ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ‘KSRTC’ ಸಮೂಹದಲ್ಲಿ ಸೇವೆಯಲ್ಲಿದ್ದಾಗ ಮೃತಪಟ್ಟಿರುವ 35 ಸಿಬ್ಬಂದಿಯ ಅವಲಂಬಿತರಿಗೆ 8.22 ಕೋ.ರೂ. ಪರಿಹಾರವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿತರಿಸಿದರು. ಶುಕ್ರವಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ಸೇವೆಯಲ್ಲಿರುವಾಗ ಅಪಘಾತದಿಂದ ಮೃತಪಟ್ಟ ನಾಲ್ವರು ಸಿಬ್ಬಂದಿಯ ಅವಲಂಬಿತರಿಗೆ ತಲಾ ರೂ.1 ಕೋಟಿಯಂತೆ ರೂ. 4 ಕೋಟಿ ಪರಿಹಾರ ವಿತರಣೆ ಮಾಡಿದರು.
ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ 28 ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.14 ಲಕ್ಷದಂತೆ, ರೂ. 3.92 ಕೋಟಿ ಪರಿಹಾರ, ಮೂವರು ಮೃತ ಸಿಬ್ಬಂದಿಗಳ ಅವಲಂಬಿತರಿಗೆ ರೂ.10 ಲಕ್ಷದಂತೆ ರೂ.30 ಲಕ್ಷ ಪರಿಹಾರ ವಿತರಿಸಲಾಯಿತು.
ಸಾರಿಗೆ ವಿಮಾ ಯೋಜನೆ ಮೂಲಕ ನಿಗಮವು ತನ್ನ ಸಿಬ್ಬಂದಿ ಸಮೂಹದ ಕುಟುಂಬಗಳಿಗೂ ಆಧಾರವಾಗಿ ನಿಂತಿದೆ. ಈ ಯೋಜನೆಯನ್ವಯ ಈ ಪರಿಹಾರವನ್ನು ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಏನಿದು ಸಾರಿಗೆ ಸುರಕ್ಷಾ ವಿಮಾ ಯೋಜನೆ?
ಸಂಸ್ಥೆಯು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟಲ್ಲಿ ರೂ.1 ಕೋಟಿ ಅಪಘಾತ ವಿಮಾ ಪರಿಹಾರ ಒದಗಿಸುವ ಸಾರಿಗೆ ಸುರಕ್ಷಾ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯನ್ವಯ ಇದುವರೆವಿಗೂ 34 ಪ್ರಕರಣಗಳಲ್ಲಿ ಕುಟುಂಬದವರಿಗೆ ತಲಾ ರೂ. 1 ಕೋಟಿಗಳಂತೆ ಒಟ್ಟು ರೂ.34.00 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ.
ನೌಕರರ ಕುಟುಂಬ ಕಲ್ಯಾಣ ಪರಿಹಾರ ಯೋಜನೆ: (ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಪರಿಹಾರ)
ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರಿಗೆ ಆರ್ಥಿಕ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಪರಿಹಾರ ಮೊತ್ತವಾದ ರೂ. 3 ಲಕ್ಷಗಳನ್ನು ರೂ.10 ಲಕ್ಷಗಳಿಗೆ ದಿನಾಂಕ: 01.11.2023 ರಿಂದ ಹೆಚ್ಚಿಸಲಾಗಿದೆ.
ದಿನಾಂಕ: 01.09.2025 ರಿಂದ ಜಾರಿಗೆ ಬರುವಂತೆ ಸದರಿ ಮೊತ್ತವನ್ನು ರೂ.10 ಲಕ್ಷದಿಂದ ರೂ.14 ಲಕ್ಷ ಗಳಿಗೆ ಹೆಚ್ಚಿಸಲಾಗಿದೆ.
ಫೆ.06ರಂದು 28 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ ರೂ.14.00 ಲಕ್ಷಗಳಂತೆ ಒಟ್ಟು ರೂ.3.92 ಕೋಟಿ ಹಾಗೂ 3 ಪ್ರಕರಣಗಳಲ್ಲಿ ರೂ.10 ಲಕ್ಷದಂತೆ ಒಟ್ಟು ರೂ.30 ಲಕ್ಷ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.
ಈವರೆಗೂ 187 ಸಿಬ್ಬಂದಿಗಳ ಅವಲಂಭಿತರಿಗೆ ತಲಾ ರೂ.10 ಲಕ್ಷದಂತೆ ಒಟ್ಟು ರೂ.1.87 ಕೋಟಿಗಳ ಪರಿಹಾರ ನೀಡಲಾಗಿದೆ.
ಅದೇ ರೀತಿ ಈವರೆಗೂ 30 ಪ್ರಕರಣಗಳಲ್ಲಿ ತಲಾ ರೂ.14 ಲಕ್ಷದಂತೆ ಒಟ್ಟು ರೂ.4.20 ಕೋಟಿಗಳ ಪರಿಹಾರ ವಿತರಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವನ ಹೇಳಿ, ಸಿಬ್ಬಂದಿಗಳ ಅಕಾಲಿಕ ಅಗಲಿಕೆಯಿಂದ ಉಂಟಾದ ಅತೀವ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ತಮ್ಮಕುಟುಂಬಕ್ಕೆ ಕರುಣಿಸಲಿ ಎಂದು ತಿಳಿಸಿದರು.
ಮೃತರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿಯನ್ನು ನಾಲ್ಕು ನಿಗಮದಲ್ಲಿ ಚಾಲಕ, ನಿರ್ವಾಹಕ, ಕರಾಸಾ ಪೇದೆ ಮತ್ತು ತಾಂತ್ರಿಕ ಸಿಬ್ಬಂದಿಗಳ ಹುದ್ದೆಗೆ ತ್ವರಿತ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಹಾಗೂ ಕಿರಿಯ ಸಹಾಯಕ ಹುದ್ದೆಗೆ ಅವಶ್ಯವಿರುವ ವಿದ್ಯಾರ್ಹತೆ ಇದ್ದಲ್ಲಿ ಜೇಷ್ಠತೆ ಅನುಸಾರ ನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೃತ ಅವಲಂಬಿತರಿಗೆ ಅನುಕಂಪದ ಹುದ್ದೆಯನ್ನು ಅತ್ಯಂತ ಪಾರದರ್ಶಕವಾಗಿ ನೀಡುತ್ತಿದ್ದು, ಯಾವುದೇ ಬಾಹ್ಯ ಒತ್ತಡ ಅಥವಾ ಇನ್ನಿತರೆ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಈಗ ನೀಡುತ್ತಿರುವ ಪರಿಹಾರ ಮೊತ್ತವನ್ನು ಯಾರಿಗೂ ನೀಡದೆ ತಮ್ಮ ಹಾಗೂ ತಮ್ಮ ಕುಟುಂಬದ ರಕ್ಷಣೆಗಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ, ಇತರೆ ಒಳ್ಳೆಯ ಕಾರ್ಯಗಳಿಗೆ ಮತ್ತು ಬ್ಯಾಂಕ್ ನಲ್ಲಿ ಮಾತ್ರ FD ಇಡಬೇಕು, ಅದು ಬಿಟ್ಟು ಅತಿಯಾದ ಬಡ್ಡಿ ಆಸೆಗಾಗಿ ಬೇರೆಲ್ಲೂ ಹಣ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಈವರೆಗೂ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ 1400 ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ನಮ್ಮ ಸಾರಿಗೆ ಸಿಬ್ಬಂದಿಗಳ ಕುಟುಂಬದೊಂದಿಗೆ ನಾವು ಸದಾ ನಿಲ್ಲುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾರಸಾ ನಿಗಮದ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ನಿರ್ದೇಶಕರು (ಸಿಬ್ಬಂದಿ ಮತ್ತು ಜಾಗೃತ) ಗಾಯಿತ್ರಿ ಕೆ.ಎಂ., ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



























































