಸ್ ವಿರುದ್ಧ ಹೋರಾಟ ಅಂತ ಎಂದು ನಮ್ಮ ವಿಜಯೇಂದ್ರ ಹೇಳುತ್ತಾರೆ. ಹಾಗಾದ್ರೆ ಸಿದ್ಧರಾಮಯ್ಯ ಯಾರು? ಬೇರೆನಾ, ಬಿಜೆಪಿಯವರಾ? ಎಂದು ಪ್ರಶ್ನಿಸಿದ ಯತ್ನಾಳ್, ಮುಡಾ ಹಗರಣದಲ್ಲಿ ಯಡ್ಡಿಯೂರಪ್ಪ ಇದ್ದಾರೋ, ವಿಜಯೇಂದ್ರ ಇದ್ದಾರೋ, ಯಡ್ಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ, ರಾಜೀವ್ ಅದರೋ, ಮತ್ಯಾರು ಇದ್ದಾರೆ ಎಲ್ಲರೂ ಸಿಕ್ಕಿ ಬೀಳುತ್ತಾರೆ. ಹಾಗಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಅವರು ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ ಅನೇಕರನ್ನ ಸೋಲಿಸಲು ಈ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದರು. ಯಡ್ಡಿಯೂರಪ್ಪ, ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ ಖಾನ್ ಎಲ್ಲರೂ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದೂ ಯತ್ನಾಳ್ ಆರೋಪಿಸಿದರು.