ಬೆಂಗಳೂರು: ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಆಸ್ತಿಕ ಸಮುದಾಯಕ್ಕೆ ಸರ್ಕಾರ ಸಂತಸದ ಸುದ್ದಿಯನ್ನು ನೀಡಿದೆ. ಆಸ್ತಿಕ ಸಮುದಾಯದಲ್ಲಿ ಈ ಬಾರಿಯ ಮಹಾಶಿವರಾತ್ರಿ ಮಹಾ ಉತ್ವವಾಗಿ ಆಚರಿಸಲು ಸರ್ಕಾರ ಆದೇಶಿಸಿದೆ. ಈ ಸಂಬಂಧ ಮುಜರಾಯಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸೂಚಿತ ಶಿವಾಲಯಗಳಲ್ಲಿ ಅದ್ಧೂರಿ ಆಚರಣೆಗೆ ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗಷ್ಟೇ ಅಯೋಧ್ಯೆಯ ಶ್ರೀರಾಮ ದೇಗುಲದಲ್ಲಿನ ದೇವರ ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಆದೇಶಿಸಿದ್ದರು. ಇದೀಗ ಮಹಾಶಿವರಾತ್ರಿ ಸಂದರ್ಭದಲ್ಲಿ ರಾಜ್ಯದ ಶಿವಾಲಯಗಳಲ್ಲಿ ಅದ್ಧೂರಿ ಉತ್ಸವ ಆಚರಣೆಗೆ ಸಚಿವ ರಾಮಲಿಂಗ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಸಚಿವರ ನಿರ್ದೇಶನದಂತೆ ಮುಜರಾಯಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ..?
ರಾಜ್ಯದಲ್ಲಿ ಶಾಂತಿ, ಸಂಯಮದೊಂದಿಗೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಉಂಟಾಗಲೆಂದು ಲೋಕ ಕಲ್ಯಾಣಾರ್ಥವಾಗಿ ಭಗವಂತನಾದ ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸುವ ಮೂಲಕ ಮತ್ತು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಪ್ರಾಂತೀಯ ಕಲೆಗಳು ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಾಗೂ ಹಬ್ಬಗಳ ಆಚರಣೆಯನ್ನು ಪುನರುಜೀವನಗೊಳಿಸುವ ಸಲುವಾಗಿ ಇವುಗಳೊಂದಿಗೆ ಯಕ್ಷಗಾನ, ವೀರಭದ್ರ /ಡೊಳ್ಳು ಕುಣಿತ, ದೇಸೀಯ ವಾದ್ಯಗಳು ಭರತ ನಾಟ್ಯ, ಭಕ್ತಿ ಗೀತೆಗಳು ಸಾಂಪ್ರದಾಯಿಕ ಜಾನಪದ ಕಲೆಗಳು ಪಾರಂಪರಿಕ ಸ್ಥಳಿಯ ಕಿರು ನಾಟಕಗಳಾದ ದಕ್ಷಯಜ್ಞ, ಶನಿ ಮಹಾತ್ಮ ಮುಂತಾದ ಶಿವ ಸಂಬಂಧ ಕಿರು ನಾಟಕಗಳನ್ನು ಹಾಗೂ ಶಿವ ಪುರಾಣ ಕಥಾ ಶ್ರವಣ ಇವೇ ಮುಂತಾದವುಗಳನ್ನು ನಡೆಸುವ ಮೂಲಕ ಮರೆಯಾಗುತ್ತಿರುವ ಕಲೆಗಳನ್ನು ಉಳಿಸಿ/ ಬೆಳೆಸಿದಂತಾಗುವ ಜೊತೆಗೆ ಶಿವರಾತ್ರಿಯನ್ನೂ ಸಹ ವಿಶೇಷವಾಗಿ ಆಚರಿಸಿದಂತಾಗುತ್ತದೆ.
