ಮೇಕೆದಾಟು ವಿವಾದ.. ತಮಿಳುನಾಡಲ್ಲಿ ಪ್ರತಿಭಟನೆ.. ಸಂಸತ್ತಿನಲ್ಲಿ ಪ್ರಜ್ವಲ್ರಿಂದ ಪ್ರತಿಧ್ವನಿ
ದೆಹಲಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನಲ್ಲಿ ಅಣ್ಣಾಮಲೈ ಹೋರಾಟ ನಡೆದಿದ್ದರೆ, ಅತ್ತ ಸಂಸತ್ತಿನಲ್ಲಿ ಜೆಡಿಎಸ್ ಸಂಸದ ಪ್ರಜ್ಚಲ್ ರೇವಣ್ಣ ಕೇಂದ್ರ ಹಾಗೂ ತಮಿಳುನಾಡು ಸರ್ಕಾರಗಳ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಗುರುವಾರ ಲೋಕಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಕುರಿತಂತೆ ಪ್ರಸ್ತಾಪಿಸಿದರು. ಇದಕ್ಕೆ ಅಡ್ಡಿಯಾಗಿರುವ ಸಂಗತಿಗಳತ್ತ ಬೊಟ್ಟು ಮಾಡಿದರು.
ಆದರೆ ಈ ಯೋಜನೆ ಸಂಬಂಧ ಕರ್ನಾಟಕ ಸರ್ಕಾರ ಸಲ್ಲಿಸಿರುವ ಡಿಪಿಆರ್ (ಸಮಗ್ರ ಯೋಜನಾ ವರದಿ)ಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಹಮತ ಅಗತ್ಯವಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸ್ಪಷ್ಟನೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. ಆದರೆ ರಾಜ್ಯಗಳ ಸಹಮತವೂ ಅಗತ್ಯವಿದೆ. ಹಾಗಾಗಿ ತಮಿಳುನಾಡು ಹಾಗೂ ಪುದುಚೇರಿ ರಾಜ್ಯ ಸರ್ಕಾರಗಳ ಅನುಮತಿಯೂ ಬೇಕಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ತಿಳಿಸಿದರು.
ಇದೇ ವೇಳೆ ಕರ್ನಾಟಕದ ಡಿಪಿಆರ್ಗೆ ಪರಿಸರ ಮತ್ತು ಅರಣ್ಯ ಸಚಿವಾಲಯ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಸಚಿವರು ಗಮನಸೆಳೆದರು.
ಬೊಮ್ಮಾಯಿ ಸರ್ಕಾರಕ್ಕೆ ಮಾಹಿತಿ ಹಂಚಿಕೊಂಡ ಪ್ರಜ್ವಲ್..
ಈ ಕುರಿತಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಪ್ರಜ್ವಲ್ ರೇವಣ್ಣ, ಲೋಕಸಭೆಯ ಅಧಿವೇಶನದಲ್ಲಿ ಇಂದು ಮೇಕೆದಾಟು ಯೋಜನೆಯ ಪರ ಧ್ವನಿ ಎತ್ತುವ ಮೂಲಕ ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು ಅನ್ನೋದನ್ನು ಪ್ರತಿಪಾದಿಸಿದೆ, ಕಾವೇರಿ ನೀರಿನ ವಿಚಾರದಲ್ಲಿ ಅನ್ಯರಾಜ್ಯಗಳಿಗೆ ಅನ್ಯಾಯವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ ನಿರ್ವಹಿಸುವ ಮೂಲಕ ಮೇಕೆದಾಟು ಯೋಜನೆಯನ್ನು ರಾಜ್ಯ ಪ್ರಾರಂಭಿಸುತ್ತದೆ ಎಂದಿದ್ದಾರೆ.
ಈ ಯೋಜನೆಗೆ ಒಕ್ಕೂಟ ಸರ್ಕಾರ ಶೀಘ್ರವೇ ಅನುಮತಿ ನೀಡಬೇಕು, ರಾಜ್ಯ ಬಿಜೆಪಿ ಸರ್ಕಾರ ಕೂಡ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು ಎಂದು ಪ್ರಜ್ವಲ್ ಆಗ್ರಹಿಸಿದ್ದಾರೆ.
ಈ ಯೋಜನೆಗೆ ಒಕ್ಕೂಟ ಸರ್ಕಾರ ಶೀಘ್ರವೇ ಅನುಮತಿ ನೀಡಬೇಕು, ರಾಜ್ಯ ಬಿಜೆಪಿ ಸರ್ಕಾರ ಕೂಡ ಒಕ್ಕೂಟ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆಗೆ ಅನುಮತಿ ಪಡೆಯಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇನೆ.
— Prajwal Revanna (@iPrajwalRevanna) August 5, 2021