ಆದ್ದರಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ಶಿವನ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅನುವು ಮಾಡಿಕೊಂಡು ಅದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸುವ ಮೂಲಕ 08.03.2024 ರಂದು ಮಹಾ ಶಿವರಾತ್ರಿ ಹಬ್ಬವನ್ನು ಯಶಸ್ವಿಯಾಗಿ ಆಚರಿಸಲು ಸೂಚಿಸಿದೆ.
ಹೀಗಿರುತ್ತೆ ಶಿವರಾತ್ರಿ ವಿಶೇಷತೆ..!
-
ಶಿವರಾತ್ರಿಯ ಹಬ್ಬದ ದಿನದಂದು ವಿಶೇಷವಾಗಿ ಸಂಕಲ್ಪಿಸಿ ಆ ದಿನ ಪ್ರಾಂತ: ಕಾಲದಿಂದ ಮಧ್ಯಾಹ್ನದವರೆಗೆ ಯಾವುದಾದರೊಂದು ಸೂಕ್ತ ಸಮಯದಲ್ಲಿ ದೇವಾಲಯದ ದೈನಂದಿನ ಪೂಜಾಧಿಗಳಿಗೆ ಧಕ್ಕೆಯಾಗದಂತೆ ರುದ್ರಾಭೀಷೇಕ ಮತ್ತು ರುದ್ರ ಹೋಮ ಪೂಜಾ ಕಾರ್ಯಗಳನ್ನು ವಿಶೇಷವಾಗಿ ನಡೆಸುವುದು.
-
ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆ ಆಟ (ಗೊಂಬೆ ನಾಟಕ) ಕೋಲಾಟ ಇವುಗಳನ್ನು ನಡೆಸುವ ಬಗ್ಗೆ ಸಂಬಂಧಪಟ್ಟ ಕಲಾವಿದರ ಲಭ್ಯತೆ ತಿಳಿದು ಇವುಗಳನ್ನು ಆಯೋಜಿಸುವುದು.
-
ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ವೀರಭದ್ರ ಕುಣಿತ/ ಡೊಳ್ಳು ಕುಣಿತ, ದೇಸೀಯ ವಾದ್ಯಗಳು ಭರತ ನಾಟ್ಯ, ಭಕ್ತಿ ಗೀತೆಗಳು ಸಾಂಪ್ರದಾಯಿಕ ಜಾನಪದ ಕಲೆಗಳು ಪಾರಂಪರಿಕ ಸ್ಥಳೀಯ ಕಿರು ನಾಟಕಗಳಾದ ದಕ್ಷಯಜ್ಞ, ಶನಿ ಮಹಾತ್ಮ ಮುಂತಾದ ಶಿವ ಸಂಬಂಧ ಕಿರು ನಾಟಕಗಳು ಹಾಗೂ ಶಿವ ಪುರಾಣ ಕಥಾ ಶ್ರವಣ ಇವೇ ಮುಂತಾದವುಗಳನ್ನು ಆಯೋಜಿಸುವುದು.
-
ಈ ಮೇಲ್ಕಂಡ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವುದು. ಈ ಮೇಲ್ಕಂಡ ಸಾಂಸ್ಕೃತಿಕ ಕಲೆಗಳು ಲಭ್ಯವಾಗದಿದ್ದಲ್ಲಿ ಸ್ಥಳೀಯವಾಗಿ ಆಯಾಯ ಪ್ರಾಂತ್ಯಗಳಲ್ಲಿ ಜಿಲ್ಲೆಗಳಲ್ಲಿ ಮರೆಯಾಗುತ್ತಿರುವ ಯಾವುದಾದರೊಂದು ಲಭ್ಯವಾಗಬಹುದಾದ ಸಾಂಸ್ಕೃತಿಕ ಕಲೆ /ಧಾರ್ಮಿಕ ಕಲೆಯನ್ನು ಗಮನಿಸಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಅದಕ್ಕನುಗುಣವಾಗಿ ಪೂರ್ವ ಸಿದ್ಧತೆ / ವ್ಯವಸ್ಥೆಗಳನ್ನು ಮಾಡಿಕೊಂಡು ಶಿವರಾತ್ರಿ ಹಬ್ಬದ ದಿನದಂದು ವಿಶೇಷವಾಗಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದು.